ಅಂಗಡಿಗೆ ಹೋಗಲು ಶಾಪಿಂಗ್ ಬ್ಯಾಗ್, ತಾಂಬೂಲ ಹಾಕಿ ಕೊಡಲು ಬ್ಯಾಗು, ಬೆನ್ನಿಗೆ ಹಾಕಿಕೊಳ್ಳುವ ಬ್ಯಾಗು, ಮೊಬೈಲ್ ಇಟ್ಟುಕೊಳ್ಳುವ ಬ್ಯಾಗು, ಲ್ಯಾಪ್ ಟಾಪ್ ಇಡುವ ಬ್ಯಾಗು, ಊಟದ ಬಾಕ್ಸ್ ಇಡುವ ಬ್ಯಾಗು… ಹೀಗೇ ತರಹಾವರಿ ಬ್ಯಾಗುಗಳ ಲೋಕವೇ ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ತಯಾರಾಗುತ್ತಿವೆ.
ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ಏಳು ಮಂದಿ ಮಹಿಳೆಯರ ಕ್ರಿಯಾಶೀಲ ಕೊಡುಗೆಯೇ ಈ ಬ್ಯಾಗುಗಳ ಪ್ರಂಪಂಚ. ಸಿಂಗಪೂರ್, ಅಂಡಮಾನ್ ಮುಂತಾದ ಪ್ರದೇಶಗಳಿಗೆ ಹೋಗಿ ತಲುಪಿರುವ ಮುತ್ತೂರಿನ ಬ್ಯಾಗುಗಳು ವೈವಿಧ್ಯತೆಯೊಂದಿಗೆ ಗುಣಮಟ್ಟವನ್ನೂ ಕಾಯ್ದುಕೊಂಡಿದೆ.
ಮುತ್ತೂರು ಗ್ರಾಮದಲ್ಲಿ ದಿ.ಸಂಜಯ್ ದಾಸ್ ಗುಪ್ತ ಅವರ ನೆನಪಿನಲ್ಲಿ ‘ನಮ್ಮ ಮುತ್ತೂರು’ ಸಂಸ್ಥೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಬೆಂಗಳೂರಿನ ಕೋರಮಂಗಲದ ರೋಟರಿ ಸಂಸ್ಥೆಯ ಸಹಾಯದಿಂದ ಎರಡು ವರ್ಷಗಳ ಹಿಂದೆ ಗ್ರಾಮದ ಹಾಗೂ ಸುತ್ತಮುತ್ತಲ ಗ್ರಾಮಗಳ ಮಹಿಳೆಯರಿಗೆ ಹೊಲಿಗೆ ತರಬೇತಿಯನ್ನು ಕೊಡಿಸಿತು. ಶಿಕ್ಷಕಿಯೊಬ್ಬರನ್ನು ನೇಮಿಸಿ ಮಹಿಳೆಯರಿಗೆ ಹೊಲಿಗೆಯನ್ನು ಕಲಿಸಲಾಯಿತು. ಹೊಲಿಗೆ ಕಲಿತ ಮಹಿಳೆಯರು ಸ್ವಾವಲಂಬಿಗಳಾಗಬೇಕೆಂದು ಆಲೋಚಿಸಿ, ವಿವಿಧ ರೀತಿಯ ಬ್ಯಾಗುಗಳ ತಯಾರಿಕೆಗೆ ಅವರನ್ನು ಸಜ್ಜುಗೊಳಿಸಿದರು.
‘ಮಹಿಳೆಯರಿಗೆ ಏನಾದರೂ ಕೈಕಸುಬು ಕಲಿಸುವ ನಿಟ್ಟಿನಲ್ಲಿ ಟೈಲರಿಂಗ್ ತರಬೇತಿ ಕೊಟ್ಟೆವು. ಆನಂತರ ಗುಣಮಟ್ಟದ ಉತ್ಪನ್ನಗಳ ತಯಾರಿಕೆಗೆ ಆದ್ಯತೆ ಕೊಟ್ಟೆವು. ವಿವಿಧ ರೀತಿಯ ಬ್ಯಾಗುಗಳನ್ನು ತಯಾರಿಸಿದಲ್ಲಿ ಪ್ಲಾಸ್ಟಿಕ್ ಬಳಕೆಗೂ ಕಡಿವಾಣ ಹಾಕಬಹುದೆಂದು ಅದರ ಬಗ್ಗೆ ಗಮನ ಹರಿಸಿದೆವು. ಈಗ ಬೆಂಗಳೂರಿನ ಹಲವಾರು ಸಂಸ್ಥೆಗಳು ನಮ್ಮಿಂದ ಬ್ಯಾಗುಗಳನ್ನು ಖರೀದಿಸುತ್ತಿವೆ. ಮದುವೆ ಮುಂತಾದ ಸಮಾರಂಭಗಳಿಗೆ ತಾಂಬೂಲದ ಬ್ಯಾಗುಗಳಿಗೆ ಬಹಳ ಬೇಡಿಕೆಯಿದೆ. ಕಾನ್ಫರೆನ್ಸ್ ಗಾಗಿ ಕಂಪೆನಿಯೊಂದು ಈಚೆಗೆ ಬ್ಯಾಗುಗಳನ್ನು ಖರೀದಿಸಿತು. ಸಿಂಗಾಪೂರಿನ ಸಂಸ್ಥೆಯೊಂದಕ್ಕೆ ಮೊಬೈಲ್ ಇಡುವ ಬ್ಯಾಗುಗಳನ್ನು ಹೊಲಿದು ಕೊಟ್ಟಿದ್ದೇವೆ. ಅಂಡಮಾನ್ಗೂ ಹಲವಾರು ಬ್ಯಾಗುಗಳನ್ನು ಕಳುಹಿಸಿದ್ದೇವೆ’ ಎಂದು ‘ನಮ್ಮ ಮುತ್ತೂರು’ ಸಂಸ್ಥೆಯ ಉಷಾಶೆಟ್ಟಿ ತಿಳಿಸಿದರು.
‘ಏಳು ಮಂದಿ ಮಹಿಳೆಯರು ಈಗಿಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಅವರಿಗೆ ಮಾರ್ಗದರ್ಶನ ನೀಡಲು ಶಿಕ್ಷಕಿ ಇದ್ದಾರೆ. ಒಟ್ಟು ಐದು ಹೊಲಿಗೆ ಯಂತ್ರಗಳಿದ್ದು, ಅದರಲ್ಲಿ ಮೂರನ್ನು ರೋಟರಿ ಸಂಸ್ಥೆ, ಒಂದನ್ನು ಖಲೀಜಾ ದಾಸ್ ಗುಪ್ತ ಮತ್ತೊಂದನ್ನು ದಾನಿಯೊಬ್ಬರಿಂದ ಪಡೆಯಲಾಗಿದೆ. ಮೊದಲು ಬಾಡಿಗೆ ಮನೆಯೊಂದರಲ್ಲಿ ತರಬೇತಿಯನ್ನು ಪ್ರಾರಂಬಿಸಿದೆವು. ನಂತರ ವಿವಿಧ ದಾನಿಗಳಿಂದ ಗ್ರಾಮದಲ್ಲಿ ಹಾಳು ಬಿದ್ದಿದ್ದ ಮಡಿವಾಳಿ ನಂದೆಪ್ಪನವರ ಧರ್ಮಛತ್ರವನ್ನು ದುರಸ್ತಿಗೊಳಿಸಿ ಅಲ್ಲಿ ಹೊಲಿಗೆ ಕೇಂದ್ರವನ್ನು ನಡೆಸುತ್ತಿದ್ದೇವೆ. ನಮ್ಮ ಗ್ರಾಮದ ಮಹಿಳೆಯರು ತಯಾರಿಸುವ ಉತ್ಪನ್ನಗಳು ದೇಶ ವಿದೇಶಗಳಿಗೆ ತಲುಪಿಸುವುದು ನಮ್ಮ ಗುರಿ’ ಎಂದು ಅವರು ತಿಳಿಸಿದರು.
- Advertisement -
- Advertisement -
- Advertisement -
- Advertisement -