‘ಎನ್ಪಿಎಸ್ ರದ್ದಾಗಲಿ, ನಿಶ್ಚಿತ ಪಿಂಚಣಿ ಜಾರಿಯಾಗಲಿ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರು ಹೋರಾಟ ಮಾಡುತ್ತಿದ್ದೇವೆ. ಜನವರಿ 20 ರಂದು ‘ಫ್ರೀಡಂ ಪಾರ್ಕ್ ಚಲೋ’ ಎಂಬ ಒಂದು ದಿನದ ಉಪವಾಸ ಧರಣಿಯನ್ನು ಹಮ್ಮಿಕೊಂಡಿದ್ದು ತಾಲ್ಲೂಕಿನಿಂದ ನೂರಾರು ಮಂದಿ ಸರ್ಕಾರಿ ನೌಕರರು ಬೆಂಗಳೂರಿಗೆ ತೆರಳುತ್ತಿರುವುದಾಗಿ ಎನ್ಪಿಎಸ್ ನೌಕರರ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎನ್.ಗಜೇಂದ್ರ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಏಪ್ರಿಲ್ 2006 ರ ನಂತರ ಸರ್ಕಾರಿ ಸೇವೆಗೆ ಸೇರಿರುವ ನೌಕರರಿಗೆ ಜಾರಿ ಮಾಡಿರುವ ಅವೈಜ್ಞಾನಿಕವಾದ ಹೊಸ ಪಿಂಚಣಿ ಯೋಜನೆ(ಎನ್ಪಿಎಸ್)ಯು ಗೊಂದಲ, ಅಭದ್ರತೆ ಹಾಗೂ ಅನಿಶ್ಚಿತತೆಯಿಂದ ಕೂಡಿದೆ. ಇದರಿಂದ ಪಿಂಚಣಿ ಅನಿಶ್ಚಿತವಾಗಿದೆ. ಜಿಪಿಎಫ್ ಸೌಲಭ್ಯವಿಲ್ಲ. ಕುಟುಂಬ ಪಿಂಚಣಿ, ಮರಣ ಹಾಗೂ ನಿವೃತ್ತಿ ಉಪದಾನವಿಲ್ಲ. ತುಟ್ಟಿಭತ್ಯೆ ಇಲ್ಲ, ಕನಿಷ್ಠ ಬರವಸೆಯೂ ಇಲ್ಲ. ಇದನ್ನು ರದ್ದುಗೊಳಿಸಿ ಹಳೆಯ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತಿದ್ದೇವೆ. ಈ ಬಗ್ಗೆ ತಾಲ್ಲೂಕಿನ ಸರ್ಕಾರಿ ನೌಕರರಿಗೆ ವಿಚಾರ ಸಂಕಿರಣ ನಡೆಸಿ ಅರಿವು ಮೂಡಿಸಲಾಗಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯಲಿರುವ ಒಂದು ದಿನದ ಉಪವಾಸ ಧರಣಿಗೆ ಕುಟುಂಬ ಸಮೇತರಾಗಿ ಭಾಗವಹಿಸಲು ತಾಲ್ಲೂಕಿನ ವಿವಿಧ ಇಲಾಖೆಗಳ ಸುಮಾರು 450 ಸರ್ಕಾರಿ ನೌಕರರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಎಲ್ಲ ಸರ್ಕಾರಿ ನೌಕರರು ಒಂದು ದಿನದ ಸಾಂದರ್ಭಿಕ ರಜೆಯನ್ನು ಹಾಕಿ ಪಾಲ್ಗೊಳ್ಳಬೇಕು. ಧರಣಿಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎನ್ಪಿಎಸ್ ನೌಕರರ ತಾಲ್ಲೂಕು ಘಟಕದ ವತಿಯಿಂದ ಪ್ರತಿಯೊಬ್ಬರಿಗೂ ಟೀ ಶರ್ಟ್, ಗಾಂಧಿ ಟೋಪಿ ಮತ್ತು ಸಂಘದ ಬಾವುಟವನ್ನು ನೀಡಲಾಗುವುದು. ನಮ್ಮ ಹೋರಾಟ ಏನಿದ್ದರೂ ಎನ್ಪಿಎಸ್ ವಿರುದ್ಧವಷ್ಟೇ. ಸರ್ಕಾರ, ಯಾವುದೇ ಪಕ್ಷ ಅಥವಾ ಸಂಘ ಸಂಸ್ಥೆಗಳ ವಿರುದ್ಧವಲ್ಲ ಎಂದು ಹೇಳಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಬಳಿಯಿಂದ ಫ್ರೀಡಂ ಪಾರ್ಕ್ ಹೋರಾಟಕ್ಕೆ ಬರುವವರಿಗೆಂದು ಬಸ್ ವ್ಯವಸ್ಥೆ ಮಾಡಲಾಗಿದೆ. ಬಸ್ಗಳು ಜನವರಿ 20 ರ ಬೆಳಿಗ್ಗೆ 7.30ಕ್ಕೆ ಹೊರಡುತ್ತವೆ. ನಮ್ಮ ಈ ಹೋರಾಟಕ್ಕೆ ನೈತಿಕ ಬೆಂಬಲದ ಅತ್ಯಗತ್ಯವಿದೆ ಎಂದು ನುಡಿದರು.
ಎನ್ಪಿಎಸ್ ನೌಕರರ ತಾಲ್ಲೂಕು ಘಟಕದ ಕಾರ್ಯದರ್ಶಿ ಎಸ್.ಎ.ನರಸಿಂಹರಾಜು, ಖಜಾಂಚಿ ಟಿ.ಟಿ.ನರಸಿಂಹಪ್ಪ, ಸಂಘಟನಾ ಕಾರ್ಯದರ್ಶಿ ಎಸ್.ಶಿವಶಂಕರ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೇಶವರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೆ.ಎನ್.ಸುಬ್ಬಾರೆಡ್ಡಿ, ಶಿಕ್ಷಕರಾದ ಗೋವಿಂದರಾಜುಲು, ಷರ್ಬುದ್ದೀನ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -