31.4 C
Sidlaghatta
Tuesday, March 19, 2024

ಮುಚ್ಚುತ್ತಿರುವುದಕ್ಕೆ ಪರ್ಯಾಯ?

- Advertisement -
- Advertisement -

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ವೇದಿಕೆಯ ಮುಖಾಂತರ ರಾಜ್ಯ ಸರಕಾರ ನಡೆಸುತ್ತಿರುವ ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚುವ, ಮುಚ್ಚದಿರುವ ಕುರಿತು ಮಾತುಗಳು ಉದುರುತ್ತಲೇ ಇವೆ. ಯಾವುದು ಸತ್ಯ ಯಾವುದು ಸುಳ್ಳು ಎಂದು ನಿರ್ಧರಿಸಲಾರದ ಸ್ಥಿತಿಯೊಳಗೆ ಕೇವಲ ಪಾಲಕರಷ್ಟೇ ಅಲ್ಲ, ಅಧಿಕಾರಿಗಳೂ ಕೂಡ ಇದ್ದಾರೆ, ಮಂತ್ರಿ ಮಹೋದಯರ ಹೇಳಿಕೆಗಳು ಮತಾಧಾರಿತವೇ ವಿನಃ ಮತ್ತೇನೂ ಅಲ್ಲ.
ವಾಸ್ತವದ ಸಂಗತಿಯೆಂದರೆ ರಾಜ್ಯದ ಪಟ್ಟಣ ಪ್ರದೇಶದ ಶಾಲೆಗಳು ಸೇರಿದಂತೆ, ನೂರಾರು ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿದೆ. ಬಹುತೇಕ ಇಲ್ಲಿನ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಎರಡಂಕಿಯಲ್ಲೂ ಇಲ್ಲ. ಹೀಗಿದ್ದಾಗ ಅವುಗಳಲ್ಲಿ ಕೆಲವನ್ನು ಮುಚ್ಚಿ, ಅಕ್ಕಪಕ್ಕದಲ್ಲಿ ಇರುವ ಶಾಲೆಯೊಂದಿಗೆ ಸಂಯೋಜನೆಗೊಳಿಸುವ ವಿಚಾರವು ಚಾಲ್ತಿಯಲ್ಲಿದೆ. ಯಾವುದೇ ಕಾರಣಕ್ಕೂ ಇರುವ ಶಾಲೆಗಳನ್ನು ಮುಚ್ಚಬಾರದೆಂದು ಹಲವು ಸಂಘ ಸಂಸ್ಥೆಗಳು, ಹಿರಿಕರು ಹಕ್ಕೋತ್ತಾಯಕ್ಕೂ ಇಳಿದಿದ್ದಾರೆ. (ಇವರಾರೂ ತಮ್ಮ ಮಕ್ಕಳನ್ನು ಅಂಥ ಶಾಲೆಗಳಿಗೆ ಕಳಿಸುತ್ತಿಲ್ಲ ಎಂಬುದು ಪ್ರತ್ಯೇಕ ವಿಷಯ) ನಮ್ಮದೆಂಬ ಮೋಹ ಇರಬೇಕಾದದ್ದೇನೋ ಸರಿ. ಆದರೆ ಎಷ್ಟು ಕಾಲ ಅಂತ ಮೋಹದಲ್ಲಿ ಇಂಥವುಗಳನ್ನು ನಡೆಸಲು ಸಾಧ್ಯ?.
ಒಂದು ಶಾಲೆಯನ್ನು ನಡೆಸುವುದೆಂದರೆ ಸಾಮನ್ಯ ಸಂಗತಿಯಲ್ಲ. ಅದಕ್ಕೆ ಬೇಕಾದ ಕಟ್ಟಡ, ಪೀಠೋಪಕರಣ, ಪಾಠೋಪಕರಣಗಳ ಜೊತೆ ಅಗತ್ಯವಿರುವಷ್ಟು ಶಿಕ್ಷಕರನ್ನು ಒದಗಿಸಬೇಕು, ಅವರಿಗೆಲ್ಲ ಪ್ರತಿ ತಿಂಗಳೂ ಸಂಬಳವನ್ನು ನೀಡಬೇಕು. ಅದಕ್ಕೆ ತಗಲುವ ಒಟ್ಟು ವೆಚ್ಚ ಎಷ್ಟು? ಎಷ್ಟಾದರೂ ಸರಿ – ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅಲ್ಲಿ ಅಧ್ಯಯನ ಮಾಡುತ್ತಿದ್ದರೆ ಮಾಡುವ ವೆಚ್ಚದ ಪ್ರಸ್ತಾಪ ಅಪ್ರಸ್ತುತ, ಆದರೆ ವಿದ್ಯಾರ್ಥಿಗಳೇ ಇಲ್ಲದಾಗಲು ಶಾಲೆಗಳನ್ನು ನಡೆಸುವುದು ಎಂದಾದರೆ, ವೆಚ್ಚವನ್ನು ಪರಿಗಣಿಸುವುದು, ಅರ್ಥಿಕ ನಷ್ಟವನು ಪರಿಗಣಿಸುವುದು ಅಗತ್ಯವಾಗಿಬಿಡುತ್ತದೆ. ಅದರೊಟ್ಟಿಗೆ ಅಗತ್ಯ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತರಗತಿಯಲ್ಲಿ ಇರದಿದ್ದರೆ, ಶಾಲೆ ನಡೆಸುವುದು ಅವೈಜ್ಞಾನಿಕವೂ ಆಗಿಬಿಡುತ್ತದೆ. ಹೀಗಾದಾಗ ಅಂಥ ಶಾಲೆಗಳನ್ನು ಮುಚ್ಚುವ ಮತ್ತು ಅಲ್ಲಿ ಇರುವ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಗೆ ಪಕ್ಕದ ಶಾಲೆಯಲ್ಲಿ ಪ್ರವೇಶ ನೀಡುವ ಕ್ರಮ ತಪ್ಪೆಂದು ವಾದಿಸಲು ಕಾರಣಗಳು ಇಲ್ಲ. ಆದರೆ ಹೀಗೆ ಮಾಡುವ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಬಹಳ ಮುಖ್ಯ. ಯಾವು ಯಾವುದೇ ದೊಡ್ಡವರು ರಾಜಕಾರಣಿಗಳ ತೆವಲಿಗನುಗುಣವಾಗಿ ಯಾವೂದೇ ಶಾಲೆಯನ್ನು ಇನ್ನಾವುದೇ ಶಾಲೆಯೊಂದಿಗೆ ವಿಲೀನಗೊಳಿಸುವುದಲ್ಲ. ಬದಲಿಗೆ 8-10 ಕಿ.ಮೀ ವ್ಯಾಪ್ತಿಯಲ್ಲಿ ಇದ್ದುದರಲ್ಲೇ ಅತ್ಯಂತ ಸುಸಜ್ಜಿತವಾದ ಸೌಲಭ್ಯವುಳ್ಳ ಉಳಿದ ನಾಲ್ಕಾರು ಶಾಲೆಗಳಿಗೆ ಕೇಂದ್ರವಾದ, ಓಡಾಟಕ್ಕೆ ಅನುಕೂಲವಾದ ಶಾಲೆಯೊಂದನ್ನು ಮುಲಾಜಿಲ್ಲದೆ ಆಯ್ಕೆ ಮಾಡಿಕೊಳ್ಳುವುದು ಸೂಕ್ತ, ಮತ್ತು ಆ ಶಾಲೆಗೆ ಹೋಗಿ, ಬರುವ ವಿದ್ಯಾರ್ಥಿಗಳಿಗೆ ಸೂಕ್ತ ವಾಹನದ ವ್ಯವಸ್ಥೆ ಕಲ್ಪಿಸುವುದು ಒಂದು ಜವಾಬ್ದಾರಿ, ಮನೆಯಿಂದಲೇ ಶಾಲೆಗೆ ಹೋಗಿ ಬರುತ್ತಿದ್ದ ಚಿಕ್ಕಮಕ್ಕಳಿಗೆ ಯಾವುದೋ ಒಂದು ಸರಕಾರಿ ವಸತಿ ನಿಲಯವನ್ನು ನೀಡುತ್ತೇವೆಂದರೆ ಆಗದು, ಯಾಕೆಂದರೆ ಬಹಳಷ್ಟು ಪಾಲಕರು, ವಸತಿ ನಿಲಯದಲ್ಲಿ ತಮ್ಮ ಮಕ್ಕಳನ್ನು ಬಿಡಲು ಇಷ್ಟಪಡದೆ ಹೋಗಬಹುದು, ಒಂದೊಮ್ಮೆ ವಸತಿ ನಿಲಯಗಳಲ್ಲಿಟ್ಟು ಮಕ್ಕಳನ್ನು ಓದಿಸಬೇಕಾದರೆ, ಸರಕಾರ ನಿಗದಿಗೊಳಿಸುವ ವಸತಿ ನಿಲಯಗಳಲ್ಲೇ ಯಾಕೆ ಬಿಡಬೇಕು? ಹೀಗೆಲ್ಲ ಯೋಚನೆಗಳು ಬಂದಾಗ, ಬರಬಹುದಾದ ಮಕ್ಕಳನ್ನು ಕಳೆದುಕೊಳ್ಳುವ ಅಪಾಯವೇ ಅಧಿಕ.
