ತಾಲ್ಲೂಕಿನ ಗುಡಿಹಳ್ಳಿಯ ಪಾರ್ವತಾಂಬ ಸಮೇತ ಶ್ರೀ ಸೋಮೇಶ್ವರಸ್ವಾಮಿ ಬ್ರಹ್ಮರಥೋತ್ಸವವನ್ನು ಬುಧವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಹೇವಿಳಂಬಿನಾಮ ಸಂವತ್ಸರ ಮಾಘ ಮಾಸ ಬಹುಳ ಬುಧವಾರದ ವೃಷಭ ಮಹೂರ್ತದಲ್ಲಿ ನಡೆದ ಬ್ರಹ್ಮರಥೋತ್ಸವಕ್ಕೆ ಶಾಸಕ ಎಂ.ರಾಜಣ್ಣ ಮತ್ತು ಗ್ರೇಡ್ 2 ತಹಶೀಲ್ದಾರ್ ಮುನಿಕೃಷ್ಣಪ್ಪ ಚಾಲನೆ ನೀಡಿದರು.
ಸುತ್ತ ಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾದರು.
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡಿಹಳ್ಳಿ ಗ್ರಾಮದ ಶ್ರೀಪಾರ್ವತಾಂಬ ಸಮೇತ ಶ್ರೀಸೋಮೇಶ್ವರಸ್ವಾಮಿ ದೇವಾಲಯದ ೧೦ ನೇ ವರ್ಷದ ಬ್ರಹ್ಮ ರಥೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಸಿಂಗರಿಸಿ ವಿಶೇಷ ಪೂಜೆ, ಹೋಮ, ಹವನ, ಕಳಶ ಪೂಜೆ, ಗಣಪತಿ ಪೂಜೆ ನಡೆಸಿ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಉತ್ಸವ ಮೂರ್ತಿಯನ್ನು ಅಲಂಕೃತ ಹೂವಿನ ತೇರಿನಲ್ಲಿ ಪ್ರತಿಷ್ಠಾಪಿಸಿ ಊರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡಲಾಯಿತು. ಕರಡಿ ವೇಷ, ಗಾರುಡಿ ಗೊಂಬೆ, ತಮಟೆ, ನಾದಸ್ವರ, ವೀರಗಾಸೆ ಇನ್ನಿತರೆ ಜನಪದ ಕಲಾತಂಡಗಳು ರಥೋತ್ಸವಕ್ಕೆ ಕಳೆ ತಂದಿದ್ದವು. ದವನ ಸಿಕ್ಕಿಸಿರುವ ಬಾಳೆಹಣ್ಣನ್ನು ರಥದೆಡೆಗೆ ಎಸೆದು ಜನರು ಭಕ್ತಿಯಿಂದ ಪ್ರಾರ್ಥಿಸಿದರು.
ಪೋಟಿ ವೇಷ, ತಮಟೆ, ಡೋಲು ಮೆರವಣಿಗೆಯಲ್ಲಿದ್ದು, ಆಕರ್ಷಣೀಯವಾಗಿತ್ತು. ಭಕ್ತರಿಗೆ ಅನ್ನಸಂತರ್ಪಣೆಯನ್ನೂ ನಡೆಸಲಾಯಿತು.
ಬುರಗು ಬತಾಸಿನ ಅಂಗಡಿ, ಮಕ್ಕಳ ಆಟದ ಸಾಮಾನು, ಐಸ್ಕ್ರೀಂ, ಕೈ ಮೇಲೆ ಹಚ್ಚೆ ಹಾಕುವ, ಬಣ್ಣ ಬಣ್ಣದ ವಿವಿದ ಆಕಾರದ ಊಸರ ಬುಡ್ಡೆ(ಬಲೂನ್), ಜಡೆಕುಚ್ಚೆ, ಜಡೆ ಬಿಲ್ಲೆಯ ಅಂಗಡಿ, ಕಬ್ಬಿನ ರಸ, ಜಿಲೇಬಿ ಬಿಸಿ ಬಿಸಿ ಬೋಂಡ ಮುಂತಾದ ಅಂಗಡಿಗಳು ದೇವಾಲಯದ ಆಸು ಪಾಸಿನಲ್ಲಿ ತಲೆ ಎತ್ತಿದ್ದವು.
ರಾಜಸ್ವ ನಿರೀಕ್ಷಕ ವಿಶ್ವನಾಥ್, ಮುಖಂಡರಾದ ಚನ್ನಕೃಷ್ಣಪ್ಪ, ಮುನಿವೆಂಕಟಸ್ವಾಮಿ, ಶ್ರೀರಾಮಪ್ಪ, ಬಚ್ಚರಾಯಪ್ಪ, ದ್ಯಾವಪ್ಪ, ನರಸಿಂಹಮೂರ್ತಿ, ಆಗಮಿಕರಾದ ಗಣೇಶ್ ದೀಕ್ಷಿತ್, ಅರ್ಚಕರಾದ ನಂಜುಂಡಯ್ಯ, ನಾಗೇಂದ್ರ ಹಾಜರಿದ್ದರು.
- Advertisement -
- Advertisement -
- Advertisement -
- Advertisement -