‘ನಮ್ಮ ಶಾಲೆಯ ಸುತ್ತಮುತ್ತ ಕಸ, ನೀರು ನಿಲ್ಲದಂತೆ ಮಾಡಬೇಕು. ರೋಗಮುಕ್ತ ಪರಿಸರವನ್ನು ಮಾಡಬೇಕು. ನಾವು ಶಾಲೆಯಲ್ಲಿ ಸ್ವಚ್ಛತೆಯ ಬಗ್ಗೆ ಕಲಿಯುತ್ತಿದ್ದೇವೆ. ನಮ್ಮ ಪೋಷಕರಾದ ನೀವು ಎಲೆ ಅಡಿಕೆ ತಂಬಾಕನ್ನು ತಿಂದು ಎಲ್ಲೆಂದರಲ್ಲಿ ಉಗಿಯಬಾರದು. ನಾವೆಲ್ಲರೂ ಸ್ವಚ್ಛ ಭಾರತ ನಿರ್ಮಾಣದಲ್ಲಿ ಶ್ರಮಿಸೋಣ…’ ಎಂಬ ಒಕ್ಕಣಿಕೆಯಿರುವ ಪತ್ರಗಳನ್ನು ಗುರುವಾರ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬರೆದರು.
ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯ್ತಿ ಸದಸ್ಯರಿಗೆ ಪತ್ರಗಳನ್ನು ಬರೆದರು. ಶೌಚಾಲಯ ನಿರ್ಮಿಸಿರದ ಮನೆಗಳ ಮಕ್ಕಳು ತಮ್ಮ ಪೋಷಕರಿಗೆ ಖಡ್ಡಾಯವಾಗಿ ಶೌಚಾಲಯ ನಿರ್ಮಿಸಬೇಕೆಂದು ಪತ್ರವನ್ನು ಸಹ ಬರೆದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ಮಾತನಾಡಿ, ‘ಸ್ವಚ್ಛ ಪಖ್ವಾಡಾ’ ಎಂಬ ಕಾರ್ಯಕ್ರಮದಡಿ ನಾವು ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಕುರಿತಂತೆ ಅರಿವು ಮೂಡಿಸುತ್ತಾ, ಅವರಿಂದ ಜನಪ್ರತಿನಿಧಿಗಳಿಗೆ, ಪೋಷಕರಿಗೆ, ಶಾಲಾಭಿವೃದ್ಧಿ ಸಮಿತಿಯವರಿಗೂ ಸಹ ಸ್ವಚ್ಛತೆಯ ಕುರಿತಂತೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಪತ್ರ ಸಂಸ್ಕೃತಿಯನ್ನು ನಮ್ಮ ಗ್ರಾಮ, ಶಾಲೆ, ಪರಿಸರ ಸ್ವಚ್ಛತೆಗಾಗಿ ಬಳಸುತ್ತಿದ್ದೇವೆ’ ಎಂದು ಹೇಳಿದರು.
ಶಿಕ್ಷಕರಾದ ಎಸ್.ಚಾಂದ್ ಪಾಷ, ಅಶೋಕ್, ಭಾರತಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -