23.1 C
Sidlaghatta
Friday, February 13, 2026
Home Blog Page 1061

ಪುರಸಭೆಯ ನೂತನ ಅಧ್ಯಕ್ಷೆ ಮುಷ್ಠರಿ ತನ್ವೀರ್ ಮತ್ತು ಉಪಾಧ್ಯಕ್ಷೆ ಸುಮಿತ್ರಾ ರಮೇಶ್

0

ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ಸೋಮವಾರ ನಡೆದ ಚುನಾವಣೆಯಲ್ಲಿ 17ನೇ ವಾರ್ಡ್ನ ಕಾಂಗ್ರೆಸ್ ಸದಸ್ಯೆ ಮುಷ್ಠರಿ ತನ್ವೀರ್ ಅಧ್ಯಕ್ಷೆಯಾಗಿ ಮತ್ತು 8ನೇ ವಾರ್ಡ್ನ ಜೆಡಿಎಸ್ ಸದಸ್ಯೆ ಸುಮಿತ್ರಾ ರಮೇಶ್ ಉಪಾಧ್ಯಕ್ಷೆಯಾಗಿ ಆಯೆ್ಕಯಾದರು. ಪುರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿ ಮಹಿಳೆಗೆ ಮೀಸಲಾಗಿತ್ತು.
ಪರಿಶಿಷ್ಠ ಜಾತಿಯ ಏಕೈಕ ಮಹಿಳಾ ಅಭ್ಯರ್ಥಿ ಜೆಡಿಎಸ್ನ ಸುಮಿತ್ರಾ ರಮೇಶ್ ಬಹುಮತದ ಕೊರತೆಯಿದ್ದರೂ ಉಪಾಧ್ಯಕ್ಷೆಯಾಗುವುದು ಬಹುತೇಕ ಖಚಿತವಾಗಿತ್ತು. 27 ಮಂದಿ ಸದಸ್ಯರಿರುವ ಪುರಸಭೆಯಲ್ಲಿ ಕಾಂಗ್ರೆಸ್–14, ಜೆಡಿಎಸ್–11, ಬಿಜೆಪಿ –1 ಮತ್ತು ಪಕ್ಷೇತರ –1 ಸ್ಥಾನವಿದೆ. ಸಂಖ್ಯಾ ಬಲ ಹೆಚ್ಚಿರುವ ಕಾಂಗ್ರೆಸ್ನಿಂದ ಯಾರು ಅಧ್ಯಕ್ಷರಾಗುತ್ತಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ ಮುಷ್ಠರಿ ತನ್ವೀರ್ ಮತ್ತು ಜೆಡಿಎಸ್ನ ಪ್ರಭಾವತಿ ಸುರೇಶ್ ಸ್ಪರ್ಧಿಸಿದರು. ಮುಷ್ಠರಿ ತನ್ವೀರ್ 15 ಮತ ಗಳಿಸಿ ವಿಜೇತರಾದರೆ, ಪ್ರಭಾವತಿ ಸುರೇಶ್ 14 ಮತ ಪಡೆದು ಪರಾಭವಗೊಂಡರು. ಅಧ್ಯಕ್ಷೆ ಮುಷ್ಠರಿ ತನ್ವೀರ್ ಮತ್ತು ಉಪಾಧ್ಯಕ್ಷೆ ಸುಮಿತ್ರಾ ಮಹೇಶ್ ಅವರನ್ನು ಅಭಿನಂದಿಸಲಾಯಿತು.
ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ಎಂ.ರಾಜಣ್ಣ, ಚುನಾವಣಾಧಿಕಾರಿಯೂ ಆಗಿರುವ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ರಾಮ್ಪ್ರಕಾಶ್, ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ, ಶಿರಸ್ತೆದಾರ್ ಪ್ರಕಾಶ್ ಈ ಸಂದರ್ಭದಲ್ಲಿ ಹಾಜರಿದ್ದರು.

ಪೂಜಮ್ಮ ದೇವಿಯ ಹೂವಿನ ಕರಗ ಮಹೋತ್ಸವ

0

ಪಟ್ಟಣದ ಹಳೇ ರೇಷ್ಮೆ ಗೂಡು ಮಾರುಕಟ್ಟೆ ಹಿಂಭಾಗದಲ್ಲಿರುವ ಪೂಜಮ್ಮ ದೇವಿಯ ಹೂವಿನ ಕರಗ ಮಹೋತ್ಸವವನ್ನು ಭಾನುವಾರ ರಾತ್ರಿ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಕರಗದ ಪ್ರಯುಕ್ತ ಆರ್ಕೆಸ್ಟ್ರಾ, ಕೀಲುಕುದುರೆ, ಮುತ್ತಿನ ಪಲ್ಲಕ್ಕಿ ಮತ್ತು ವಾದ್ಯವೃಂದವನ್ನು ಆಯೋಜಿಸಲಾಗಿತ್ತು. ಮುಳಬಾಗಿಲ ಎಂ.ಶಂಕರಪ್ಪ ರಾತ್ರಿಯಿಡೀ ಕರಗವನ್ನು ಹೊತ್ತು ನಾಡೋಜ ಮುನಿವೆಂಕಟಪ್ಪನವರ ತಮಟೆಯ ವಾದನದೊಂದಿಗೆ ಊರೆಲ್ಲಾ ಸುತ್ತಿದಾಗ ದಾರಿಯುದ್ದಕ್ಕೂ ಮಲ್ಲಿಗೆ ಹೂಗಳನ್ನು ಅರ್ಪಿಸಿ, ಆರತಿ ಬೆಳಗುತ್ತಿದ್ದರು. ಕೆಲವೆಡೆ ಕರಗದ ಆಗಮನಕ್ಕಾಗಿ ರಸ್ತೆಯ ಮೇಲೆಲ್ಲಾ ರಂಗವಲ್ಲಿಯನ್ನು ಬಿಡಿಸಲಾಗಿತ್ತು.

ಪಟ್ಟಣದಲ್ಲಿ ಹೋಳಿ ಸಂಭ್ರಮ

0

ಪಟ್ಟಣದಲ್ಲಿ ಪ್ರೀತಿ ಮತ್ತು ಸ್ನೇಹದ ಸಂಕೇತವಾದ ಬಣ್ಣದ ಹಬ್ಬ ಹೋಳಿಯನ್ನು ಸೋಮವಾರ ಸಡಗರದಿಂದ ಆಚರಿಸಿದ್ದಲ್ಲದೇ ಕಾಮನ ಮೆರವಣಿಗೆಯನ್ನು ನಡೆಸಿದರು. ಮಕ್ಕಳು ಹಿರಿಯರೆಂಬ ಬೇಧವಿಲ್ಲದೆ ಬಣ್ಣಗಳನ್ನು ಎರಚಿಕೊಂಡು ಸಂಭ್ರಮಿಸಿದರು. ಎಳೆಯ ಹುಡುಗರಂತೂ ಬೀದಿ ಬೀದಿ ಸುತ್ತುತ್ತಾ ತಮ್ಮ ಸ್ನೇಹಿತರೊಂದಿಗೆ ಬಣ್ಣವನ್ನು ಹಾಕಿಕೊಳ್ಳುತ್ತಾ ಆನಂದಿಸಿದರು.
ಪಟ್ಟಣದ ಅಯೋಧ್ಯಾನಗರ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿ ಹೋಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕಾಮಣ್ಣ ಮತ್ತು ರತಿದೇವಿಯರ ವಿಗ್ರಹಗಳ ಮರೆವಣಿಗೆಯಲ್ಲಿ ಚಿಣ್ಣರು, ಯುವಕರು ಸೇರಿದಂತೆ ಹಿರಿಯರು ಪರಸ್ಪರ ಬಣ್ಣ ಎರಚಿ ಹೋಳಿಯಲ್ಲಿ ಮಿಂದೆದ್ದರು. ಪ್ರಮುಖ ಬೀದಿಗಳಲ್ಲಿ ನಡೆಸಿದ ಮೆರವಣಿಗೆಯ ನಂತರ ಪಟ್ಟಣದ ಹೂವೃತ್ತದಲ್ಲಿ ಇದುವರೆಗೂ ಸಂಗ್ರಹಿಸಿದ್ದ ಉರುವಲುಗಳನ್ನು ಹಾಗೂ ಕಾಮನ ಬೊಂಬೆಯನ್ನು ಬೆಂಕಿ ಹಚ್ಚಿ ಭಸ್ಮ ಮಾಡಿದ್ದಲ್ಲದೇ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಹೋಳಿ ಹುಣ್ಣಿಮೆ ಅಂಗವಾಗಿ ಪಟ್ಟಣದಲ್ಲಿ ಎರಡು ದಿನಗಳಿಂದ ನಡೆದ ಕಾಮನ ಮೆರವಣಿಗೆ ಆಕರ್ಷಕವಾಗಿತ್ತು. ರಾವಣಾಸುರ, ಬೇಡರಕಣ್ಣಪ್ಪ, ಆಂಜನೇಯ, ವೀರಬ್ರಹ್ಮೇಂದ್ರಸ್ವಾಮಿ, ಕೃಷ್ಣ, ಪಾಳೇಗಾರ, ಮಂತ್ರವಾದಿ ವೇಷಗಳು ವಿಶೇಷ ಆಕರ್ಷಣೆಯಾಗಿತ್ತು.
ನಗರ್ತಮಂಡಳಿಯ ಅಧ್ಯಕ್ಷ ಶಿವಶಂಕರ್, ಉಪಾಧ್ಯಕ್ಷ ಎಸ್.ಎಸ್.ನಾಗರಾಜ್, ಕೆ.ಎಂ.ವಿನಾಯಕ, ಕೆ.ಸಿ.ಸುರೇಶ್ಬಾಬು, ಮಂಜುನಾಥ್, ದೇವರಾಜ್, ನವೀನ್, ಮುಕೇಶ್ ಮತ್ತಿತರರು ಹಾಜರಿದ್ದರು.

ಚಿಕ್ಕದಾಸರಹಳ್ಳಿ ಬ್ಯಾಟರಾಯಸ್ವಾಮಿಯ ಬ್ರಹ್ಮರಥೋತ್ಸವ

0

ಬಂಬೈನೂರ ಎರಡು ವರ್ಷಗಳ ಇತಿಹಾಸ ಪ್ರಸಿದ್ದ ತಾಲ್ಲೂಕಿನ ಚಿಕ್ಕದಾಸರಹಳ್ಳಿ ಬಳಿ ಗುಟ್ಟದ ಮೇಲಿರುವ ಬ್ಯಾಟರಾಯಸ್ವಾಮಿಯ ಬ್ರಹ್ಮರಥೋತ್ಸವವು ಭಾನುವಾರ ಶಾಸಕ ಎಂ.ರಾಜಣ್ಣ ಮತ್ತು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಚಾಲನೆ ನೀಡುವುದರೊಂದಿಗೆ ನಡೆಯಿತು. ಬ್ಯಾಟರಾಯಸ್ವಾಮಿ ವಿಗ್ರಹವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದರು.
ನೂರಾರು ಭಕ್ತರು ಸುತ್ತ ಮುತ್ತಲ ಗ್ರಾಮಗಳು ಮತ್ತು ತಾಲ್ಲೂಕು ಕೇಂದ್ರಗಳಿಂದ ಆಗಮಿಸಿದ್ದರು. ತೇರಿಗೆ ದವನದ ಜೊತೆ ಬಾಳೆಹಣ್ಣನ್ನು ಅರ್ಪಿಸುತ್ತ, ತೇರನ್ನು ಗುಟ್ಟದ ಪ್ರದಕ್ಷಿಣೆ ಮಾಡಿಸಿದರು. ವಾದ್ಯಗಳೊಂದಿಗೆ ವೀರಗಾಸೆ ಮತ್ತು ಡೊಳ್ಳುಕುಣಿತ ರಥದ ಮುಂದೆ ಎಲ್ಲರನ್ನೂ ಆಕರ್ಷಿಸುತ್ತಿತ್ತು.
ವಿಜಯನಗರ ಕಾಲದ ಈ ಬ್ಯಾಟರಾಯಸ್ವಾಮಿ ದೇವಾಲಯವು ಎತ್ತರವಾದ ಗುಡ್ಡ ಅಥವಾ ದಿಬ್ಬದ ಮೇಲೆ ವಿಸ್ತಾರವಾಗಿ ಹರಡಿಕೊಂಡಿದೆ. ಬ್ಯಾಟರಾಯಸ್ವಾಮಿಯು ನಾಯಕ ಜನಾಂಗದವರ ಕುಲದೈವವಾಗಿದ್ದು, ಈ ದೇವರ ಪೂಜಾ ಕೈಂಕರ್ಯಗಳನ್ನು ನಾಯಕ ಜನಾಂಗದವರೇ ನಡೆಸುತ್ತಿರುವರು.
ದೇವಾಲಯವು ವಿಶಾಲವಾದ ಪ್ರಾಕಾರ, ಗರ್ಭಗೃಹ, ಅರ್ಧಮಂಟಪ ಹಾಗೂ ಮುಖಮಂಟಪಗಳನ್ನು ಹೊಂದಿದೆ. ಗರ್ಭಗೃಹದ ಬಾಗಿಲುವಾಡವು ಅಲಂಕಾರಿಕವಾಗಿದ್ದು, ಲಲಾಟದಲ್ಲಿ ಗಜಲಕ್ಷ್ಮಿಯ ಬಿಂಬವನ್ನು ಹೊಂದಿದೆ ಹಾಗೂ ದ್ವಾರದ ಎರಡೂ ಕಡೆ ದ್ವಾರಪಾಲಕರ ವಿಗ್ರಹಗಳಿವೆ. ಬ್ಯಾಟರಾಯಸ್ವಾಮಿಯ ವಿಗ್ರಹವು ಸುಮಾರು ೪.೫ ಅಡಿ ಎತ್ತರವಿದೆ. ಈ ವಿಗ್ರಹವು ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಅಭಯ ಹಾಗೂ ಗದೆಗಳನ್ನು ಹೊಂದಿದೆ. ಬ್ಯಾಟರಾಯನ ಉತ್ಸವಮೂರ್ತಿಯ ಜೊತೆಗೆ ಶ್ರೀದೇವಿ ಭೂದೇವಿಯರ ಸುಂದರ ಶಿಲ್ಪಗಳು ಆಕರ್ಷಕವಾಗಿವೆ.
ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬ್ಯಾಟರಾಯಶೆಟ್ಟಿ, ದೇವಾಲಯದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಯರ್ರಪ್ಪ, ಪಾಪಣ್ಣ, ಲೋಕೇಶ್, ಲಕ್ಷ್ಮಣಮೂರ್ತಿ, ಆಗಮಿಕರಾದ ವಿ.ಎಸ್.ಕೇಶವಭಟ್ಟಾಚಾರ್ಯ, ವೈ.ಎನ್.ದಾಶರಥಿ, ಜಿ.ಕೆ.ವಾಸುದೇವ, ಆಂಜನಪ್ಪ, ರಂಗಪ್ಪ ಮತ್ತಿತರರು ಹಾಜರಿದ್ದರು.

2009 ರಿಂದ 2014 ರ ವರೆಗೆ ನಡೆದ ಲೋಕಸಭೆ ಹಾಗೂ ವಿಧಾನ ಸಭಾ ಚುನಾವಣೆಯ ಮತದಾನದ ಸಂಪೂರ್ಣ ಮಾಹಿತಿ

0

[table id=2 /]

ನಾಲ್ಕನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

0

ವಾಸವಿ ಕಲ್ಯಾಣ ಮಂಟಪದ ಬಳಿ ಬೆಳಿಗ್ಗೆ ಪ್ರಧಾನ ನ್ಯಾಯಾಧೀಶರಾದ ಎಸ್.ಮಹೇಶ್ ರಾಷ್ಟ್ರ ಧ್ವಜಾರೋಹಣ ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ ನಾಡಧ್ವಜಾರೋಹಣ ಮತ್ತು ಕಸಾಪ ತಾಲ್ಲೂಕು ಅಧ್ಯಕ್ಷ ವಿ.ಕೃಷ್ಣ ಪರಿಷತ್ತಿನ ಧ್ವಜಾರೋಹಣ ಮಾಡುವುದರೊಂದಿಗೆ ಸಮ್ಮೇಳನ ಪ್ರಾರಂಭವಾಯಿತು.
ಸಮ್ಮೇಳನಾಧ್ಯಕ್ಷ ಡಾ.ಡಿ.ಟಿ.ಸತ್ಯನಾರಾಯಣರಾವ್ ಅವರನ್ನು ತೆರೆದ ಜೀಪಿನಲ್ಲಿ ಪಟ್ಟಣದ ಬಸ್ ನಿಲ್ದಾಣದಿಂದ ನಾಡಧ್ವಜಗಳ ನಡುವಿನಿಂದ ಕರೆತರಲಾಯಿತು. ಮೆರವಣಿಗೆಗೆ ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ ಚಾಲನೆ ನೀಡಿದರು. ಪೂರ್ಣಕುಂಭ ಹೊತ್ತ ಶಾಲಾ ವಿದ್ಯಾರ್ಥಿನಿಯರು, ವಿವಿಧ ಶಾಲೆಗಳ ವಾದ್ಯವೃಂದಗಳು, ವಾಲಗ ಡೋಲುಗಳ ಮಂಗಳವಾದ್ಯ, ಡೊಳ್ಳು ಕುಣಿತ, ಗಾರುಡಿಗೊಂಬೆ ಮುಂತಾದ ಕಲಾತಂಡಗಳೊಂದಿಗೆ ಮೆರವಣಿಗೆ ಕಳೆಗಟ್ಟಿದ್ದು, ರಸ್ತೆಯುದ್ದಕ್ಕೂ ಜನರು ನಿಂತು ನೋಡಿದರು.
ವಾಸವಿ ಕಲ್ಯಾಣ ಮಂಟಪದಲ್ಲಿ ಸಮ್ಮೇಳನವನ್ನು ರಾಷ್ಟ್ರಕವಿ ಡಾ.ಜಿ.ಎಸ್ ವೇದಿಕೆಯಲ್ಲಿ ಉದ್ಘಾಟಿಸಿದ ನಂತರ ಸಮ್ಮೇಳನಾಧ್ಯಕ್ಷ ಡಾ.ಡಿ.ಟಿ.ಸತ್ಯನಾರಾಯಣರಾವ್ ಮಾತನಾಡಿ, ’ಮಾತೃಭಾಷೆ ಅರಿವಿನ ದಾರಿ. ಅದರ ಮಹತ್ವವನ್ನು ಅರಿಯಬೇಕು. ಪ್ರಯೋಜನವನ್ನು ಮನಗಾಣಬೇಕು. ಪೋಷಕರು ಮೊದಲು ಜಾಗೃತರಾಗಬೇಕು. ಮಳೆಯ ಅಭಾವದಿಂದ, ಕೆರೆಗಳಲ್ಲಿ ನೀರಿಲ್ಲದೆ, ಅಂತರ್ಜಲ ಬತ್ತಿದ್ದು, ಫ್ಲೋರೈಡ್ ಸಮಸ್ಯೆ ಕಾಡುತ್ತಿದೆ. ನಮ್ಮ ಕೃಷಿಗೆ ಅಗತ್ಯವಾದ ನೀರನ್ನು ಒದಗಿಸಿದರೆ ಚಿನ್ನದಂಥ ಬೆಳೆಯನ್ನು ಬೆಳೆದು ರೈತರು ಆರ್ಥಿಕವಾಗಿ ಸದೃಢರಾಗಬಲ್ಲರು. ಸರ್ಕಾರ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕು. ಸಮುದ್ರದ ಪಾಲಾಗುವ ನೇತ್ರಾವತಿ ನೀರನ್ನು ತಂದು ಬರಪೀಡಿತ ಜಿಲ್ಲೆಗಳನ್ನು ಅಭಿವೃದ್ಧಿಗೊಳಿಸಬೇಕು’ ಎಂದು ನುಡಿದರು.
ತಮ್ಮ ಅಧ್ಯಕ್ಷ ಭಾಷಣದಲ್ಲಿ ಶಿಡ್ಲಘಟ್ಟದ ಇತಿಹಾಸ, ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟಗಾರರು, ತಾಲ್ಲೂಕಿನ ವಿಶೇಷತೆಗಳು, ಸಾಹಿತ್ಯ, ಸಂಸ್ಕೃತಿ, ಜನಪದ ಕಲಾ ಪ್ರಕಾರಗಳು, ವೈಶಿಷ್ಟ್ಯಗಳು, ದೇವಾಲಯಗಳು, ತಾಲ್ಲೂಕಿನಲ್ಲಿ ಜನಿಸಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರು, ಬದಲಾಗುತ್ತಿರುವ ಆಚಾರ ವಿಚಾರ ಮತ್ತು ಸಂಸ್ಕೃತಿ, ಜಿಲ್ಲೆಯ ಭಾರತರತ್ನರು, ಕನ್ನಡ ಭಾಷೆ ಬಗ್ಗೆ ಅವರು ವಿಸ್ತೃತವಾಗಿ ಮಾತನಾಡಿದರು.
ಶಾಸಕ ಎಂ.ರಾಜಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಜಿಲ್ಲಾ ಕಸಾಪ ಅಧ್ಯಕ್ಷ ವೈ.ಎಲ್.ಹನುಮಂತರಾವ್, ತಾಲ್ಲೂಕು ಕಸಾಪ ಅಧ್ಯಕ್ಷ ವಿ.ಕೃಷ್ಣ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಪುರಸಭಾ ಸದಸ್ಯ ಲಕ್ಷ್ಮೀನಾರಾಯಣ್, ರಾಮಪ್ರಸಾದ್, ಎಸ್.ವಿ.ನಾಗರಾಜರಾವ್, ಕೆ.ಎಂ.ವಿನಾಯಕ, ಬಿ.ಆರ್.ಅನಂತಕೃಷ್ಣ, ಚಿಕ್ಕವೆಂಕಟರಾಯಪ್ಪ, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಗುಡಿಹಳ್ಳಿಯ ಪಾರ್ವತಾಂಬ ಸಮೇತ ಸೋಮೇಶ್ವರ ದೇವಾಲಯದಲ್ಲಿ ರಥೋತ್ಸವ

0

ಮಾಘ ಮಾಸ ಬಹುಳ ಶುಕ್ರವಾರ ವಿಶೇಷ ಪೂಜೆ, ಹೋಮ, ಅಭಿರ್ಜನ್ ಮಹೂರ್ತದಲ್ಲಿ ಮಧ್ಯಾಹ್ನ ಬ್ರಹ್ಮರಥೋತ್ಸವವನ್ನು ವೀರಗಾಸೆ ಮುಂತಾದ ಕಲಾ ತಂಡಗಳು ಹಾಗೂ ವಾಂದ್ಯ ವೃಂದ ಸಮೇತ ನಡೆಸಲಾಯಿತು. ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಸಲಾಯಿತು.
ಸುತ್ತಮುತ್ತಲ ಗ್ರಾಮಗಳು ಹಾಗೂ ತಾಲ್ಲೂಕುಗಳಿಂದ ನೂರಾರು ಭಕ್ತರು ಪೂಜೆ ಹಾಗೂ ರಥೋತ್ಸವದಲ್ಲಿ ಭಾಗವಹಿಸಿದ್ದರು. ವಿವಿಧ ಗ್ರಾಮಗಳವರು ಪಾನಕ ಬಂಡಿಗಳನ್ನು ತಂದು ಬಿಸಿಲಿನಲ್ಲಿ ದಣಿದ ಭಕ್ತರಿಗೆ ಉಚಿತವಾಗಿ ವಿತರಿಸಿದರು.
ರಥೋತ್ಸವಕ್ಕೆ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮತ್ತು ಶಾಸಕ ಎಂ.ರಾಜಣ್ಣ ಚಾಲನೆ ನೀಡಿದರು. ಸುಮಾರು ಆರು ನೂರು ವರ್ಷಗಳ ಇತಿಹಾಸವಿರುವ ಸೋಮೇಶ್ವರ ದೇವಾಲಯದ ಆವರಣದಲ್ಲಿ ಇತಿಹಾಸವನ್ನು ಸಾರುವ ಹಲವಾರು ವೀರಗಲ್ಲುಗಳು ಹಾಗೂ ಶಾಸನ ಕಲ್ಲುಗಳಿವೆ. ರಥೋತ್ಸವದ ಅಂಗವಾಗಿ ಮಹಿಳೆಯರು ಮನೆಮನೆಯಿಂದಲೂ ದೀಪಗಳನ್ನು ತಂದು ದೇವರಿಗೆ ಬೆಳಗಿದರು. ದೇವಾಲಯವನ್ನು ವಿದ್ಯುತ್ ದೀಪಗಳಿಂದ ಮತ್ತು ಹೂಗಳಿಂದ ಅಲಂಕರಿಸಲಾಗಿತ್ತು.
ಗುಡಿಹಳ್ಳಿ ಜಿ.ವಿ.ಮುನಿವೆಂಕಟಸ್ವಾಮಪ್ಪ, ಚಿಕ್ಕವೆಂಕಟರೆಡ್ಡಿ, ಕಮಲಮ್ಮ, ಅಬ್ಲೂಡು ಬಿ.ಆಂಜನೇಯ, ಅರ್ಚಕ ಗಾಣಿಗರಹೊಸಹಳ್ಳಿಯ ಎಸ್.ನಂಜುಂಡಯ್ಯ, ಆಗಮಿಕರಾದ ಆರ್.ಗಣೇಶ್ ದೀಕ್ಷಿತ್, ಚನ್ನಕೃಷ್ಣಪ್ಪ ಮತ್ತಿತರರು ಹಾಜರಿದ್ದರು.

ಬೆಳ್ಳೂಟಿ ಗ್ರಾಮದಲ್ಲಿ ಆರ್.ಓ. ಪದ್ಧತಿಯ ಶುದ್ಧಿಕರಿಸಿದ ನೀರು ಸರಬರಾಜು ಘಟಕ

0

ಆನೂರು ಗ್ರಾಮ ಪಂಚಾಯಿತಿಯ ಬೆಳ್ಳೂಟಿ ಗ್ರಾಮದಲ್ಲಿ ಈಚೆಗೆ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಆರ್.ಓ. ಪದ್ಧತಿಯ ಶುದ್ಧಿಕರಿಸಿದ ನೀರು ಸರಬರಾಜು ಘಟಕವನ್ನು ಉದ್ಘಾಟಿಸಲಾಯಿತು.
ಸುಮಾರು ಎಂಟು ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಆರ್.ಓ. ಘಟಕವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ಮಾತನಾಡಿ, ಈಗಾಗಲೇ ನಮ್ಮ ಭಾಗದಲ್ಲಿ ಅಂತರ್ಜಲ ಕುಸಿದಿದೆ. 1500 ಅಡಿಯವರೆಗೂ ಕೊಳವೆ ಬಾವಿಗಳನ್ನು ಕೊರೆಸುತ್ತಿದ್ದು, ಎಲ್ಲೆಡೆ ಫ್ಲೋರೈಡ್ ವ್ಯಾಪಿಸಿದೆ. ತಾಯಿಯ ಹಾಲಿನಲ್ಲೂ ಫ್ಲೋರೈಡ್ ಅಂಶಗಳಿವೆ ಎಂಬುದು ದೃಢಪಟ್ಟಿದೆ. ಹಾಗಾಗಿ ಜಿಲ್ಲಾ ಪಂಚಾಯಿತಿಯ ವತಿಯಿಂದ ಪ್ರತಿ ಪಂಚಾಯಿತಿಯಲ್ಲೂ ಫೋರೈಡ್ ಅಂಶ ಹೆಚ್ಚಿರುವ ಎರಡು ಹಳ್ಳಿಗಳನ್ನು ಗುರುತಿಸಿ ನೀರು ಶುದ್ಧೀಕರಣ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಇದನ್ನು ಗ್ರಾಮಸ್ಥರೆಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ಕುಡಿಯಲು ಮಾತ್ರ ಈ ನೀರನ್ನು ಬಳಸಿ. ನೀರನ್ನು ಮಿತವ್ಯಯವಾಗಿ ಬಳಸಿ, ಅಮೂಲ್ಯವಾದ ನೀರನ್ನು ಪೋಲು ಮಾಡಬಾರದು. ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿಗೂ ಇಂಥಹ ನೀರು ಶುದ್ಧಿಕರಣ ಘಟಕಗಳನ್ನು ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.
ಮುಖಂಡರಾದ ನಂದಮುನಿಕೃಷ್ಣಪ್ಪ, ಆರ್.ಶ್ರೀನಿವಾಸ್, ಬೆಳ್ಳೂಟಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಹನುಮೇಗೌಡ, ಬೈರೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ವೆಂಕಟೇಶ್, ಕಾರ್ಯದರ್ಶಿ ಶ್ರೀನಾಥ, ಕೆಂಪರೆಡ್ಡಿ, ಬೆಳ್ಳೂಟಿ ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು

ಭಟ್ರೇನಹಳ್ಳಿಯ ಸಾಯಿನಾಥ ಜ್ಞಾನಮಂದಿರದಲ್ಲಿ ಶಿವರಾತ್ರಿ ಜಾಗರಣೆಯ ಪ್ರಯುಕ್ತ ಯಕ್ಷಗಾನದ ಪ್ರಸಂಗ

0

ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದ ಯಕ್ಷಗಾನವನ್ನು ತಾಲ್ಲೂಕಿನ ಮಳ್ಳೂರಿನ ಹೊರವಲಯದ ಭಟ್ರೇನಹಳ್ಳಿಯ ಸಾಯಿನಾಥ ಜ್ಞಾನಮಂದಿರದಲ್ಲಿ ಶಿವರಾತ್ರಿ ಜಾಗರಣೆಯ ಪ್ರಯುಕ್ತ ಆಯೋಜಿಸಲಾಗಿತ್ತು. ದಕ್ಷಿಣ ಕನ್ನಡದ ಕಲಾವಿದರೇ ನಡೆಸಿಕೊಟ್ಟ ‘ಶ್ವೇತ ಕುಮಾರ ಚರಿತ್ರೆ’ ಎಂಬ ಪ್ರಸಂಗವನ್ನು ಅಲ್ಲಿನ ಭಾಷಾ ಸೊಗಡು, ವೇಷ, ಕಲಾವಿದರ ನೃತ್ಯ, ಹಿಮ್ಮೇಳದ ತಾಳಮದ್ದಲೆ ಸಂಗೀತ, ಹಾಡುಗಾರಿಕೆ, ಹಾವಭಾವವನ್ನೆಲ್ಲಾ ದೇವಾಲಯಕ್ಕೆ ಆಗಮಿಸಿದ್ದ ನೂರಾರು ಜನರು ನೋಡಿ ಆನಂದಿಸಿದರು.
ಸಾಯಿನಾಥ ಜ್ಞಾನ ಮಂದಿರದಲ್ಲಿರುವ ಜಲಕಂಠೇಶ್ವರಸ್ವಾಮಿಗೆ ರುದ್ರಾಭಿಷೇಕ ಮಾಡಿ, ಭಕ್ತರಿಗೆಲ್ಲಾ ಪ್ರಸಾದ ವಿನಿಯೋಗಿಸಲಾಯಿತು. ಸಾಯಿಬಾಬಾ, ಗಣಪತಿ ಮತ್ತು ಸುಬ್ರಮಣ್ಯಸ್ವಾಮಿಗೂ ವಿಶೇಷ ಅಲಂಕಾರ ಮಾಡಲಾಗಿತ್ತು.
ಶಿವರಾತ್ರಿಯ ಜಾಗರಣೆಯ ಅಂಗವಾಗಿ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ದೇವಾಲಯದಲ್ಲಿ ’ಶಿವರಾತ್ರಿ ಕವಿರಾತ್ರಿ’ ಎಂಬ ಕವನ ವಾಚನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕವಿಗಳಾದ ಈಧರೆ ಪ್ರಕಾಶ್, ದೇವರಮಳ್ಳೂರು ಚನ್ನಕೃಷ್ಣ, ದೇವರಾಜ್, ಈಶ್ವರ್ ಸಿಂಗ್ ಕವನ ವಾಚಿಸಿದರು. ವರದನಾಯಕನಹಳ್ಳಿಯ ಈಧರೆ ತಂಡದಿಂದ ಡೊಳ್ಳುಕುಣಿತ, ದೇವರಮಳ್ಳೂರು ಮಹೇಶ್ ಮತ್ತು ಪ್ರಕಾಶ್ ಅವರಿಂದ ಜನಪದ ಗಾಯನ, ಮಕ್ಕಳಿಂದ ಕೋಲಾಟವೂ ನಡೆಯಿತು. ಫಲಾಹಾರವನ್ನು ಭಕ್ತರಿಗೆಲ್ಲಾ ವಿತರಿಸಿದರು.
ಬೆಳಗಿನ ಜಾವದವರೆಗೂ ಸಂಪೂರ್ಣ ಜಾಗರಣೆ ಮಾಡಿ ಚಟುವಟಿಕೆಯಿಂದಿದ್ದ ಹತ್ತು ಜನರನ್ನು ಆಯ್ದು ದೇವಾಲಯದ ವತಿಯಿಂದ ಬಹುಮಾನ ವಿತರಿಸಿದರು.

ತಾಲ್ಲೂಕಿನ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ

0

ಪಟ್ಟಣದ ತಾಲ್ಲೂಕು ಕಚೇರಿಯ ಮುಂದೆ ಸೋಮವಾರ ಐದು ಕೋಟಿ ಮೂರು ಲಕ್ಷ ರೂಗಳ ವೆಚ್ಚದಲ್ಲಿ ತಾಲ್ಲೂಕಿನ ಪುರಬೈರೇನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ನೂತನ ಕಟ್ಟಡದ ಸಮರ್ಪಣೆ, ತಾಲ್ಲೂಕು ಕಚೇರಿಯಲ್ಲಿ ನೂತನವಾಗಿ ನಿರ್ಮಿಸಿರುವ ಸಭಾಂಗಣ, 45 ಲಕ್ಷ ರೂಗಳ ವೆಚ್ಚದ ಚಿಂತಾಮಣಿ ತಾಲ್ಲೂಕು ಏನಿಗದೆಲೆ ಗ್ರಾಮದ ಜವಾಹರ್ ನೆಹರೂ ವಿದ್ಯಾಪೀಠದ ಕಾಮಗಾರಿಗಳನ್ನು ಸೂಕ್ಷ್ಮ, ಸಣ್ಣ ಮತ್ತು ಮದ್ಯಮ ಉದ್ಯಮಗಳ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಅವರು ನೆರವೇರಿಸಿದರು. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯೇ ಇದರಲ್ಲಿ ಹೆಚ್ಚಿ ಭಾಗವಿದೆ ಎಂದು ಅವರು ಹೇಳಿದರು.
ಶಾಶ್ವತ ನೀರು ಬರದಿದ್ದಲ್ಲಿ ನಮ್ಮ ಭಾಗದ ಜನರು ಗುಳೇ ಹೋಗಬೇಕಾದ ಪರಿಸ್ಥಿತಿಯಿದೆ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಸಫಲರಾಗಿದ್ದೇವೆ. ಜಿಲ್ಲೆಗೆ ನೀರು ಬರುವ ಯಾವ ಯೋಜನೆಯಾದರೂ ಮಾಡಲೇ ಬೇಕೆಂಬ ಒತ್ತಡ ಹೇರಲಾಗಿದೆ. ಎತ್ತಿನ ಹೊಳೆ ಅಥವಾ ಪರಮಶಿವಯ್ಯನವರ ಯೋಜನೆಯಾಗಲೀ ಜಾರಿಯಾಗುವುದರಲ್ಲಿ ಸಂಶಯವಿಲ್ಲ ಎಂದು ನುಡಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ ಪಟ್ಟಣದಲ್ಲಿ ಐದರಿಂದ ಆರು ಕೋಟಿ ರೂ ವೆಚ್ಚದಲ್ಲಿ ರಂಗಮಂದಿರ ಹಾಗೂ ಬಸ್ ಡಿಪೊಗಾಗಿ ಸ್ಥಳ ಪರಿಶೀಲನೆಗಳು ನಡೆದಿವೆ. ಎಲ್ಲರ ಸಹಕಾರವಿದ್ದಲ್ಲಿ ಶೀಘ್ರವಾಗಿ ಕಾಮಗಾರಿಗಳು ಪ್ರಾರಂಭವಾಗುತ್ತವೆಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನೀಲಾ ಮಂಜುನಾಥ್, ಉಪವಿಭಾಗಾಧಿಕಾರಿ ಶಾಂತಲಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ದೇವರಾಜೇಗೌಡ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್.ಎಂ.ನಾರಾಯಣಸ್ವಾಮಿ, ಸತೀಶ್, ತಾಲ್ಲೂಕು ಜೆ.ಡಿ.ಎಸ್ ಅಧ್ಯಕ್ಷ ಡಾ.ಧನಂಜಯರೆಡ್ಡಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರಪ್ಪ, ಮುನಿಕೃಷ್ಣಪ್ಪ, ಪುರಸಭಾ ಸದಸ್ಯ ಅಫ್ಸರ್ ಪಾಷ, ಬ್ಯಾಟರಾಯಶೆಟ್ಟಿ, ಬಂಕ್ ಮುನಿಯಪ್ಪ, ಅಶ್ವತ್ಥನಾರಾಯಣಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!