ನಡೆಯುವಷ್ಟು ಶಾಲೆಗಳಾದರೂ ಚೆನ್ನಾಗಿ ನಡೆಯಬೇಕು, ಬರುವಷ್ಟು ಮಕ್ಕಳಾದರೂ ಖುಷಿಯಿಂದ ಬಂದು ಹೋಗುವಂತಾಗಬೇಕು, ಕನ್ನಡದ ಉಳಿವಿಗಾಗಿ ಕನ್ನಡ ಶಾಲೆಗಳನ್ನು ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೂ ಅಷ್ಟೇ ಮುಖ್ಯ ಅಲ್ಲಿಗೆ ಬರುವ ವಿದ್ಯಾರ್ಥಿಗಳನ್ನು ಕಾಪಾಡಿಕೊಳ್ಳುವುದು. ಆರೋಗ್ಯ ಮತ್ತು ಶಿಕ್ಷಣದ ವಿಷಯಕ್ಕೆ ಬಂದಾಗ ಸರಕಾರ ಕೇವಲ ಲಾಭಗಳಿಕೆಯನ್ನಷ್ಟೇ ಲಕ್ಷಿಸುವುದಲ್ಲ. ಇದನ್ನು ಅನುಲಕ್ಷಿಸಿಯೇ ನಮ್ಮಲ್ಲಿ ವಾಜಪೇಯಿ ಆರೋಗ್ಯಶ್ರೀ ಜಾರಿಗೆ ಬಂತು. ಎಲ್ಲೋ ಯಾವುದೇ ಸಂದರ್ಭದಲ್ಲಿ ಅಪಘಾತವಾದರೂ 108 ರ ವಾಹನ ಅಲ್ಲಿಗೆ ಬಂದು ರಕ್ಷಣಾ ಕಾರ್ಯವೆಸಗಿ – ಅಪಘಾತಕ್ಕೆ ಒಳಗಾದವರನ್ನು ಸಮೀಪದ ಆಸ್ಪತ್ರೆಗೆ ಸೇರಿಸುವ ಬಹುದೊಡ್ಡ ಜವಾಬ್ದಾರಿಯನ್ನು ನಿರ್ವಹಿಸುವಂತಾಗಿದೆ. ರೋಗಿಗಳ ಮನೆ ಬಾಗಿಲಿಗೆ ಬಂದು ಅವರನ್ನು ಆಸ್ಪತ್ರೆಗೆ ಸೇರಿಸುವ ಸ್ತುತ್ಯಾರ್ಹ ಕಾರ್ಯ ಇದರಿಂದಾಗಿ ನೆರವೇರುತ್ತಿದೆ. ಅನೇಕರ ಜೀವವನ್ನು ಉಳಿಸಿದ ಕೀರ್ತಿ ಸರ್ಕಾರಕ್ಕೆ ಸಲ್ಲಬೇಕು. ಒಂದು ಜೀವದ ಉಳಿವಿನ ಎದುರು ಆರ್ಥಿಕ ನಷ್ಟ ನಗಣ್ಯ. ಹೀಗಾಗಿ ಇಂದು ಇದು ಅತ್ಯಂತ ಜನಪ್ರಿಯವಾಗಿದೆ. ನಮ್ಮ ಘನ ಸರ್ಕಾರಕ್ಕೆ 108 ವಾಹನ ವ್ಯವಸ್ಥೆ ಕಲ್ಪಿಸುವ ಇಚ್ಛಾಶಕ್ತಿ ಪ್ರಾಪ್ತವಾದ ಪರಿಯಲ್ಲೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಾಹನದ ವ್ಯವಸ್ಥೆ ಕಲ್ಪಿಸಿ ಅತೀ ಕಡಿಮೆ ಮಕ್ಕಳಿರುವ ಶಾಲಾ ಮಕ್ಕಳನ್ನು ಕೇಂದ್ರದ ಇನ್ನೊಂದು ಶಾಲೆಗೆ ಕರೆದುಕೊಂಡು ಹೋಗಿ ಕರೆದುಕೊಂಡು ಬಂದು ಮನೆ ಮುಟ್ಟಿಸುವ ಜವಾಬ್ದಾರಿ ಹೊತ್ತರೆ ಒಳ್ಳೇಯದಾಗುತ್ತದೆ. ಅಂಥó ವಾಹನಗಳಿಗೆ ‘ಕನ್ನಡವಾಹಿನಿ’ ಎಂದು ಬೇಕಾದರೆ ನಾಮಕರಣ ಮಾಡಬಹುದು. ಕನ್ನಡ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ದಿನೇ – ದಿನೇ ಕ್ಷೀಣಿಸುತ್ತಿರುವಾಗ – ಸುರಕ್ಷಿತವಾಗಿ ನಮ್ಮ ಮಕ್ಕಳು ಶಾಲೆಯೊಂದಕ್ಕೆ ಮನೆಯಿಂದಲೇ ಹೋಗಿಬರಲು ಅನುಕೂಲತೆಯಿದೆ ಎಂದಾದರೆ ಅನೇಕ ಪಾಲಕರು – ತಮ್ಮ ಮಕ್ಕಳನ್ನು ಅಲ್ಲಿಗೆ ನೆಮ್ಮದಿಯಿಂದ ಕಳಿಸಿಕೊಡಬಹುದು.
ಕನ್ನಡ ಶಾಲೆಗಳಿಗೆ ಕಳಿಸಿದರೆ ತಮ್ಮ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗದೆಂಬ ಭರವಸೆ ಪಾಲಕರಲ್ಲಿ ಮೂಡುವಂತೆ ಮಾಡಬೇಕಾದದ್ದು ಇಂದಿನ ಅಗತ್ಯ. ಹೀಗಾಗಿ ನಡೆಸುವ ಶಾಲೆಗಳನ್ನು ವ್ಯವಸ್ಥಿತವಾಗಿ ನಡೆಸುವಂತಾಗಬೇಕು. ಅಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳ ಜೊತೆಗೆ ಅಗತ್ಯ ಪ್ರಮಾಣದಲ್ಲಿ ಶಿಕ್ಷಕರ ನಿಯೋಜನೆಯಾಗಬೇಕು. ಬಹಳಷ್ಟು ಶಿಕ್ಷಕರು ಇಂದು ನಗರ ಮೋಹಿಗಳಾಗಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ವಾಸ್ತವ್ಯ ಮಾಡುವವರ ಸಂಖ್ಯೆ ಗಣನೀಯವಾಗಿ ತಗ್ಗಿದೆ. ನಗರದ ಸೌಲಭ್ಯಗಳು ಗ್ರಾಮೀಣ ಪ್ರದೇಶಗಳಲ್ಲಿ ದೊರಕುವುದಿಲ್ಲ. ಸೂಕ್ತವಾದ ಮನೆ ಬಾಡಿಗೆಗೆ ದೊರಕುವುದಿಲ್ಲ ಎಂಬ ಕಾರಣಕ್ಕಿಂತ, ತಮ್ಮ ಮಕ್ಕಳ ವಿದ್ಯಾಭ್ಯಾಸದ ಯೋಚನೆ ಇವರನ್ನು ಕಾಡುತ್ತಿರುತ್ತದೆ. ತಾವೇ ಶಿಕ್ಷಕರಾದರೂ ತಮ್ಮ ಮಕ್ಕಳನ್ನು ತಮ್ಮ ಶಾಲಗೇ ಸೇರಿಸುವುದರ ಕುರಿತ ಅವರು ಮೀನಾಮೇಷ ಎಣಿಸುವುದರ ಹಿಂದೆ, ಅವರಿಗೆ ಅಲ್ಲಿನ ಪರಿಸ್ಥಿತಿಯ ಪರಿಚಯವಿರುವುದು