ರೇಷ್ಮೆಯನ್ನು ನಂಬಿರುವ ಈ ಭಾಗದ ರೇಷ್ಮೆ ಬೆಳೆಗಾರರಿಗೆ ಬೆಂಬಲ ಬೆಲೆಯನ್ನು ಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಶುಕ್ರವಾರ ಸಂಜೆ ಬಿಜೆಪಿ ಪಕ್ಷದಿಂದ ಆಯೋಜಿಸಿದ್ದ ಪರಿವರ್ತನಾ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗಾಗಲೇ ಈ ಭಾಗದ ಜನರು ಫ್ಲೋರೈಡ್ ಖಾಯಿಲೆಯಿಂದ ನರಳುತ್ತಿದ್ದಾರೆ. ಅವೈಜ್ಞಾನಿಕವಾಗಿ ಈಗ ಕೊಳಚೆ ನೀರನ್ನು ಶುದ್ಧೀಕರಿಸಿ ತರಲು ಹೊರಟಿದ್ದಾರೆ. ಅದನ್ನು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಜನರಿಗೆ ತೊಂದರೆಯನ್ನುಂಟು ಮಾಡುವ ಕೆಟ್ಟ ನೀರನ್ನು ತರಲು ಬಿಡುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಾಗವಾರ–ಹೆಬ್ಬಾಳ ಕೆರೆ ನೀರು ಹರಿಸುವ ಯೋಜನೆಯನ್ನು ನಿಲ್ಲಿಸುತ್ತೇವೆ. ಪ್ರಧಾನಿಯವರ ಕಾಲನ್ನು ಹಿಡಿದಾದರೂ ಹಣ ಮಂಜೂರು ಮಾಡಿಸಿಕೊಂಡು ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸುತ್ತೇನೆ ಎಂದು ಹೇಳಿದರು.
ಚುನಾವಣೆ ಹತ್ತಿರ ಬಂತೆಂದು ಹಣವಿಲ್ಲದಿದ್ದರೂ ನೂರಾರು ಶಂಕುಸ್ಥಾಪನೆಗಳನ್ನು ಮಾಡುತ್ತಿರುವ ಸಿದ್ಧರಾಮಯ್ಯನವರು ಬಡವರ ಮೂಗಿಗೆ ತುಪ್ಪ ಸವರುತ್ತಿದ್ದಾರೆ. ನಾನು ಪರಿವರ್ತನಾ ಯಾತ್ರೆ ಹೊರಟ ಕೂಡಲೇ, ನೀವು ಯಾತ್ರೆ ಹೊರಟು 12 ರಿಂದ 13 ಸಾವಿರ ಕೋಟಿ ಯೋಜನೆಗಳನ್ನು ಘೋಷಿಸುತ್ತಿದ್ದೀರಿ. ಇದಕ್ಕೆ ಬಜೆಟ್ನಲ್ಲಿ ಹಣ ತೆಗೆದಿಟ್ಟೀದ್ದೀರಾ, ನಾಲ್ಕೂವರೆ ವರ್ಷಗಳಲ್ಲಿ ಸರ್ಕಾರದ ಖಜಾನೆ ಖಾಲಿ ಮಾಡಿ, ಎಂಎಲ್ಎ, ಎಂಎಲ್ಸಿ ಆಪ್ತ ಸಹಾಯಕರಿಗೆ ಸಂಬಳ ನೀಡಲು ಹಣವಿಲ್ಲದಂತೆ ಮಾಡಿರುವ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಜನರಿಗೆ ನ್ಯಾಯ ಒದಗಿಸಲು ಸಾಧ್ಯವೇ. ಒಬ್ಬ ಹಣಕಾಸು ಸಚಿವರಾಗಿ ರಾಜ್ಯದ ಆರ್ಥಿಕ ಸ್ಥಿತಿ ನೋಡದೇ ವಿವೇಚನಾ ರಹಿತವಾಗಿ ಹೀಗೆ ಯೋಜನೆ ಘೋಷಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಅಚ್ಚೇ ದಿನ್ ಕಬ್ ಆಯೇಗಾ ಎನ್ನುವ ಸಿದ್ಧರಾಮಯ್ಯನವರಿಗೆ ಜನರು ಮನೆಗೆ ಕಳಿಸಿದಾಗ ತಿಳಿಯುತ್ತದೆ. ನಮ್ಮ ಸರ್ಕಾರವಿದ್ದಾಗ ಎತ್ತಿನಹೊಳೆ ಯೋಜನೆಗೆ ಮಂಜೂರಾತಿ ನೀಡಿದ್ದೆವು. ಅದನ್ನು ಏಕೆ ಪೂರ್ಣಗೊಳಿಸಿಲ್ಲ. ಆಮೆಗತಿಯಲ್ಲಿ ಕಾಮಗಾರಿ ನಡೆಯಲು ಕಾರಣವೇನು. ಎಲ್ಲಿ ಹೋಯ್ತು ದುಡ್ಡು ಎಂದರು.
ಬಿಜೆಪಿ ಮುಖಂಡ ಆರ್.ಅಶೋಕ್ ಮಾತನಾಡಿ, ದೇಶದ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಧೂಳೀಪಟವಾಗಿದೆ. ಇನ್ನೂ ಕರ್ನಾಟಕದಲ್ಲಿ ಅದು ಉಳಿದರೆ, ಕಾಂಗ್ರೆಸ್ ಹೈಕಮ್ಯಾಂಡ್ಗೆ ಎ.ಟಿ.ಎಂ.ರೀತಿ ಕೆಲಸ ಮಾಡುತ್ತದೆ. ನಮ್ಮ ದುಡ್ಡು ನಮ್ಮ ಅಭಿವೃದ್ಧಿಗೆ ಮಾತ್ರ ಇರಲಿ. ಬಿಜೆಪಿ ಸರ್ಕಾರದಿಂದ ರಾಜ್ಯ ಸುಭಿಕ್ಷವಾಗುತ್ತದೆ.
