ಜನಸಮೂಹ ಒಬ್ಬರನ್ನು ಸಾರ್ವಜನಿಕ ಕ್ಷೇತ್ರದ ಅಧಿಕಾರವನ್ನು ಹಿಡಿಯಲು ಮಾಡುವ ಆಯ್ಕೆಯ ಪ್ರಕ್ರಿಯೆಯನ್ನು ಚುನಾವಣೆ ಎನ್ನುವರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಯುವ ಪ್ರಕ್ರಿಯೆಯ ಬಗ್ಗೆ ತಿಳಿಯುವುದು ಬಹು ಮುಖ್ಯ ಎಂದು ಮುಖ್ಯ ಶಿಕ್ಷಕಿ ಎ.ಎಂ.ಸಾವಿತ್ರಿ ದೇವಿ ತಿಳಿಸಿದರು.
ತಾಲ್ಲೂಕಿನ ಮಳಮಾಚನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಯುವ ಚುನಾವಣೆ ಮತ್ತು ಚುನಾವಣಾ ಸಾಕ್ಷರತಾ ಕ್ಲಬ್ಗೆ ಮತದಾನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಯುವಕರ ಪಾತ್ರ ಮಹತ್ವದ್ದು. ಚುನಾಯಿಸುವುದೆಂದರೆ,ಆಯ್ಕೆ ಮಾಡುವುದು ಅಥವಾ ನಿರ್ಧರಿಸುವುದು ಎಂದು ಅರ್ಥವಿದೆ. ನಮ್ಮ ಆಯ್ಕೆ ಯಾವ ರೀತಿಯಲ್ಲಿರಬೇಕು ಎಂದು ನಿರ್ಧರಿಸುವ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಹೇಳಿದರು.
ಚುನಾವಣಾ-ಪೂರ್ವದ ಪ್ರಕ್ರಿಯೆಗಳು, ಮತದಾನದ ದಿನ ಮತ್ತು ಚುನಾವಣಾ-ನಂತರದ ಪ್ರಕ್ರಿಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅವರು ವಿವರಿಸಿದರು.
ಚುನಾವಣಾ ಸಾಕ್ಷರತಾ ಕ್ಲಬ್ಗೆ ನಡೆದ ಚುನಾವಣೆಯಲ್ಲಿ ಸ್ಫರ್ಧಿಸಿದ್ದ ಸ್ಪರ್ಧಾಳುಗಳಿಗೆ ವಿವಿಧ ಚಿಹ್ನೆಗಳನ್ನು ನೀಡಲಾಗಿತ್ತು. ಅಭ್ಯರ್ಥಿಗಳು ಮತದಾರರಿಗೆ ತಮಗೆ ಏಕೆ ಮತದಾನ ಮಾಡಬೇಕೆಂದು ತಿಳಿಸಲು ಅವಕಾಶ ಕೊಡಲಾಗಿತ್ತು. ಶಿಕ್ಷಕರಾದ ಎಂ.ಜಿ.ವಿ. ಶಾಸ್ತ್ರಿ ನೋಡಲ್ ಅಧಿಕಾರಿಯಾಗಿ, ಮುಖ್ಯ ಶಿಕ್ಷಕಿ ಸಾವಿತ್ರಿದೇವಿ ಪ್ರಿಸೈಡಿಂಗ್ ಅಧಿಕಾರಿಯಾಗಿ, ಶಿಕ್ಷಕಿ ಸವಿತ ಗುರುರಾಜಜೋಷಿ ಒಂದನೇ ಮತಗಟ್ಟೆ ಅಧಿಕಾರಿಯಾಗಿ, ಶಿಕ್ಷಕಿ ಬಿ.ಆರ್.ಮಮತಾ ಎರಡನೇ ಮತಗಟ್ಟೆ ಅಧಿಕಾರಿಯಾಗಿ, ಶಿಕ್ಷಕ ಪಿಳ್ಳಪ್ಪ ಮೂರನೇ ಮತಗಟ್ಟೆ ಅಧಿಕಾರಿಯಾಗಿ ಚುನಾವಣಾ ಕರ್ತವ್ಯ ನಿರ್ವಹಿಸಿದರು.
ಐವತ್ತು ಮಂದಿ ವಿದ್ಯಾರ್ಥಿಗಳು ಮತದಾನದಲ್ಲಿ ಪಾಲ್ಗೊಂಡು ಗಿರಿಧರ್ ಅಧ್ಯಕ್ಷರಾಗಿ, ನಿಖಿಲ್ನಾಯಕ್ ಉಪಾಧ್ಯಕ್ಷರಾಗಿ, ವಿದ್ಯಾರ್ಥಿ ಪ್ರತಿನಿಧಿಗಳನ್ನಾಗಿ ಶ್ರಾವಣಿ, ತೇಜಸ್ವಿನಿ, ಪ್ರಕಾಶ, ಗಂಗೋತ್ರಿ, ನಯನ, ಪವನ್ ಅವರನ್ನು ಚುನಾಯಿಸಿದರು.
- Advertisement -
- Advertisement -
- Advertisement -
- Advertisement -