ಖಾಸಗಿಯಾಗಿ ಸಾಲ ಪಡೆದು ರೈತರು ಹೈರಾಣಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಮತ್ತು ಮಹಿಳಾ ಸಬಲೀಕರಣಕ್ಕಾಗಿ ಸಾಲ ವಿತರಣೆ ಮಾಡಲಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ತಿಳಿಸಿದರು.
ತಾಲ್ಲೂಕಿನ ಮಳಮಾಚನಹಳ್ಳಿಯ ಶ್ರೀ ಬ್ಯಾಟರಾಯಸ್ವಾಮಿ ದೇವಾಲಯದ ಸಮುದಾಯ ಭವನದಲ್ಲಿ ಭಾನುವಾರ ಕೋಲಾರ ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ ಮಳಮಾಚನಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತ ಸೇವಾ ಸಹಕಾರ ಸಂಘದ ಮುಖಾಂತರ ಕೆ.ಸಿ.ಸಿ ಸಾಲ ಮತ್ತು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣಾ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆ ಬರಡು ಪ್ರದೇಶವಾಗಿದ್ದು, ಸಾವಿರಾರು ಅಡಿ ಕೊರೆದು ನೀರನ್ನು ತೆಗೆದು ರೈತ ವ್ಯವಸಾಯ ಮಾಡುತ್ತಿದ್ದು, ವ್ಯವಸಾಯ ಮಾಡಲು ಮೀಟರ್ ಬಡ್ಡಿ ದರದಲ್ಲಿ ಸಾಲ ಮಾಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಮಳೆ ಬಾರದೆ, ಅತಿವೃಷ್ಟಿ, ಪ್ರಕೃತಿ ವಿಕೋಪಗಳಿಂದ ಬೆಳೆದ ಬೆಳೆ ಕೈಗೆ ಬಾರದೆ, ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಹಾಗೂ ನಾನಾ ಕಾರಣಗಳಿಂದ ರೈತ ಕಂಗಾಲಾಗಿ ತೆಗೆದುಕೊಂಡ ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದು, ಅವರಿಗೆ ನೆರವಾಗುವ ನಿಟ್ಟಿನಲ್ಲಿ ಕೋಲಾರ ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ ಸಾಲ ನೀಡುತ್ತಿದ್ದು, ಸಾಲ ತೆಗೆದುಕೊಂಡು ಸಮಯಕ್ಕೆ ಸರಿಯಾಗಿ ಬ್ಯಾಂಕಿಗೆ ಮರುಪಾವತಿ ಮಾಡಿ , ಆರ್ಥಿಕವಾಗಿ ಮೇಲೆ ಬನ್ನಿ ಎಂದು ತಿಳಿಸಿದರು.
ಮಹಿಳೆಯರು ಸಬಲರಾದರೆ ಅವರ ಕುಟುಂಬ ಸಬಲವಾದಂತೆ, ಅವರ ಕುಟುಂಬ ಸಬಲವಾದರೆ ದೇಶ ಸಬಲವಾದಂತೆ ಎಂದು ಮನಗಂಡ ಸರ್ಕಾರ ಮಹಿಳಾ ಸ್ವಸಹಾಯ ಸಂಘಗಳಿಗೆ ಬಡ್ಡಿ ರಹಿತ ಸಾಲ ನೀಡುತ್ತಿದೆ. ಮಹಿಳಾ ಸ್ವಸಹಾಯ ಸಂಘಗಳಿಗೆ ಇದುವರೆಗೆ ನೀಡಿದ ಸಾಲ ಶೇ. ೧೦೦ ರಷ್ಟು ಮರುಪಾವತಿ ಇದ್ದು, ಮಾದರಿಯಾಗಿವೆ. ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಮೇಲೆ ಬನ್ನಿ ಎಂದು ಕರೆನೀಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ಶಿವಾರೆಡ್ಡಿ ಮಾತನಾಡಿ, ರೈತ ದೇಶದ ಬೆನ್ನೆಲುಬು ರೈತ ಆರ್ಥಿಕವಾಗಿ ಮೇಲೆ ಬಂದರೆ ದೇಶ ಮುಂದುವರೆಯುವುದರಲ್ಲಿ ಸಂದೇಹವಿಲ್ಲ, ಪಡೆದ ಸಾಲವನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಂದು ಆರ್ಥಿಕವಾಗಿ ಮುಂದೆ ಬನ್ನಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಸಿ.ಸಿ ಸಾಲ ಮತ್ತು ಮಹಿಳಾ ಸ್ವಸಹಾಯ ಸಂಘಗಳಿಗೆ ೩ಕೋಟಿ ಹಣ ಸಾಲ ವಿತರಣೆ ಮಾಡಲಾಯಿತು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ಶಿವಾರೆಡ್ಡಿ, ಪಿ.ವಿ.ನಾಗರಾಜ್, ಮಳಮಾಚನಹಳ್ಳಿ ಎಸ್ಎಫ್ಸಿಎಸ್ ಅಧ್ಯಕ್ಷ ಮುನೇಗೌಡ, ಲಕ್ಷ್ಮಯ್ಯ, ಮುನಿಯಪ್ಪ, ಬೈರೇಗೌಡ, ರಾಜಣ್ಣ, ಜಗದೀಶ್, ಹಿತ್ತಲಹಳ್ಳಿ ಗೋಪಾಲಗೌಡ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -