ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನವೆಂಬರ್ 10 ರಂದು ಟಿಪ್ಪು ಜಯಂತಿ ನಡೆಸಲಿದ್ದು, ಎಲ್ಲ ಸಂಘ ಸಂಸ್ಥೆಗಳು, ಸಮುದಾಯದವರು ಜಯಂತಿಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ತಹಶೀಲ್ಧಾರ್ ಎಸ್.ಅಜಿತ್ ಕುಮಾರ್ ರೈ ಮನವಿ ಮಾಡಿದರು.
ತಾಲ್ಲೂಕು ಆಡಳಿತದಿಂದ ಟಿಪ್ಪು ಜಯಂತಿ ಆಚರಣೆಯ ಹಿನ್ನಲೆಯಲ್ಲಿ ಗ್ರಾಮಾಂತರ ಠಾಣೆಯಲ್ಲಿ ಮಂಗಳವಾರ ವಿವಿಧ ಸಂಘ ಸಂಸ್ಥೆ, ಮುಸ್ಲಿಂ ಸಮುದಾಯ ಹಾಗೂ ನಾಗರಿಕರ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರದ ಆದೇಶದಂತೆ ಟಿಪ್ಪು ಜಯಂದಿಯ ದಿನದಂದು ಯಾರೇ ಆಗಲಿ ಯಾವುದೆ ರೀತಿಯ ಮೆರವಣಿಗೆ ಮಾಡುವುದು, ಫ್ಲೆಕೆ್ಸ್, ಬ್ಯಾನರ್ಗಳನ್ನು ಕಟ್ಟುವಂತಿಲ್ಲ. ಬೆಳಗ್ಗೆ ೯.೩೦ಕ್ಕೆ ಕಾರ್ಯಕ್ರಮ ಆರಂಭಿಸಿ ನಿಗತ ಸಮಯದೊಳಗೆ ಮುಗಿಸಲು ಸಹಕರಿಸುವಂತೆ ಕೋರಿದರು.
ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಸ್ಲಿಂ ಸಮುದಾಯದ ಮುಖಂಡರು, ಅಂದು ಶುಕ್ರವಾರ, ಆದ್ದರಿಂದ ಪ್ರಾರ್ಥನೆ ಸಲ್ಲಿಸಬೇಕು. ಆದ್ದರಿಂದ ವೇದಿಕೆ ಕಾರ್ಯಕ್ರಮವನ್ನು ಮದ್ಯಾಹ್ನ ೨ ಗಂಟೆಗೆ ನಿಗದಿ ಮಾಡಿ, ವೇದಿಕೆಯಲ್ಲಿ ಮಿನಿವಿಧಾನಸೌಧದ ಎದುರು ಬೇಡ, ಅಗ್ನಿಶಾಮಕ ಠಾಣೆ ಆವರದಲ್ಲಿ ಮಾಡಿ ಎಂದು ಮನವಿ ಮಾಡಿದರು.
ಮೆರವಣಿಗೆ ಮಾಡುವುದು, ಫ್ಲೆಕ್ಸ್, ಬ್ಯಾನರ್ ಕಟ್ಟುವುದನ್ನು ನಿಷೇಸಿರುವುದು ಸೇರಿದಂತೆ ಎಲ್ಲ ನೀತಿ ನಿಯಮಗಳನ್ನು ಪಾಲಿಸುವುದಾಗಿ ಭರವಸೆ ನೀಡಿದರು.
ಸಭಿಕರ ಮನವಿಗೆ ಸ್ಪಂದಿಸಿದ ತಹಶೀಲ್ದಾರರು, ವೇದಿಕೆಯನ್ನು ಮಿನಿವಿಧಾನಸೌಧದ ಎದುರು ಬದಲಿಗೆ ಅಗ್ನಿಶಾಮಕ ಠಾಣೆ ಎದುರು ನಿರ್ಮಿಸಲು ಒಪ್ಪಿದರಾದರೂ ಸಮಯ ಬದಲಾವಣೆಗೆ ಒಪ್ಪಲಿಲ್ಲ. ಇದು ಒಂದು ತಾಲ್ಲೂಕಿನ ಪ್ರಶ್ನೆಯಲ್ಲ. ಇಡೀ ರಾಜ್ಯದ ಪ್ರಶ್ನೆ, ರಾಜ್ಯದ ಎಲ್ಲ ಕಡೆಯೂ ಇದೆ ನಿಯಮ ಇದೆ ಎಂದರು.
ವೇದಿಕೆ ಕಾರ್ಯಕ್ರಮದ ಸಮಯದಲ್ಲಿ ಬದಲಾವಣೆಗೆ ಒಪ್ಪದ ಅಧಿಕಾರಿಗಳ ಮಾತಿನಿಂದ ಬೇಸರಗೊಂಡ ಮುಸ್ಲಿಂ ಸಮುದಾಯದ ಕೆಲವರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.
ಸಭೆಯಿಂದ ಹೊರ ನಡೆದವರನ್ನು ಸಮಾಧಾನಪಡಿಸಿದ ಅಧೀಕಾರಿಗಳು, ಪೊಲೀಸರು ಮತ್ತೆ ಅವರನ್ನು ಸಭಾಂಗಣಕ್ಕೆ ಕರೆದು ಸರ್ಕಾರದ ಸುತ್ತೋಲೆಯನ್ನು ಮೀರಿ ನಾವು ಏನೂ ಮಾಡಲು ಸಾಧ್ಯವಿಲ್ಲ. ಇದು ಕೇವಲ ಮುಸ್ಲಿಂ ಸಮುದಾಯಕ್ಕೆ ಸೇರಿದ ಜಯಂತಿಯೂ ಅಲ್ಲ. ಎಲ್ಲರೂ ಸೇರಿ ಮಾಡಬೇಕಿರುವ ಜಯಂತಿ ಆಗಿದ್ದು ಎಲ್ಲರೂ ಸರ್ಕಾರದ ನೀತಿ ನಿಯಮಗಳನ್ನು ಒಪ್ಪಲೇಬೇಕು, ಅನುಸರಿಸಲೇ ಬೇಕು ಎಂದು ಮನವಿ ಮಾಡಿದರು.
ಎಲ್ಲರೂ ಸಹಕರಿಸುವುದಾದರೆ ಬೃಹತ್ ವೇದಿಕೆ ನಿರ್ಮಿಸಿ ಅರ್ಥಪೂರ್ಣವಾಗಿ, ಅದ್ದೂರಿಯಾಗಿ ಕಾರ್ಯಕ್ರಮ ಮಾಡೋಣ, ಅದು ಬಿಟ್ಟು ಕಾರ್ಯಕ್ರಮಕ್ಕೆ ಯಾರೂ ಬರದೇ ಇರುವಂತಾದರೆ ಸಭಾಂಗಣದ ಒಳಗೆ ಸಾಂಕೇತಿಕವಾಗಿ ಮಾಡಿ ಮುಗಿಸುತ್ತೇವೆ ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದರು.
ಅಂತಿಮವಾಗಿ ಸರ್ಕಾರ ನಿಗಪಡಿಸಿದಂತೆಯೆ ಜಯಂತಿಯನ್ನು ಅದೇ ಸಮಯಕ್ಕೆ ಅದೇ ರೀತಿಯಲ್ಲಿ ಮಾಡಲು ಎಲ್ಲರೂ ಒಪ್ಪಿದರು. ಅದರಂತೆ ನವೆಂಬರ್ ೧೦ರ ಶುಕ್ರವಾರ ಬೆಳಗ್ಗೆ ೯.೩೦ಕ್ಕೆ ಕಾರ್ಯಕ್ರಮವನ್ನು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಡಿವೈಎಸ್ಪಿ ನಾಗೇಶ್, ಸರ್ಕಲ್ ಇನ್ಸ್ಪೆಕ್ಟರ್ ಬಿ.ಸಿದ್ದರಾಜು, ಗ್ರಾಮಾಂತರ ಠಾಣೆಯ ಕೆ.ಪ್ರದೀಪ್ ಪೂಜಾರಿ, ದಿಬ್ಬೂರಹಳ್ಳಿ ಠಾಣೆಯ ವಿಜಯ್ ರೆಡ್ಡಿ, ಬಿ.ಅಪ್ಸರ್ಪಾಷ, ಮೇಲೂರು ಅಜೀಜ್, ತಾಜ್ ಪಾಷ, ಅನ್ಸರ್ ಖಾನ್, ರೆಹಮಾನ್, ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ನಂದೀಶ್, ಬೈರಾರೆಡ್ಡಿ, ರೈತ ಸಂಘದ ರವಿಪ್ರಕಾಶ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -