ನಮ್ಮ ಪೂರ್ವಿಕರು ನಿರ್ಮಿಸಿರುವಂತಹ ಕೆರೆ ಕುಂಟೆಗಳನ್ನು ಉಳಿಸಬೇಕು. ಕೆರೆ ಕುಂಟೆ ಗಳಿಗೆ ನೀರು ಹರಿಸುವ ರಾಜಕಾಲುವೆಗಳನ್ನು ಸ್ವಚ್ಚಗೊಳಿಸುವ ಕೆಲಸ ನಿರಂತರವಾಗಿ ನಡೆಯಬೇಕಿದೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಹೇಳಿದರು.
ತಾಲ್ಲೂಕು ಬಿಜೆಪಿ ಪಕ್ಷದ ವತಿಯಿಂದ ಭಾನುವಾರ ತಾಲ್ಲೂಕಿನ ದಿಬ್ಬೂರಹಳ್ಳಿಯ ಭೈರಸಾಗರ ಕೆರೆ, ತಲಕಾಯಲಬೆಟ್ಟದ ಶ್ರೀನಿವಾಸ ಸಾಗರ ಕೆರೆ ಹಾಗು ಗಂಜಿಗುಂಟೆಯ ರೆಡ್ಡಿಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಪೂರ್ವಿಕರು ಹಿಂದೆ ಕೆರೆ ಕುಂಟೆಗಳನ್ನು ನಿರ್ಮಿಸಿದ ಪರಿಣಾಮ ಕಳೆದ ಮೂವತ್ತು ವರ್ಷಗಳ ಹಿಂದೆ ಈ ಭಾಗದಲ್ಲಿ ಯಥೇಚ್ಚವಾಗಿ ನೀರು ಲಭ್ಯವಿತ್ತು. ಆದರೆ ಇತ್ತೀಚೆಗೆ ಜನರ ದುರಾಸೆಯಿಂದ ಕೆರೆ ಕುಂಟೆಗಳಿಗೆ ನೀರು ಹರಿಯುವ ರಾಜಕಾಲುವೆಗಳನ್ನು ಒತ್ತುವರಿ ಮಾಡಿರುವುದರಿಂದ ಮಳೆಯಿಂದ ಬಂದಂತಹ ನೀರು ಸರಾಗವಾಗಿ ಕೆರೆ ಕುಂಟೆಗಳಿಗೆ ಹರಿಯುವುದಿಲ್ಲ. ಮಳೆಯಿಂದ ಬಂದ ನೀರು ಮನೆಗಳಿಗೆ ರಸ್ತೆಗಳ ಮೇಲೆ ಸೇರಿದಂತೆ ರೈತರ ತೋಟಗಳಿಗೆ ನುಗ್ಗಿ ರೈತ ಬೆಳೆದಂತಹ ಬೆಳೆ ಹಾಳಾಗುತ್ತಿದೆ. ಹಾಗಾಗಿ ಕೂಡಲೇ ಒತ್ತುವರಿಯಾಗಿರುವಂತಹ ರಾಜಕಾಲುವೆಗಳನ್ನು ಕೂಡಲೇ ತೆರವುಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.
ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರಗೌಡ ಮಾತನಾಡಿ, ಕೋಲಾರ ಹಾಗು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸುಮಾರು ೩೦೦೦ ಕೆರೆಗಳಿದ್ದು ಮಳೆಯಿಂದ ಬಂದಂತಹ ನೀರು ಕೆರೆ ಕುಂಟೆಗಳಲ್ಲಿ ಸಂಗ್ರಹವಾದರೆ ಈ ಭಾಗದ ಅಂತರ್ಜಲ ವೃದ್ಧಿಯಾಗುವ ಜೊತೆಗೆ ಜನರ ಜೀವನ ಸುಗಮವಾಗುತ್ತದೆ ಎಂದರು.
ಬೆಂಗಳೂರಿನಲ್ಲಿರುವ ಹಲವಾರು ಕೆರೆಗಳು ಮುಚ್ಚಿರುವ ಪರಿಣಾಮ ಇದೀಗ ಬೀಳುತ್ತಿರುವ ಮಳೆ ನೀರು ಸಂಗ್ರಹವಾಗಲು ಸ್ಥಳವಿಲ್ಲದೇ ಮನೆಗಳ ನುಗ್ಗುವ ಸ್ಥಿತಿ ಬಂದಿದೆ. ಒತ್ತುವರಿಯಾಗಿರುವ ರಾಜಕಾಲುವೆಗಳ ತೆರವಿಗೆ ಪಕ್ಷಾತೀತವಾಗಿ ಎಲ್ಲರೂ ಬೆಂಬಲಿಸುವ ಮೂಲಕ ಕೆರೆ ಕುಂಟೆಗಳನ್ನು ಕಾಪಾಡಲು ಮುಂದಾಗಬೇಕು ಎಂದರು.
ಇನ್ನು ನಗರಕ್ಕೆ ಹೊಂದಿಕೊಂಡಂತಿರುವ ಅಮ್ಮನ ಕೆರೆ ಹಾಗು ಗೌಡನ ಕೆರೆಯಲ್ಲಿ ಅರಣ್ಯ ಇಲಾಖೆಯಿಂದ ನೆಟ್ಟಿರುವ ಜಾಲಿ ಗಿಡಗಳನ್ನು ತೆರವುಗೊಳಿಸಲು ತಾಲ್ಲೂಕು ಆಡಳಿತ ಸೇರಿದಂತೆ ಅರಣ್ಯ ಇಲಾಖೆ ಕೂಡಲೇ ಮುಂದಾಗಬೇಕು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀರಾಮರೆಡ್ಡಿ, ಮುಖಂಡರಾದ ಬೈರರೆಡ್ಡಿ, ಮಧು, ಪುರುಷೋತ್ತಮ್, ಶ್ರೀರಾಮಪ್ಪ, ಸೀತಭೈರರೆಡ್ಡಿ, ನರಸಿಂಹಯ್ಯ, ಶ್ರಿರಾಮ್, ಮಹಿಳಾ ಮೋರ್ಚಾದ ಸುಶೀಲಮ್ಮ, ಶಿವಮ್ಮ ಹಾಜರಿದ್ದರು.
- Advertisement -
- Advertisement -
- Advertisement -
- Advertisement -