ಸಮಾಜದ ಎಲ್ಲಾ ವಿಭಾಗಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದರು ಪ್ರಶ್ನೆ ಮಾಡಿ ಅದನ್ನು ತಡೆಯುವಂತಹ ಸಾಮರ್ಥ್ಯ ಇದುವರೆಗೂ ಯಾರಲ್ಲೂ ಬಂದಿಲ್ಲ ಎಂದು ಕರ್ನಾಟಕ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹೇಳಿದರು.
ತಾಲ್ಲೂಕಿನ ಜಂಗಮಕೋಟೆಯ ಸರ್ಕಾರಿ ಶಾಲೆಯ ಆವರಣದಲ್ಲಿ ಸೋಮವಾರ ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದ ಮೂಲೆ ಮೂಲೆಯಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಮಾದ್ಯಮ ಲೋಕವನ್ನು ಬಿಟ್ಟಿಲ್ಲ, ಸಂವಿಧಾನದಲ್ಲಿ ಸೃಷ್ಟಿಯಾಗದೆ ಇದ್ದರು ಜನರ ಪ್ರೀತಿ ವಿಶ್ವಾಸಗಳಿಸಿಕೊಂಡು ಮುನ್ನಡೆಯುತ್ತಿದೆ. ನಿಷ್ಟಾವಂತ ಸಮಾಜದ ನಿರ್ಮಾಣವಾಗಬೇಕು. ಸಮಾಜವನ್ನು ಬದಲಾಯಿಸಿ, ಭ್ರಷ್ಟರಿಲ್ಲದಿದ್ದರೆ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾ ರಂಗಗಳು ಸರಿಹೋಗುತ್ತವೆ.
ಸಂಘಟನೆಗಳು ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಸಂಘಟನೆಗಳು ಹಾದಿ ತಪ್ಪಬಾರದು. ಜನರಿಗೆ ಮಾರ್ಗದರ್ಶನ ಮಾಡುವುದರ ಜೊತೆಗೆ, ಅವರ ಹಕ್ಕುಗಳಿಗೆ ಚ್ಯುತಿ ಬಂದಾಗ ಸಂರಕ್ಷಣೆ ಮಾಡುವ ಕಾರ್ಯವಾಗಬೇಕು. ಇಂತಹ ವ್ಯವಸ್ಥೆ ಸರಿಹೋಗಬೇಕಾದರೆ ಜನರಲ್ಲಿ ಸ್ವಯಂ ಪ್ರಜ್ಞೆ ಮೂಡಬೇಕು. ಕಾನೂನು ಬದ್ದವಾಗಿ ಸಿಗಬೇಕಾದ ಸೌಲಭ್ಯಗಳು ಸಿಗದೆ ಇದ್ದಾಗ ನೇರವಾಗಿ ಲೋಕಾಯುಕ್ತ ಸಂಸ್ಥೆಗೆ ದೂರು ಕೊಡಿ ಎಂದರು.
ವಕೀಲರ ಸಂಘದ ಅಧ್ಯಕ್ಷ ಟಿ.ವಿ. ಚಂದ್ರಶೇಖರ ಗೌಡ ಮಾತನಾಡಿ, ಸಂಘಟನೆಗಳು ತೋರಿಸುವ ಮಾರ್ಗದರ್ಶನ ಮುಂದಿನ ಪೀಳಿಗೆ ಮುಂದುವರೆಸಿಕೊಂಡು ಹೋಗುವಂತೆ ಮಾದರಿಯಾಗಬೇಕು. ಸಮಾಜದ ಪರಿವರ್ತನೆ ನಮ್ಮಿಂದಲೇ ಆಗಬೇಕು. ಕಾನೂನು ಪರಿದಿಯ ಒಳಗೆ ಧೈನಂದಿನ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಚುನಾವಣೆಗಳಲ್ಲಿ ಭ್ರಷ್ಟಾಚಾರಕ್ಕೆ ಒಳಗಾಗುವುದಿಲ್ಲ ಎನ್ನುವ ಸಂಕಲ್ಪ ಮಾಡಬೇಕು. ಭ್ರಷ್ಟಾಚಾರದಲ್ಲಿ ತೊಡಗುವುದು ಎಷ್ಟು ಅಪರಾಧವೋ ಅದಕ್ಕೆ ಸಹಕರಿಸುವುದು ಅಷ್ಟೆ ತಪ್ಪು, ಆದ್ದರಿಂದ ಜನರು ಜಾಗೃತರಾಗಬೇಕು ಎಂದರು.
ಸಿವಿಲ್ ಹಿರಿಯ ನ್ಯಾಯಾಧೀಶರಾದ ಮಂಜುನಾಥ್, ಶ್ರೀಕಂಠ.ಎನ್.ಎ, ಸಂದೀಶ್ ಟಿ.ಎಲ್, ವಕೀಲರ ಸಂಘದ ಕಾರ್ಯದರ್ಶಿ ಎಂ.ಬಿ.ಲೊಕೇಶ್, ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜೆ.ಎಂ.ನಾಗರಾಜ್, ಖಜಾಂಚಿ ಎಂ.ಚನ್ನಕೃಷ್ಣಪ್ಪ, ಎಂ.ನಂಜಯ್ಯ, ನರಸಿಂಹಯ್ಯ, ಮುರಳಿ, ಆಸೀಪ್ ಬಾಷ, ಬಿ.ಎಂ.ಮೂರ್ತಿ, ಶಿಕ್ಷಕ ಎಚ್.ಎಸ್.ರುದ್ರೇಶ್ ಮೂರ್ತಿ ಮುಂತಾದವರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -