ಮಂಗಳ ವಾಸಕ್ಕೆ ಯೋಗ್ಯವೆ?
ಮಂಗಳನಲ್ಲಿ ವಾಸ ಯೋಗ್ಯ ವ್ಯವಸ್ಥೆ ಏನಿದೆ ಮೊದಲು ನೋಡೋಣ: ಭೂಮಿಗಿಂತ ಕಡಿಮೆ ಪ್ರಮಾಣದಲ್ಲಾದರೂ ಸರಿ, ಅಲ್ಲಿ ಸೂರ್ಯರಶ್ಮಿ ಬೀಳುತ್ತದೆ, ಬಾಹ್ಯ ವಿಕಿರಣಗಳಿಂದ ಸಾಧಾರಣ ಮಟ್ಟಿಗೆ ರಕ್ಷಣೆ ಕೊಡುವ ವಾಯುಮಂಡಲ ಇದೆ, ಮಾನವದೇಹ ಹೊಂದಿಕೊಳ್ಳುವಷ್ಟು ಅಲ್ಪ ಗುರುತ್ವ ಇದೆ. ತನ್ನ ಅಕ್ಷದಲ್ಲಿ ಹೆಚ್ಚುಕಡಿಮೆ ಭೂಮಿಯಷ್ಟೇ ವೇಗವಾಗಿ ಸುತ್ತು ಹಾಕುವ ಮಂಗಳನಲ್ಲಿ ಹಗಲು ಮತ್ತು ರಾತ್ರಿ ಹೆಚ್ಚೂಕಡಿಮೆ ಭೂಮಿಯಷ್ಟೇ ಇದ್ದು ಮಾನವನ ಜೈವಿಕ ಗಡಿಯಾರಕ್ಕೆ ಏನೂ ತೊಂದರೆಯಾಗದು. ಅಲ್ಲಿಯೂ ನಮ್ಮಲ್ಲಿಯಂತೆ ವರ್ಷಕ್ಕೆ ನಾಲ್ಕು ಋತುಗಳಿವೆ.
ಇನ್ನು, ಇದೊಂದು ದುಸ್ಸಾಹಸವೇ, ಏಕೆಂದರೆ,
* ಮಂಗಳನ ವಾಯುಮಂಡಲ ನೂರಕ್ಕ್ಕೆ ತೊಂಭತ್ತಾರು ಪಾಲು ಇಂಗಾಲದ ಡೈಆಕ್ಸೈಡಿನಿಂದ ತುಂಬಿದೆ. ಉಸಿರಾಡಲು ಸದಾಕಾಲ ಆಕ್ಸಿಜನ್ ವ್ಯವಸ್ಥೆ ಬೇಕೇಬೇಕು. ವಾತಾವರಣ ಭೂಮಿಗಿಂತ ನೂರು ಪಟ್ಟು ತೆಳು ಕೂಡ. ಆದ್ದರಿಂದ ಮೇಲ್ಮೈ ಮೇಲೆ ಬಿದ್ದ ಸೂರ್ಯಶಕ್ತಿಯನ್ನು ಹಿಡಿದಿಡುವ ವ್ಯವಸ್ಥೆ ಮಾನವ ಸ್ನೇಹಿಯಾಗಿಲ್ಲ.
* ಮಂಗಳನ ದಪ್ಪನೆಯ ನೆಲಹಾಸಿನಡಿ ನೀರಿನ ಸೆಲೆ ಸಿಕ್ಕಿತೆನ್ನಿ, ಅದನ್ನು ಮೇಲೆ ತಂದರೆ ಜತನವಾಗಿ ಕಾಪಾಡಬೇಕಾದೀತು! ಏಕೆಂದರೆ ವಾಯು ಒತ್ತಡ ಇಲ್ಲದಿರುವುದರಿಂದ ಹಾಗೂ ಗುರುತ್ವಾಕರ್ಷಣೆಯೂ ಕೂಡ ಕಡಿಮೆ ಇರುವುದರಿಂದ ಮೇಲೆ ಬಂದ ದ್ರವರೂಪದ ನೀರು ಕ್ಷಣಮಾತ್ರದಲ್ಲಿ ಆವಿಯಾಗಿ ಹಾರಿಹೋಗುತ್ತದೆ!
* ಮಂಗಳನ ವಿರಳ ವಾತಾವರಣದಲ್ಲಿ ಮಾನವ ದೇಹದ ಮೇಲೆ ಬೀಳಬೇಕಾದ ವಾಯುವಿನ ಒತ್ತಡವೂ ಬಹಳ ಕಡಿಮೆ ಇದೆ. ಕನಿಷ್ಟ 700 ಮಿಲಿಬಾರ್ನಷ್ಟು ಒತ್ತಡ ನಮಗೆ ಬೇಕೇಬೇಕು. ಮಂಗಳನಲ್ಲಿ ವಾಯುಒತ್ತಡ ಬರೀ 7.5 ಮಿಲಿಬಾರಿದೆ. ಭೂಮಿಯಲ್ಲಿ ಎವರೆಸ್ಟ್ ಏರಿ ಆಮ್ಲಜನಕದ ಚೀಲವಿಲ್ಲದೆ ಕೆಲಕಾಲ ಕಳೆದವರಿದ್ದಾರೆ, ಆದರೆ ಅಲ್ಲೂ ಕೂಡ 300ಮಿಲಿಬಾರಿನ ವಾಯುಒಜ್ಜೆ ಇದ್ದೇ ಇದೆ. ಹಾಗಾಗಿ ಮಂಗಳನಲ್ಲಿ ವಿಶೇಷ ಹಸಿರುಮನೆಯಲ್ಲೇ ವಾಸಿಸಬೇಕು, ಹೊರಗೆ ಬರುವುದಾದಲ್ಲಿ ಒತ್ತಡ ತುಂಬಿದ ವಿಶೇಷ ದಿರಿಸು (ಸ್ಪೇಸ್ಸೂಟ್) ಹಾಕಿಕೊಳ್ಳಲೇ ಬೇಕಾಗುತ್ತದೆ. ಅಲ್ಲದೆ ಅಲ್ಲಿಯ ಆಕಾಶದಲ್ಲಿ ಒಝೋನ್ ವಲಯ ಕೂಡ ಇಲ್ಲದಿರುವುದರಿಂದ ಸೂರ್ಯನ ಅತಿನೇರಳೆ ಕಿರಣಗಳು ನೇರವಾಗಿ ದಾಳಿಯಿಡುತ್ತವೆ.
* ಮಂಗಳನಲ್ಲಿ ಹಸಿರಿಲ್ಲ, ಅಂದರೆ ಅಲ್ಲ್ಲಿ ನಮ್ಮ ಹೊಟ್ಟೆಯ ಪಾಡನ್ನು ನಾವೇ ನೋಡಿಕೊಳ್ಳಬೇಕು.
* ಇನ್ನೊಂದು ಅತಿ ಮುಖ್ಯವಾದ ವಿಷಯವೆಂದರೆ, ಮಂಗಳನಿಂದ ಮರಳಿ ಭೂಮಿಗೆ ಬರುವ ತಂತ್ರಜ್ಞಾನ ಇನ್ನೂ ತಯಾರಾಗಿಲ್ಲ!
ಇಷ್ಟಾಗಿಯೂ ಮಂಗಳಯಾನಕ್ಕೆ ಯೋಜನೆ ಹಾಕಿದವರ ತುಸು ವಿವರ ಇಲ್ಲಿದೆ, ನೋಡೋಣ ಬನ್ನಿ:
1. ಇನ್ಸ್ಪಿರೇಶನ್ ಮಾರ್ಸ್: ಈ ಸಂಸ್ಥೆ ಲಕ್ಷಾಧೀಶ ಟೆನಿಸ್ ಟಿಟೊ ಅವರದ್ದು, ಈತ 2001 ರಲ್ಲಿ ‘ಅಂತಾರಾಷ್ಟ್ರೀಯ ಬಾಹ್ಯಾಕಾಶ ಅಟ್ಟಣಿಗೆ’ ಗೆ ಹಾರಿಹೋಗಿ 7 ದಿನಗಳ ಕಾಲ ಭೂ ಪ್ರದಕ್ಷಿಣೆ ಹಾಕಿ ಬಂದವನು. 2018ರಲ್ಲಿ ನವದಂಪತಿಯೊಂದಕ್ಕೆ ಮಂಗಳದರ್ಶನ ಮಾಡಿಸುವ ಯೋಜನೆ ಈತನದ್ದು. ಅವರು ಮಂಗಳನಲ್ಲಿ ಇಳಿಯುವುದಿಲ್ಲ, ಮಂಗಳನಿಂದ 160 ಕಿ.ಮೀ. ಎತ್ತರದವರೆಗೆ ಹೋಗಿ ಅಲ್ಲಿಯ ದೃಶ್ಯ ನೋಡಿ ವಾಪಸ್ ಭೂಮಿಗೆ ಬರುತ್ತಾರೆ.
3. ಎಲನ್ ಮಸ್ಕ್ ಮಾರ್ಸ್ ಕಾಲನಿ: ಕೋಟ್ಯಾಧೀಶ ಎಲನ್ ಮಸ್ಕ್ ಸ್ಪೇಸ್ ಎಕ್ಸ್ ಸಂಸ್ಥೆಯ ಸಿಇಒ, ಈತನದ್ದು ದ್ರವರೂಪದ ಆಮ್ಲಜನಕ ಮತ್ತು ಮಿಥೇನ್ ತುಂಬಿದ ಮರುಬಳಕೆಯ ರಾಕೆಟ್ಟಿನಲ್ಲಿ ಹತ್ತತ್ತು ಜನರ ಹಾಗೆ ಸುಮಾರು 80 ಸಾವಿರ ಜನರನ್ನು ಮಂಗಳನಲ್ಲಿಗೆ ಕಳಿಸಿ ವಸಾಹತು ಸ್ಥಾಪಿಸಿ ಮಾನವರನ್ನು ಬಹುಗ್ರಹವಾಸಿಗಳನ್ನಾಗಿಸುವ ಯೋಜನೆ. ಒಂದು ಸೀಟಿಗೆ ಬೆಲೆ 5 ಲಕ್ಷ ಡಾಲರ್ ಅಂದರೆ 3 ಕೋಟಿ ರೂ.!
4. ಮಾರ್ಸ್ ಡೈರೆಕ್ಟ್: ಮಾರ್ಸ್ ಸೊಸೈಟಿಯ ಮುಖ್ಯಸ್ಥ, ರಾಬರ್ಟ್ ಝುಬಿನ್ ಅವರ ಕನಸು ಇದು. ಈಗಿರುವ ತಂತ್ರಜ್ಞಾನ ಬಳಸಿ ಗಗನಯಾನಿಗಳು ಮಂಗಳನ ಅಂಗಳದಲ್ಲಿ ಇಳಿದು ಅಲ್ಲಿಯ ವಿರಳ ವಾತಾವರಣದಿಂದ ಆಮ್ಲಜನಕ ಉತ್ಪಾದಿಸಿಕೊಳ್ಳುತ್ತಾರೆ, ನೆಲದಡಿಯ ನೀರು, ಮತ್ತು ಖನಿಜಗಳನ್ನು ಬಳಸಿಕೊಂಡು ನಿರ್ಮಾಣ ಕಾರ್ಯ ಹಾಗೂ ಅಣುಸ್ಥಾವರ ಕಟ್ಟಿ ವಿದ್ಯುತ್ ಪಡೆಯುತ್ತ್ತ ಮುಂದಿನ ದಿನಗಳಲ್ಲಿ ಅಲ್ಲಿಯೇ ಸುಸ್ಥಿರ, ಸ್ವಸ್ಥಿರ ಬದುಕು ಕಟ್ಟಿಕೊಳ್ಳಬಹುದು, ಭೂಮಿಯ ಅವಲಂಬನೆಯನ್ನು ಕಡಿಮೆಗೊಳಿಸಬಹುದು.
5. ನಾಸಾ: ಮಾನವಸಹಿತ ನೌಕೆಗಳನ್ನು ಬಾಹ್ಯಾಕಾಶಕ್ಕೆ ಕಳಿಸಬೇಕೆನ್ನುವುದು ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ನಾಸಾ ಸಂಸ್ಥೆಯ ಬಹುದಿನಗಳ ಯೋಜನೆ. 2025 ಒಳಗೆ ಭೂಸಮೀಪದ ಕ್ಷುದ್ರಗ್ರಹಕ್ಕೆ ಮಾನವ ಸಹಿತ ನೌಕೆಯ ರವಾನೆ, ಆನಂತರ 2030 ರೊಳಗೆ ಮಂಗಳನಲ್ಲಿಗೆ ಮಾನವ ಎಂದು ನಾಸಾ ಗುರಿ ಹೊಂದಿದೆ.
ಮುಗಿಯಿತು.
– ಸರೋಜಾ ಪ್ರಕಾಶ.