ಕಾರಣವಾಗಿರುತ್ತದೆ, ಜೊತೆಗೆ ಅವರಿಗೆ ಅವರು ನೀಡುವ ಶಿಕ್ಷಣದ ಕುರಿತಾಗಿಯೂ ಅನುಮಾನಗಳಿರುವಂತೆ ಅನ್ನಿಸುತ್ತದೆ. ಅದೇನೇ ಇದ್ದರೂ ಸದ್ಯಕ್ಕೆ ವಾಸ್ತವವನ್ನು ಒಪ್ಪಿಕೊಂಡೇ ಸುಧಾರಣೆಯತ್ತ ಗಮನಹರಿಸುವುದಾದರೆ, ಅಂಥ ಶಿಕ್ಷಕರೂ ಕೂಡ ಸಕಾಲದಲ್ಲಿ ಶಾಲೆಗೆ ಬಂದು ಹೋಗಿ ಮಾಡಲು ಈ ವಿದ್ಯಾರ್ಥಿಗಳಿಗೆ ಒದಗಿಸುವ ವಾಹನ ಸೌಲಭ್ಯವನ್ನೆ ವಿಸ್ತರಿಸಬಹುದು. ಹೀಗಾದಾಗ ಶಿಕ್ಷಕರೂ ಸಮಾಧಾನದಿಂದ ಶಾಲೆಗೆ ಬಂದು ಪಾಠ ಪ್ರವಚನಗಳಲ್ಲಿ ತೊಡಗಿಕೊಳ್ಳಲು ಸಾಧ್ಯ. ಇಲ್ಲವಾದಲ್ಲಿ ಬರುವ ಬಸ್ ಹಿಡಿಯುವ ಯೋಚನೆಯಲ್ಲೇ ಅವರ ಸಾಮಥ್ರ್ಯ ವ್ಯಯವಾಗಬಹುದು! ಇದರೊಂದಿಗೆ ಶಿಕ್ಷಕರೊಟ್ಟಿಗೇ ಮಕ್ಕಳೂ ಸೇರಿ ಒಂದೇ ವಾಹನದಲ್ಲಿ ಬಂದು, ಹೋಗುವಂತಾದರೆ, ಆ ಬಂದು ಹೋಗುವ ಅವಧಿ ಕೂಡ ಒಂದಲ್ಲ ಒಂದು ರೀತಿಯಿಂದ ಉಪಯುಕ್ತವಾಗಬಹುದು.
ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಬಹುದಾದ ಇನ್ನೊಂದು ಸಂಗತಿಯೆಂದರೆ ಶಾಲಾಭಿವೃದ್ಧಿ ಸಮಿತಿಯ ಪಾತ್ರ. ಶಾಲೆಯೊಂದರ ಸರ್ವತೋಮುಖ ಅಭಿವೃದ್ಧಿಯನ್ನು ಬಯಸಿ, ಸದುದ್ಧೇಶದಿಂದಲೇ ಸರಕಾರ ಪ್ರತಿ ಶಾಲೆಗೂ ಒಂದು ಶಾಲಾಭಿವೃದ್ಧಿ ಸಮಿತಿಯನ್ನು ರಚಿಸಿಕೊಳ್ಳಲು ಮಾರ್ಗದರ್ಶನ ನೀಡಿದೆ. ಆದರೆ ಬಹುತೇಕ ಕಡೆಗಳಲ್ಲಿ ಈ ಸಮಿತಿ ಎಂಬುದು ಕೇವಲ ರಾಜಕಾರಣಿಗಳ ಕೂಟವಾಗಿದ್ದುದು ವಿಪರ್ಯಾಸ. ಶಾಲಾಭಿವೃದ್ಧಿಯ ಕುರಿತು ಚರ್ಚೆಗೆ, ಸೂಕ್ತ ಕ್ರಮ ಕೈಗೊಳ್ಳುವದಕ್ಕಿಂತ ಹೆಚ್ಚಿನ ಉತ್ಸಾಹ ತೋರುವಂತಾದದ್ದು ದುರಂತವೇ ಸರಿ. ಶಾಲೆಯ ಪಠ್ಯ, ಪಠ್ಯೇತರ ಚಟುವಟಿಕೆಗಳ ಕುರಿತು ನಿರ್ಧಾರ ಕೈಗೊಳ್ಳಲು, ಕ್ರಮ ಕೈಗೊಳ್ಳಲು ಶಿಕ್ಷಕರು