ಅನ್ನಭಾಗ್ಯಕ್ಕೆ ಕೇಂದ್ರದ 28 ರೂ ಬಂದರೆ ರಾಜ್ಯ ಸರ್ಕಾರ ನೀಡುವುದು 3 ರೂ. ಆದರೆ ತಮ್ಮದೇ ಎಂಬಂತೆ ಪ್ರಚಾರ ಪಡೆಯುತ್ತಾರೆ. ಕೇಂದ್ರ ಕೇಂದ್ರದ ವಿದ್ಯುತ್ ಮಂತ್ರಿ ಯೋಜನೆಯನ್ನು ಡಿ.ಕೆ.ಶಿವಕುಮಾರ್ ರಮ್ಯ ಕೈಗೆ ಕೊಟ್ಟು ‘ಹೊಸ ಬೆಳಕು’ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಡೂಪ್ಲಿಕೇಟ್ ಸರ್ಕಾರ, ಚೀನಾ ಮಾಡೆಲ್ ಇದ್ದಂತೆ ಸಿದ್ಧರಾಮಯ್ಯ. 80 ಲಕ್ಷ ರೂಗಳ ವಾಚ್ ಕಟ್ಟುವ, 2 ಲಕ್ಷ ರೂಗಳ ಕನ್ನಡಕ ಹಾಕುವ ಸಿದ್ದರಾಮಯ್ಯನವರು ತಾವು ಸಮಾಜವಾದಿ ಅನ್ನುತ್ತಾರೆ ಎಂದು ಲೇವಡಿ ಮಾಡಿದರು.
ಅರ್ಕಾವತಿ ಡಿ.ನೋಟಿಫಿಕೇಷನ್ ಹಗರಣದಲ್ಲಿ ಸಿದ್ದರಾಮಯ್ಯ ಅವರು ನೂರಾರು ಕೋಟಿಗಳ ಹಣ ಮಾಡಿದ್ದು ಬಿಟ್ಟರೆ, ಬೇರೆನೂ ಸಾಧನೆ ಮಾಡಿಲ್ಲ, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದಲೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕಳುಹಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್, ಮುಖಂಡರಾದ ಡಿ.ಆರ್.ಶಿವಕುಮಾರಗೌಡ, ಎಚ್.ಸುರೇಶ್, ವಿಶ್ವನಾಥ್, ಡಿ.ಎಸ್.ವೀರಯ್ಯ, ಸುರೇಂದ್ರಗೌಡ, ಮುರಳೀಧರ್, ರವಿಕುಮಾರ್, ಲೋಕೇಶ್ಗೌಡ, ಕೃಷ್ಣಾರೆಡ್ಡಿ, ರವಿನಾರಾಯಣರೆಡ್ಡಿ, ರಾಘವೇಂದ್ರ, ಮಂಜುಳಮ್ಮ, ಸುಜಾತಮ್ಮ, ರತ್ನಮ್ಮ, ಕೆಂಪರೆಡ್ಡಿ ಹಾಜರಿದ್ದರು.
ಮಸೀದಿಯ ಪ್ರಾರ್ಥನೆಗೆ ಭಾಷಣ ನಿಲ್ಲಿಸಿದ ಯಡಿಯೂರಪ್ಪ : ಯಡಿಯೂರಪ್ಪ ಭಾಷಣ ಮಾಡುವಾಗ ಮಸೀದಿಯ ಪ್ರಾರ್ಥನೆ ಧ್ವನಿ ಮೈಕಿನಲ್ಲಿ ಕೇಳಿಸಿದ ತಕ್ಷಣ ಭಾಷಣವನ್ನು ನಿಲ್ಲಿಸಿದರು. ಪ್ರಾರ್ಥನೆ ಮುಗಿದ ನಂತರ ತಮ್ಮ ಭಾಷಣವನ್ನು ಮುಂದುವರೆಸಿದರು.
ಎನ್ಪಿಎಸ್ ರದ್ದುಗೊಳಿಸಲು ಮನವಿ : ಶಿಡ್ಲಘಟ್ಟ ಎನ್ಪಿಎಸ್ ನೌಕರರ ಸಂಘದ ವತಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಎನ್.ಪಿ.ಎಸ್ ರದ್ದುಪಡಿಸಿ ನಿಶ್ಚಿತ ಪಿಂಚಣಿ ಜಾರಿಗೊಳಿಸಲು ಮನವಿ ಸಲ್ಲಿಸಲಾಯಿತು. ಎಲ್ಲಾ ತಾಲ್ಲೂಕುಗಳಲ್ಲಿ ಈ ಬಗ್ಗೆ ಮನವಿಗಳು ಬಂದಿದ್ದು ನಮ್ಮ ಗಮನದಲ್ಲಿದೆ. ಖಂಡಿತವಾಗಿ ನಿಮ್ಮ ಬೇಡಿಕೆ ಈಡೇರಿಸುತ್ತೇವೆಂಬ ಭರವಸೆ ನೀಡಿದರು.
- Advertisement -
- Advertisement -
- Advertisement -
- Advertisement -