ತಾಲ್ಲೂಕಿನ ಆನೂರು ಗ್ರಾಮದ ಬಳಿಯಿರುವ ಆಶಾಕಿರಣ ಶಿಕ್ಷಣ ಮತ್ತು ಪುನಶ್ಚೇತನ ಸಂಸ್ಥೆಯ ಬುದ್ಧಿಮಾಂಧ್ಯ ಮಕ್ಕಳ ಉಚಿತ ವಸತಿ ಶಾಲೆಯಲ್ಲಿ ಮಕ್ಕಳಿಗೆ ಸರಿಯಾದ ಊಟ, ತಿಂಡಿ ನೀಡದೇ ವಿನಾಕಾರಣ ಮಕ್ಕಳ ಮೇಲೆ ದೈಹಿಕ ಹಲ್ಲೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ತಾಲ್ಲೂಕಿನ ಆನೂರು ಗ್ರಾಮದ ಕೈವಾರ ರಸ್ತೆಯಲ್ಲಿರುವ ಉಚಿತ ವಸತಿ ಶಾಲೆಯಲ್ಲಿರುವ ಬುದ್ಧಿಮಾಂಧ್ಯ ಮಕ್ಕಳಿಗೆ ಸಮಯಕ್ಕೆ ಊಟ, ತಿಂಡಿ ನೀಡುತ್ತಿಲ್ಲ. ಕಾಲ ಕಾಲಕ್ಕೆ ಮಕ್ಕಳಿಗೆ ಸ್ನಾನ ಮಾಡಿಸಲ್ಲ ವಿನಾಕಾರಣ ಹೊಡೆಯುತ್ತಾರೆ. ಸಾಲದೆಂಬಂತೆ ಇಲ್ಲಿ ಇಬ್ಬರು ಕೆಲಸ ಮಾಡುತ್ತಾರೆ ಆದರೆ ದಾಖಲೆಗಳಲ್ಲಿ ಐದು ಮಂದಿಯೆಂದು ನಮೂದಿಸಿದ್ದಾರೆ.
ಬುದ್ದಿ ಮಾಂಧ್ಯ ಮಕ್ಕಳಿಗೆ ಒಳ್ಳೆಯ ಆಹಾರ ನೀಡಲಿ ಎಂಬ ಉದ್ದೇಶದಿಂದ ಸುತ್ತಮುತ್ತಲಿನ ಗ್ರಾಮಸ್ಥರು, ದಾನಿಗಳು, ನಾಗರಿಕರು ಆಹಾರ ಧಾನ್ಯಗಳು, ತರಕಾರಿಗಳನ್ನು ಕೊಡುತ್ತಾರಾದರೂ ಇಲ್ಲಿನ ದಾಖಲೆಗಳಲ್ಲಿ ಎಲ್ಲವನ್ನು ಖರೀದಿ ಮಾಡುತ್ತಿರುವಂತೆ ಬರೆದಿಟ್ಟಿದ್ದಾರೆ.
ವಸತಿಶಾಲೆಯಲ್ಲಿ ೨೦ ಮಂದಿ ಮಕ್ಕಳು ಹಾಜರಿದ್ದರೆ ದಾಖಲೆಗಳಲ್ಲಿ ೪೫ ಮಂದಿ ಹಾಜರಾತಿ ಇರುವಂತೆ ನಮೂದಿಸಿದ್ದಾರೆ. ಈ ಬಗ್ಗೆ ವಸತಿ ಶಾಲೆಯ ಶಿಕ್ಷಕರಿಗೆ ಈ ಹಿಂದೆ ಎಚ್ಚರಿಕೆ ನೀಡಿದ್ದೆವಾದರೂ ಅದೇ ಚಾಳಿಯನ್ನು ಮುಂದುವರೆಸಿದ್ದಾರೆ. ಯಾವ ಇಲಾಖೆಯಡಿ ಸಂಸ್ಥೆ ನಡೆಸುತ್ತಿದ್ದೀರಿ ಎಂದು ಕೇಳಿದರೆ ಯಾವುದೋ ಎನ್.ಜಿ.ಓ ಸಂಸ್ಥೆಯವರಿಗೆ ದೂರವಾಣಿ ಕರೆ ಮಾಡಿಕೊಡುತ್ತಾರೆ. ಇದುವರೆಗೂ ಇಲಾಖೆಯ ಹೆಸರು ಹೇಳಿಲ್ಲ ಎನ್ನುತ್ತಾರೆ.
ಹಾಗಾಗಿ ಕೂಡಲೇ ಇಲ್ಲಿನ ವಸತಿಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ಬದಲಾವಣೆ ಮಾಡಬೇಕು ಎಂದು ಗ್ರಾಮಸ್ಥರಾದ ಎ.ಬಾಲಮುರಳಿಕೃಷ್ಣ, ಶಿವಕುಮಾರ್, ಕಿರಣ್, ಮೋಹನ್, ಶರತ್, ಶಶಿಕುಮಾರ್, ಅಂಬರೀಶ್, ಆನಂದ್, ಸತೀಶ್, ಚೇತನ್, ಪಿಳ್ಳಪ್ಪ, ಪ್ರಶಾಂತ್ ಒತ್ತಾಯಿಸಿದ್ದಾರೆ.
- Advertisement -
- Advertisement -
- Advertisement -
- Advertisement -