ಸ್ವತಂತ್ರರಾಗಿದ್ದು, ಅದಕ್ಕೆ ಅಗತ್ಯವಾದದ್ದನ್ನು ಹೊರಗಿನಿಂದ ಪೂರೈಸಲಷ್ಟೇ ಈ ಸಮಿತಿ ಬದ್ಧವಾದರೆ ಒಳ್ಳೆಯದೇನೋ, ಒಂದರೊಳಗೊಂದು ಬೆರೆತು ಕಲಸು ಮೇಲೋಗರವಾಗುವುದಕ್ಕಿಂತ, ಅವರವರ ಜವಾಬ್ದಾರಿ ಕರ್ತವ್ಯದ ನಡುವೆ ಒಂದು ನಿರ್ದಿಷ್ಟ ಗಡಿಯನ್ನು ಗುರುತಿಸಿಕೊಳ್ಳುವುದೂ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದು.
ಚುನಾವಣೆಯನ್ನು ಲಕ್ಷದಲ್ಲಿರಿಸಿಕೊಂಡು, ಮತಗಳಿಕೆಯನ್ನು ಮಾನದಂಡವನ್ನಾಗಿಸಿಕೊಂಡು, ಮತ್ತೆ ಕೆಲವೊಂದು ಪ್ರಭಾವಿ ಸಂಘ, ಸಂಸ್ಥೆಗಳ ವ್ಯಕ್ತಿಗಳ ಒತ್ತಡಕ್ಕೆ ಮಣಿದು ದಿನಕ್ಕೊಂದು ಹೇಳಿಕೆ ನೀಡುವ ಬದಲು ಮುಚ್ಚ ಬೇಕಾದವುಗಳನ್ನು, ಮುಚ್ಚಲೇ ಬೇಕಾದ ಅನಿವಾರ್ಯತೆಯನ್ನು ಸ್ಪಷ್ಟವಾಗಿ ತಿಳಿಸುವುದಲ್ಲದೆ, ಮುಚ್ಚಿದರೆ ಮಾಡುವ ಪರ್ಯಾಯ ವ್ಯವಸ್ಥೆ ಕುರಿತು ಮುಕ್ತವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದು ಸೂಕ್ತ. ದಿಟ್ಟ ನಿರ್ಧಾರವನ್ನು ಕೈಗೊಳ್ಳದೆ ದಿನದೂಡುವುದರಿಂದ ಮಕ್ಕಳಿಗೂ ಪಾಲಕರಿಗೂ ಮುಂದೇನೆಂಬ ಚಿಂತೆಯಾದರೆ, ಇಂಥಲ್ಲಿ ಕರ್ತವ್ಯ ನಿರ್ವಹಿಸಲು ಬಂದ ಶಿಕ್ಷಕರೂ ಉತ್ಸಾಹವನ್ನು ಕಳೆದುಕೊಳ್ಳುತ್ತ, ಶುದ್ಧ ಸೋಮಾರಿಗಳಾಗಿ ಮತ್ತೆಂದೂ ಉಪಯೋಗಕ್ಕೆಬಾರದಂತವರಾಗಿ ಬಿಡುವ ಆಪಾಯ ಕೂಡ ಇದೆ. ಸೂಕ್ತ ನಿರ್ಧಾರವನ್ನು ಸೂಕ್ತ ಸಮಯದಲ್ಲಿ ತೆಗೆದುಕೊಂಡು ಚಾಲ್ತಿಗೆ ತರದೆ, ಪುರುಸೊತ್ತಾದಾಗ ನೋಡೋಣವೆಂದು ಕುಳಿತು ಬಿಟ್ಟರೆ ನಾಳೆಗೆ ಪ್ರಯೋಜನಕ್ಕೆ ಬಾರದೆ ಹೋಗಬಹುದು.
ರವೀಂದ್ರ ಭಟ್ ಕುಳಿಬೀಡು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!