ಜನಜಾನುವಾರುಗಳಿಗೆ ಅಗತ್ಯವಾದ ನೀರಿನ ಹೋರಾಟವೂ ಕೂಡ ಕನ್ನಡದ ಹೋರಾಟ ಆಗಿದೆ. ಬಯಲು ಸೀಮೆಗೆ ಬೇಕಾದ ಶಾಶ್ವತ ನೀರಿಗಾಗಿ ಕನ್ನಡದ ಮನಸ್ಸುಗಳು ದನಿ ಎತ್ತಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಕನ್ನಡಪರ ಸಂಘಟನೆಗಳ ಒಕ್ಕೂಟ) ರಾಜ್ಯ ಘಟಕದ ಅಧ್ಯಕ್ಷ ಶಿವರಾಮೇಗೌಡ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಕನ್ನಡಪರ ಸಂಘಟನೆಗಳ ಒಕ್ಕೂಟ) ಆಯೋಜಿಸಿದ್ದ ತಾಲ್ಲೂಕು ಕನ್ನಡಿಗರ ಸಮಾವೇಶದಲ್ಲಿ ಅವರು ಮಾತನಾಡಿದರು.
ಸ್ಥಳೀಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು, ಜನಪರ ಚಿಂತನೆಯ ಜನಪ್ರತಿನಿಧಿಯನ್ನು ಆರಿಸುವುದು, ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಎಲ್ಲವೂ ಕನ್ನಡದ ಕೆಲಸವೇ. ಭಾಷೆಯೆಂದರೆ ಕೇವಲ ಮಾತು ಮತ್ತು ಬರವಣಿಗೆಯಲ್ಲ. ನಮ್ಮ ಸಮಾಜ, ವ್ಯವಸ್ಥೆ, ಬದುಕು, ಸಂಸ್ಕೃತಿ ಭಾಷೆಯಲ್ಲಿ ಸೇರಿಕೊಂಡಿರುತ್ತದೆ. ಕನ್ನಡದ ಹೋರಾಟವೆಂದರೆ ಭಾಷೆಯನ್ನು ಉಳಿಸಿ ಬೆಳೆಸುವುದರೊಂದಿಗೆ ನಮ್ಮ ಜನರ ಜೀವನವನ್ನು ಸರಿಪಡಿಸುವ ಕೆಲಸವೂ ಒಳಗೊಳ್ಳುತ್ತವೆ ಎಂದು ಹೇಳಿದರು.
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎ.ಮಂಜುನಾಥ್ ಮಾತನಾಡಿ, ಯುವಕರು ಒಗ್ಗೂಡಬೇಕು. ಸಮಾಜದ ವಿವಿಧ ತಾರತಮ್ಯಗಳನ್ನು ಬದಿಗೊತ್ತಿ, ಭಾಷೆಯ ಮಂತ್ರದಂಡದೊಂದಿಗೆ ನಾವೆಲ್ಲಾ ಸಮಾಜದ ಸುಧಾರಣೆಗೆ ಪಣತೊಡೋಣ. ಕನ್ನಡದ ಮಣ್ಣಿನ ಮಹತ್ವವನ್ನು ಹೆಚ್ಚಿಸೋಣ ಎಂದರು.
ಕರವೇ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ತಾಲ್ಲೂಕು ಅಧ್ಯಕ್ಷ ಶ್ರೀಧರ್, ಚಂದ್ರು, ಧನುಷ್, ಅಪ್ಪು, ರವಿ, ಮೂರ್ತಿ, ವಿಜಿಕುಮಾರ್, ರೈತ ಸಂಘದ ಜಿಲ್ಲಾ ಘಟಕದ ಅಧರ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ರವಿಕುಮಾರ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -