ಭಾಷೆ ಒಂದು ಸಂಪರ್ಕಸಾಧನ ಅಷ್ಟೇ ಅಲ್ಲ, ಅದು ಬದುಕಿನ ಅವಿಭಾಜ್ಯ ಅಂಗ. ಭಾಷೆ ಅಂದರೆ ಅಕ್ಷರಗಳಲ್ಲ. ಆಕಾರಗಳಲ್ಲ. ಉಸಿರು. ಪ್ರಪಂಚದ ಯಾವುದೇ ಮೂಲೆಯ ಭಾಷೆ ಅದಾಗಿರಲಿ ಆ ಭಾಷೆಯನ್ನು ಗೌರವಿಸಬೇಕು ಹಾಗೇ ತಮ್ಮ ಭಾಷೆಯನ್ನು ಉಳಿಸಿ ಬೆಳಸಬೇಕು ಎಂದು ಸಿಡಿಪಿಒ ಅಧಿಕಾರಿ ಲಕ್ಷ್ಮೀದೇವಮ್ಮ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ವಿಶ್ವ ಮಾತೃಭಾಷೆಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವ ತಾಯ್ನುಡಿ ದಿನಾಚರಣೆ ಅಂಗವಾಗಿ ನಾವು ಇಂದಿನಿಂದಲೆ ಪಣತೊಡೋಣ. ಎಲ್ಲಾ ಭಾಷೆಯನ್ನು ಗೌರವಿಸಿಸುತ್ತಲೇ ನಮ್ಮ ಮಾತೃಭಾಷೆಯನ್ನು ಉಳಿಸಿ ಬೆಳೆಸೋಣ. ೧೯೯೯ ರಲ್ಲಿ ಯುನೆಸ್ಕೋ ಫೆಬ್ರುವರಿ ೨೧ ರ ದಿನವನ್ನು ವಿಶ್ವ ತಾಯ್ನುಡಿ ದಿನವೆಂದು ಘೋಷಣೆ ಮಾಡಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ಮಾತನಾಡಿ, ತನ್ನ ಭಾಷೆಯ ಮೇಲೆ ಹಿಡಿತ ಸಾಧಿಸಿದವನಿಗೆ ಇತರ ಭಾಷೆಗಳ ಕಲಿಕೆ ಸುಲಭವಾಗುತ್ತದೆ. ಬಹುಭಾಷಾವಲ್ಲಭನಾಗಲು ಮಾತೃಭಾಷೆಯಲ್ಲಿ ಪರಿಣಿತನಾಗುವುದು ಅನಿವಾರ್ಯ. ಹೆತ್ತ ತಾಯಿಯನ್ನು ಪ್ರೀತಿಸದವನು ಬೇರೆಯವರನ್ನು ಹೇಗೆ ಪ್ರೀತಿಸಬಲ್ಲ ಎಂದು ಹೇಳಿದರು.
ಶಿಕ್ಷಕ ಚಾಂದ್ಪಾಷ ನಮ್ಮ ಭಾಷೆಯ ವಿವಿಧ ಆಯಾಮಗಳು, ಕನ್ನಡ ಭಾಷೆಯ ಹಿರಿಮೆ, ಗರಿಮೆ ಹಾಗೂ ಪ್ರಾಚೀನತೆಯನ್ನು ಮಕ್ಕಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರ ಕಾರ್ಡ್ಗಳನ್ನು ಗ್ರಾಮದ ಹಿರಿಯರಿಗೆ ವಿತರಿಸಲಾಯಿತು.
ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಶಿಕ್ಷಕರಾದ ಭಾರತಿ, ಅಶೋಕ್, ಸಿಬ್ಬಂದಿ ವೆಂಕಟಮ್ಮ, ಗ್ರಾಮಸ್ಥರಾದ ವೆಂಕಟಪ್ಪ, ತಿಮ್ಮಕ್ಕ ಹಾಜರಿದ್ದರು.
- Advertisement -
- Advertisement -
- Advertisement -
- Advertisement -