ಹಳ್ಳಿಗಳಲ್ಲಿ ಸಾಮರಸ್ಯವನ್ನು ಕಾಪಾಡಿಕೊಂಡು ಸಾಮಾನ್ಯ ಜನರ ಜೀವನಕ್ಕೆ ತೊಂದರೆಯಾಗದಂತಹ ವಾತಾವರಣವನ್ನು ನಿರ್ಮಾಣ ಮಾಡಿಕೊಳ್ಳಬೇಕು ಎಂದು ಕೆ.ಪಿ.ಸಿ.ಸಿ.ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಗಂಗನಹಳ್ಳಿ ಗ್ರಾಮದಲ್ಲಿ ಕಳೆದ ಶನಿವಾರದಂದು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಯ ಸಂಧರ್ಭದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದಿದ್ದ ಘರ್ಷಣೆಯಲ್ಲಿ ಗಾಯಗೊಂಡಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಸೋಮವಾರ ಭೇಟಿ ಮಾಡಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪರವಾಗಿ ಸೇವೆ ಮಾಡುವಂತಹ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಲು ಇರುವ ಮಾರ್ಗ ಚುನಾವಣೆ. ಇಂತಹ ಚುನಾವಣೆಗಳಲ್ಲಿನು ಕೆಲವರು, ಸ್ವ-ಪ್ರತಿಷ್ಟೆಗಳು ಹಾಗೂ ಹಳೇ ದ್ವೇಷಗಳಿಗೆ ವೇದಿಕೆಯನ್ನಾಗಿ ದುರ್ಬಳಕೆ ಮಾಡಿಕೊಳ್ಳುವುದು ದುರಂತ. ಹಳ್ಳಿಗಳಲ್ಲಿ ಭಯದ ವಾತಾವರಣವನ್ನು ನಿರ್ಮಾಣ ಮಾಡಿ, ಜನಸಾಮಾನ್ಯರ ಜೀವನಗಳೊಂದಿಗೆ ಸೆಣಸಾಟವಾಡುವುದು ಖಂಡನೀಯವಾಗಿದೆ. ಪ್ರತಿನಿತ್ಯ ಒಂದೇ ಗ್ರಾಮದಲ್ಲಿ ವಾಸವಾಗಿರುವವರು ಪರಸ್ಪರ ಕಚ್ಚಾಡುವುದರಿಂದ ಸಾಮರಸ್ಯ ಹದಗೆಡುತ್ತದೆ. ಚುನಾವಣೆಯಲ್ಲಿ ನಡೆದ ಘರ್ಷಣೆಯ ವಿಚಾರದಲ್ಲಿ ಚುನಾವಣೆಯ ಅಧಿಕಾರಿಗಳು, ಸಿ.ಸಿ.ಕ್ಯಾಮಾರಾದಲ್ಲಿನ ವಿಡಿಯೋ ವೀಕ್ಷಣೆ ಮಾಡಿ, ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಅವರು ಯಾವುದೇ ಪಕ್ಷದ ಮುಖಂಡರಿರಲಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದರು.
ಈ ಸಂದರ್ಭದಲ್ಲಿ ದೌರ್ಜನ್ಯಕ್ಕೊಳಗಾದ ಗ್ರಾಮಸ್ಥರು,‘ಚುನಾವಣೆಯಲ್ಲಿ ನಡೆದ ಘರ್ಷಣೆಯಲ್ಲಿ ಜನರನ್ನು ರಕ್ಷಣೆ ಮಾಡಬೇಕಾಗಿದ್ದ ಪೊಲೀಸ್ ಅಧಿಕಾರಿಗಳು, ಯಾರದ್ದೋ ಪ್ರಭಾವಕ್ಕೆ ಒಳಗಾಗಿ ಮತಗಟ್ಟೆಯಿಂದ ಸುಮಾರು ೬೦೦ ಮೀಟರ್ಗೂ ಹೆಚ್ಚು ದೂರವಿದ್ದ ಕಾಂಗ್ರೆಸ್ ಮುಖಂಡರ ಮೇಲೆ ಹಲ್ಲೆ ಮಾಡುವ ಮೂಲಕ ಏಕಪಕ್ಷೀಯವಾಗಿ ನಡೆದುಕೊಂಡು ತಮ್ಮ ಅಪ್ರಾಮಾಣಿಕತೆಯನ್ನು ಪ್ರದರ್ಶನ ಮಾಡಿದ್ದಾರೆ. ಗಲಾಟೆಯೆಲ್ಲಾ ಮುಗಿದ ಮೇಲೆ ಏನೂ ಅರಿಯದ ಅಮಾಯಕ ಹುಡುಗರ ಮೇಲೆಯೂ ಕೂಡಾ ಹಲ್ಲೆ ಮಾಡಿ, ಬಲವಂತವಾಗಿ ಠಾಣೆಗೆ ಕರೆದೊಯ್ದು ಮಾನಸಿಕವಾಗಿ ಹಿಂಸೆ ಪಡಿಸಿದ್ದಾರೆ. ಅವರ ಮೇಲೆ ಕ್ರಮ ಜರುಗಿಸಬೇಕು’ ಎಂದು ಪಟ್ಟುಹಿಡಿದರು.
ಗ್ರಾಮಸ್ಥರನ್ನು ಸಮಾಧಾನಪಡಿಸಿದ ಕೆ.ಪಿ.ಸಿ.ಸಿ.ಉಪಾಧ್ಯಕ್ಷ ವಿ.ಮುನಿಯಪ್ಪ, ಒಂದು ಕಡೆ ವಿರೋಧ ಪಕ್ಷದವರಿಂದ ದೌರ್ಜನ್ಯಕ್ಕೆ ಒಳಗಾದ ನಂತರವೂ ಪೊಲೀಸ್ ಇಲಾಖೆಯ ಅಧಿಕಾರಿಗಳೂ ದೌರ್ಜನ್ಯ ನಡೆಸಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಗಮನಕ್ಕೂ ವಿಚಾರ ತರಲಾಗಿದ್ದು, ಯಾವುದೇ ಅಧಿಕಾರಿ ಉದ್ದೇಶಪೂರ್ವಕವಾಗಿ ತಪ್ಪು ಮಾಡಿದ್ದರೂ ಕೂಡಾ ಅವರ ಮೇಲೆ ಕಾನೂನಿನ ಪ್ರಕಾರ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಒತ್ತಾಯ ಮಾಡುತ್ತೇವೆ. ಯಾರೊಬ್ಬರೂ ಭಯಭೀತರಾಗಿ ಧೃತಿಗೆಡದೆ, ಶಾಂತಿ, ಸೌಹಾರ್ಧತೆಯಿಂದ ಜೀವನ ಮಾಡುವ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದರು.
ಕಲ್ಲುತೂರಾಟದಲ್ಲಿ ಜಖಂಗೊಂಡಿದ್ದ ಮನೆಯನ್ನು ವೀಕ್ಷಣೆ ಮಾಡಿದ ಅವರು ದುರಸ್ಥಿ ಮಾಡಿಸಿಕೊಳ್ಳುವಂತೆ ಸಹಾಯಧನ ನೀಡಿದರು.
ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಪಿ.ಎಲ್.ಡಿ. ಬ್ಯಾಂಕ್ ಉಪಾಧ್ಯಕ್ಷ ರವಿ, ಮುಖಂಡರಾದ ಬಿ.ಸಿ.ವೆಂಕಟೇಶಪ್ಪ, ಮಳ್ಳೂರು ನಾಗರಾಜ್, ಮುತ್ತೂರು ಚಂದ್ರೇಗೌಡ, ವೆಂಕಟರಾಜೇಗೌಡ, ಮುನಿಯಪ್ಪ, ದೊಡ್ಡಪಾಪಣ್ಣ, ಪ್ರಮೀಳಮ್ಮ, ಶಿವಣ್ಣ, ನಿಶಾಂತ್, ವೇಣುಗೋಪಾಲ್, ಗಿರೀಶ್, ಜಿ.ಎಂ.ಶಿವಾನಂದ, ಸುರೇಶ್, ಎಂ.ರಾಮಪ್ಪ, ನಾಗರಾಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -