‘ಉತ್ತಮ ಗುಣಮಟ್ಟದ ಆಹಾರ ಸೇವಿಸಿದರೆ ಔಷಧಿಯ ಅಗತ್ಯವೇ ಬೀಳುವುದಿಲ್ಲ’ ಎನ್ನುವ ಮಾತನ್ನು ಪದೇಪದೇ ಹೇಳುತ್ತಾರೆ ಸಾವಯವ ಕೃಷಿಕ ಬೋದಗೂರು ವೆಂಕಟಸ್ವಾಮಿರೆಡ್ಡಿ. ಇವರು ಹೇಳುವುದಷ್ಟೇ ಅಲ್ಲ, ಸಜ್ಜೆ, ಸಾಮೆ, ಊದಲು, ಬರಗು, ನವಣೆ, ಬಿಳಿ ಜೋಳ, ಹಾರಕ, ರಾಗಿ, ಉಚ್ಚೆಳ್ಳು ಮುಂತಾದ ತೃಣ ಧಾನ್ಯಗಳೊಂದಿಗೆ ಮಳೆಯಾಶ್ರಿತ ನಾಟಿ ತಳಿ ದೊಡ್ಡಬೈರನೆಲ್ಲು ಭತ್ತವನ್ನು ಬೆಳೆದಿದ್ದಾರೆ.
ನೀರಿನ ಅಭಾವವನ್ನು ಎದುರಿಸುತ್ತಿರುವ ಜಿಲ್ಲೆಯಲ್ಲಿ ಸಾಹಸಿಗರಂತೆ ಮಳೆಯಾಶ್ರಿತವಾಗಿ ದೊಡ್ಡಬೈರನೆಲ್ಲು ಭತ್ತ ಒಂದೂ ಮುಕ್ಕಾಲು ಎಕರೆಯಲ್ಲಿ ಬೆಳೆದಿರುವ ಇವರು, ಇದನ್ನು ಬಳಸಿದರೆ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿಡಬಹುದು ಎಂದು ಕಿವಿ ಮಾತು ಕೂಡ ಹೇಳುತ್ತಾರೆ. ಸುಮಾರು ಹದಿನೈದು ಕ್ವಿಂಟಾಲ್ ಭತ್ತದ ಇಳುವರಿಯ ಆಶಾಭಾವನೆಯಲ್ಲಿದ್ದಾರೆ.
ನೈಸರ್ಗಿಕ ಕೃಷಿಯಲ್ಲಿ ವಿಶ್ವಾಸವಿರಿಸಿರುವ ವೆಂಕಟಸ್ವಾಮಿರೆಡ್ಡಿ, ಗದ್ದೆಗಳಿಗೆ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸಿಲ್ಲ. ‘ಬೇಕಿದ್ದರೆ, ಸೆಗಣಿ, ಗಂಜಲ, ಮಜ್ಜಿಗೆ, ಜೀವಾಮೃತ, ಘನಾಮೃತವೇ ಬಳಸಬಹುದು. ಆದರೆ, ನಾನು ಅವನ್ನೂ ಈ ಬಾರಿ ಬಳಸಿಲ್ಲ’ ಎನ್ನುತ್ತಾರೆ. ಕೀಟ ಬಾಧೆ ಕಾಣಿಸಿಕೊಂಡಾಗ ಗಂಜಲಕ್ಕೆ ಹುಳಿಮಜ್ಜಿಗೆ ಬೆರೆಸಿ ಸಿಂಪಡಿಸಿ ಹತೋಟಿಗೆ ತರಬಹುದು ಎಂದು ಅವರು ಹೇಳುತ್ತಾರೆ.
‘ಆರೋಗ್ಯಕ್ಕಾಗಿ ಆಹಾರ, ಆಹಾರಕ್ಕಾಗಿ ಕೃಷಿ’ ಎಂಬ ಧ್ಯೇಯದಿಂದ ಕೃಷಿ ಮಾಡುವವರು ವಿರಳ. ಈ ಉದ್ದೇಶದಿಂದ ಕೃಷಿ ಮಾಡುತ್ತಿರುವ ವೆಂಕಟಸ್ವಾಮಿರೆಡ್ಡಿ, ಬೆಳೆದ ಭತ್ತವನ್ನು ಮಾರುವುದಿಲ್ಲ. ಸ್ವಂತಕ್ಕೆ ಬಳಸುತ್ತಾರೆ. ಹಲವಾರು ವರ್ಷಗಳಿಂದ ನಾಟಿ ತಳಿ ದೊಡ್ಡಬೈರನೆಲ್ಲು ಭತ್ತವನ್ನು ಬೆಳೆಯುತ್ತಿರುವ ಇವರು ತಮ್ಮ ಕುಟುಂಬಕ್ಕೆ ಬಳಸಿ ಉಳಿದಿದ್ದನ್ನು ಆಸಕ್ತ ರೈತರಿಗೆ ಬೀಜದ ರೂಪದಲ್ಲಿ ನೀಡುತ್ತಾರೆ.
ಈ ಭಾಗದಲ್ಲಿ ಹೊಸದ್ಯಾವರ ನಡೆದಾಗ, ಮದುವೆ ಮುಂತಾದ ಶುಭ ಕಾರ್ಯಕ್ಕೆ ಮತ್ತು ಯಾರಾದರೂ ಕೊಸೆಯುಸಿರೆಳೆದಾಗಲೂ ಇವರಿಂದ ಭತ್ತದ ಹುಲ್ಲನ್ನು, ತೆನೆಗಳನ್ನು ಪಡೆಯುತ್ತಾರೆ. ಕರ್ನಾಟಕ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆಯಿಂದ ಇವರಿಗೆ ಪ್ರಮಾಣ ಪತ್ರವೂ ಲಭಿಸಿದೆ.
‘ಆಹಾರ ಬೆಳೆಗಳನ್ನು ಬೆಳೆಯುವುದಕ್ಕೆ ಅತೀ ಹೆಚ್ಚು ಪ್ರೋತ್ಸಾಹ ನೀಡಬೇಕು. ಪಾರಂಪರಿಕ ನಾಟಿ ಭತ್ತಕ್ಕೆ ಅಧಿಕ ಬೆಲೆ ಮತ್ತು ಬೇಡಿಕೆ ಇದೆ. ಕೇರಳ ರಾಜ್ಯದಲ್ಲಿ ನಾಟಿ ಭತ್ತ ತಳಿ ಸಂರಕ್ಷಣೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿದೆ. ಕರ್ನಾಟಕದಲ್ಲಿ ಮಳೆ ಆಶ್ರಿತ ಭತ್ತ ಬೆಳೆ ಸಂರಕ್ಷಣೆಗೆ ಉಪಯುಕ್ತ ಯೋಜನೆ ರೂಪಿಸುವ ಅಗತ್ಯವಿದೆ’ ಎನ್ನುತ್ತಾರೆ ತಲಕಾಯಲಬೆಟ್ಟ ಸಾವಯವ ಕೃಷಿ ಪರಿವಾರ ಟ್ರಸ್ಟ್ ತಾಲ್ಲೂಕು ಸಂಚಾಲಕ ಬೂದಾಳ ರಾಮಾಂಜಿ.
- Advertisement -
- Advertisement -
- Advertisement -
- Advertisement -