ನಗರದ ಸ್ವಚ್ಚತೆ ಸೇರಿದಂತೆ ಸಾರ್ವಜನಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ದುಡಿಯುವ ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಹೇಳಿದರು.
ನಗರದ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ಮಿನಿ ಓಲಂಪಿಕ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಪೌರ ಕಾರ್ಮಿಕರು ತಾವು ಮಾಡುವ ಕೆಲಸದಿಂದ ಇತರರಿಗಿಂತ ಬೇಗ ಅನಾರೋಗ್ಯಕ್ಕೆ ತುತ್ತಾಗುವ ಸಾದ್ಯತೆಗಳಿವೆ. ಹಾಗಾಗಿ ಪೌರಕಾರ್ಮಿಕರಿಗೆ ಬೇಕಾಗಿರುವ ಅಧುನಿಕ ಪರಿಕರಗಳು ಸೇರಿದಂತೆ ವೈದ್ಯಕೀಯ ಸೌಲಭ್ಯ ಹಾಗು ಸೂಕ್ತ ವೇತನ ಒದಗಿಸಲು ಸರ್ಕಾರಗಳು ಮುಂದಾಗಬೇಕು.
ಸ್ವಚ್ಚತೆ ವಿಚಾರ ಬಂದಾಗ ಅದು ಪ್ರತಿಯೊಬ್ಬರ ಜವಾಬ್ದಾರಿಯಾಗಿರುತ್ತದೆ. ಪ್ರತಿಯೊಬ್ಬರೂ ಸ್ವಚ್ಚತೆಯಲ್ಲಿ ಕೈಜೋಡಿಸಿ ತಮ್ಮ ಮನೆಯ ತ್ಯಾಜ್ಯವನ್ನು ರಸ್ತೆಗೆ ಎಸೆಯುವುದನ್ನು ಬಿಟ್ಟು ಅದನ್ನು ವಿಂಗಡಿಸಿ ಸಂಸ್ಕರಿಸುವ ಕೆಲಸಕ್ಕೆ ಮುಂದಾಗಬೇಕು. ಪೌರ ಕಾರ್ಮಿಕರ ಶ್ರಮ ಹಾಗು ವೃತ್ತಿಯನ್ನು ಪ್ರತಿಯೊಬ್ಬ ನಾಗರೀಕರು ಗೌರವಿಸುವಂತಹಕೆಲಸವಾಗಬೇಕು ಎಂದರು.
ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕೋಬರಾವ್ ಮಾತನಾಡಿ ಜನಸೇವೆಯೇ ಜನಾರ್ಧನ ಸೇವೆ ಎಂಬ ಮಾತಿನಂತೆ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ, ಕ್ಷೇತ್ರದಾಧ್ಯಂತ ಉಚಿತ ಆರೋಗ್ಯ ಶಿಬಿರಗಳು ಸೇರಿದಂತೆ ಉಚಿತ ಸಾಮೂಹಿಕ ವಿವಾಹಗಳನ್ನುನೆರವೇರಿಸುವ ಮೂಲಕ ಕ್ಷೇತ್ರದ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಾರೆ. ಇಂತಹ ಮತ್ತಷ್ಟು ಸಮಾಜಸೇವಕರು ಕ್ಷೇತ್ರಕ್ಕೆ ಅಗತ್ಯವಾಗಿದ್ದರೆ ಎಂದರು.
ಇದೇ ಸಂದರ್ಭದಲ್ಲಿ ನಗರದ ಪೌರಕಾರ್ಮಿಕರಿಗಾಗಿ ಏರ್ಪಡಿಸಲಾಗಿದ್ದ ಕ್ರೀಡಾಕೂಟದಲ್ಲಿ ಸುಮಾರು ೩೦ ಕ್ಕೂ ಹೆಚ್ಚು ಪೌರಕಾರ್ಮಿಕರು ಭಾಗವಹಿಸಿ ಸಂತಸಪಟ್ಟರು.
ಶ್ರೀ ವಾಸವಿ ವಿದ್ಯಾ ಸಂಸ್ಥೆಯ ಸತ್ಯನಾರಾಯಣಶೆಟ್ಟಿ, ಮುಖಂಡರಾದ ಎಸ್.ವಿ.ಅಯ್ಯರ್, ಹಿತ್ತಲಹಳ್ಳಿ ಕೃಷ್ಣಪ್ಪ, ಅಶ್ವತ್ಥಪ್ಪ, ನರಸಿಂಹಪ್ಪ, ಅಪ್ಸರ್ಪಾಷ, ಆನೂರು ದೇವರಾಜ್, ವಿಶ್ವನಾಥ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -