ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪರಿಸರ ಮಾಲಿನ್ಯ ತಡೆಗಟ್ಟಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಯುವಜನರ ಪಾತ್ರ ಮಹತ್ತರವಾದದ್ದು ಎಂದು ಬೆಂಗಳೂರಿನ ಕೊಶಿಸ್ ವಿದ್ಯಾಸಂಸ್ಥೆಯ ಎನ್.ಎಸ್.ಎಸ್ ವ್ಯವಸ್ಥಾಪಕ ಮಧುಸೂದನ್ ಜೋಷಿ ತಿಳಿಸಿದರು.
ನಗರದ ಸಿದ್ದಾರ್ಥನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೆಂಗಳೂರಿನ ಕೊಶಿಸ್ ಆಸ್ಪತ್ರೆ ಹಾಗೂ ಕೊಶಿಸ್ ವಿದ್ಯಾಸಂಸ್ಥೆಯ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಏರ್ಪಡಿಸಲಾಗಿದ್ದ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ವರಿಗೂ ಉತ್ತಮ ಆರೋಗ್ಯ ಹಾಗು ಸ್ವಚ್ಚ ಪರಿಸರ ದೊರಕಬೇಕು ಎಂಬ ಸಾಮಾಜಿಕ ಕಳಕಳಿಯಿಂದ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಹೆಚ್ಚಾಗುತ್ತಿರುವ ಕೈಗಾರೀಕರಣ, ಮಾನವರಿಂದ ಪರಿಸರದ ಮೇಲೆ ಆಗುತ್ತಿರುವ ನಿರಂತರ ದಬ್ಬಾಳಿಕೆ ಸ್ವಚ್ಚತೆಯ ಕಡೆಗೆ ಜನರಲ್ಲಿರುವ ನಿರ್ಲಕ್ಷ್ಯ ಮನೋಭಾವನೆಯಿಂದಾಗಿ ಇಂದು ಪರಿಸರ ಸಂಪೂರ್ಣವಾಗಿ ನಾಶವಾಗುತ್ತಿದೆ. ವಾಯು ಮಾಲಿನ್ಯ, ಜಲಮಾಲಿನ್ಯದಿಂದ ದೇಶ ತತ್ತರಿಸುತ್ತಿದೆ. ನಾವು ಕುಡಿಯುವ ನೀರಿನಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗುತ್ತಿವೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ನಮ್ಮ ಸುತ್ತಮುತ್ತಲಿನ ಸ್ವಚ್ಚತೆ ಕಾಪಾಡುವ ಕೆಲಸವನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು ಎಂದರು.
ಸ್ವಚ್ಚತೆಯಿದ್ದರೆ ಮಾತ್ರವೇ ಉತ್ತಮವಾದ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ, ಸ್ವಚ್ಚವಾದ ಪರಿಸರವನ್ನು ನಾವು ನಿರ್ಮಾಣ ಮಾಡಿದರೆ, ಸರ್ಕಾರಗಳಿಗೆ ಕೋಟ್ಯಾಂತರ ರೂಪಾಯಿಗಳ ಹಣ ಉಳಿಕೆಯಾಗಲಿದೆ. ಕೇಂದ್ರ ಸರ್ಕಾರ ಸ್ವಚ್ಚ ಭಾರತ ಅಭಿಯಾನ ಯೋಜನೆಯಡಿ ಈಗಾಗಲೇ ಶೌಚಾಲಯಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಚರಂಡಿಗಳ ಸ್ವಚ್ಚತೆ, ಬೀದಿಗಳ ಸ್ವಚ್ಚತೆ, ನೀರಿನ ಮಿತಬಳಕೆ, ಬಳಕೆ ಮಾಡಿದ ನೀರನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ನಾಗರೀಕರು ಮುಂದಾದಲ್ಲಿ ಪರಿಸರ ಉತ್ತಮವಾಗಿರುತ್ತದೆ ಎಂದರು.
ಕೊಶಿಸ್ ವಿದ್ಯಾಸಂಸ್ಥೆಯ ಉಪನ್ಯಾಸಕರಾದ ಎನ್.ವೆಂಕಟೇಶ್, ಯಾನ್ಸಿ, ಮೇರಿ, ವಿದ್ಯಾರ್ಥಿಗಳಾದ ಕಾರ್ತಿಕ್, ವರುಣ್, ಸಂತೋಷ್, ಪ್ರಶಾಂತ್, ಪ್ರಿಯಾಂಕ, ಜಾನವಿ, ಶಿರಿಷಾ, ಮೀನಾ ಹಾಜರಿದ್ದರು.
- Advertisement -
- Advertisement -
- Advertisement -
- Advertisement -