Home Health ಅಭ್ಯಂಗ

ಅಭ್ಯಂಗ

0

ವಿವಿಧ ವೈದ್ಯಕೀಯ ಚಿಕಿತ್ಸಾ ಪದ್ಧತಿಗಳಲ್ಲಿ ಆಯುರ್ವೇದವೂ ಒಂದು. ಇದು ಭಾರತೀಯ ವೈದ್ಯ ಪದ್ಧತಿ. ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳ ಮೂಲಕ ಗ್ರಂಥಗಳ ರೂಪದಲ್ಲಿಬೆಳಕಿಗೆ ಬಂದಿತು. ಬ್ರಹ್ಮನು ಆಯುರ್ವೇದವನ್ನು ಸ್ಮರಿಸಿಕೊಂಡು, ದಕ್ಷ ಪ್ರಜಾಪತಿಗೆ ತಿಳಿಸಿದನು. ದಕ್ಷ ಪ್ರಜಾಪತಿಯು ಅಶ್ವಿನಿ ಕುಮಾರರಿಗೆ, ಅಶ್ವಿನಿ ಕುಮಾರರು ಇಂದ್ರನಿಗೆ ಹಾಗೂ ಇಂದ್ರನಿಂದ ಈ ಆಯುರ್ವೇದವು ಆತ್ರೇಯ, ಪುನರ್ವಸು ಇತ್ಯಾದಿ ಮುನಿಗಳಿಗೆ ತಿಳಿಸಲ್ಪಟ್ಟಿತು.
ಇತರೇ ಚಿಕಿತ್ಸಾ ಪದ್ಧತಿಗಳಂತಲ್ಲದೆ ಆಯುರ್ವೇದ ವೈದ್ಯ ಪದ್ಧತಿಯು ಎರಡು ಮುಖ್ಯ ಗುರಿಗಳನ್ನೊಳಗೊಂಡಿದೆ. ಮೊದಲನೆಯದು ರೋಗ ರುಜಿನಗಳು ಬಾರದಂತೆ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು. ಎರಡನೆಯದು ರೋಗ ಬಂದಾಗ ಚಿಕಿತ್ಸೆಯನ್ನು ಮಾಡಿಕೊಳ್ಳುವುದು.
ರೋಗ, ರುಜಿನಗಳು ಬಾರದಂತೆ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಕೆಲವೊಂದು ಆಚರಣೆಗಳನ್ನು ಆಯುರ್ವೇದದಲ್ಲಿ ವಿವರಿಸಿದ್ದಾರೆ. ಅವುಗಳಲ್ಲಿ ದಿನಚರ್ಯೆಯೂ ಒಂದು. ಇದು ಒಬ್ಬ ಆರೋಗ್ಯವಂತ ವ್ಯಕ್ತಿ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂಜಾನೆ ಏಳುವುದರಿಂದ ರಾತ್ರಿ ಮಲಗುವವರೆಗೆ ಏನೇನು ಕ್ರಮಗಳನ್ನು ಅನುಸರಿಸಬೇಕು ಎನ್ನುವ ವಿವರಣೆಗಳನ್ನೊಳಗೊಂಡಿದೆ. ಇದರಲ್ಲಿ ಅಭ್ಯಂಗವೂ ಒಂದು ವಿಧಿ.
ಅಭ್ಯಂಗ ಎಂದರೇನು?
ಅಭ್ಯಂಗ ಎಂದರೆ ಎಣ್ಣೆಯನ್ನು ಕ್ರಮಬದ್ಧವಾಗಿ ಸಂಪೂರ್ಣ ಮೈಗೆ ಹಚ್ಚಿಕೊಳ್ಳುವುದು. ಸಾಮಾನ್ಯವಾಗಿ ಹಿಂದೂ ಸಂಪ್ರದಾಯದಲ್ಲಿ ದೀಪಾವಳಿಯಲ್ಲಿ ನರಕ ಚತುರ್ದಶಿಯ ದಿನದಂದು ಎಣ್ಣೆಯನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡುವುದು ವಾಡಿಕೆ.
ವೈಜ್ಞಾನಿಕವಾಗಿ ವಿಶ್ಲೇಷಿಸಿದಾಗ ತಿಳಿಯುವುದೇನೆಂದರೆ ದೀಪಾವಳಿಯಲ್ಲಿ ಹೇಮಂತ ಋತು (ಚಳಿಗಾಲ) ವಿನ ಆಗಮನವಾಗಿರುತ್ತದೆ. ಈ ಸಮಯದಲ್ಲಿ ವಾತಾವರಣದಲ್ಲಿ ಒಣ ಗಾಳಿಯು ಬೀಸುತ್ತಿದ್ದು, ಚರ್ಮವು ಒಣಗಿರುತ್ತದೆ. ಈ ಸಮಯದಲ್ಲಿ ಒಣ ಚರ್ಮ ಹಾಗೂ ಚರ್ಮ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಅಭ್ಯಂಗ ಹಿತಕರ.
ಅಭ್ಯಂಗ ಮಾಡುವ ವಿಧಾನ
ಅಭ್ಯಂಗವನ್ನು ನಿತ್ಯವೂ ಮಾಡಬೇಕು, ಅಭ್ಯಂಗವನ್ನು ಆಹಾರ ಸೇವನೆಯ ಪೂರ್ವದಲ್ಲಿ ಅಥವಾ ಆಹಾರ ಜೀರ್ಣವಾದ ನಂತರ (ಕನಿಷ್ಠ ಪಕ್ಷ ಆಹಾರ ಸೇವನೆಯ ಮೂರು ಗಂಟೆಗಳ ನಂತರ) ಮಾಡಬೇಕು. ದೇಹದ ಎಲ್ಲ ಭಾಗಗಳಿಗೂ ಸಮ ಪ್ರಮಾಣದ ಒತ್ತಡವನ್ನು ಹಚ್ಚಿ ತಿಕ್ಕಬೇಕು. ಕೈ ಕಾಲುಗಳನ್ನು ಯಾವಾಗಲೂ ಮೇಲ್ಭಾಗದಿಂದ ಕೆಳಭಾಗದವರೆಗೆ ಒಮ್ಮುಖವಾಗಿ ಸಮಾನ ಒತ್ತಡದಿಂದ ಎಣ್ಣೆಯನ್ನು ಹಚ್ಚಿ ತಿಕ್ಕಬೇಕು. ಬೆನ್ನು ಮೂಳೆಗಳ ಭಾಗವನ್ನು ವೃತ್ತಾಕಾರವಾಗಿ ಒತ್ತಡವನ್ನು ಹಾಕಿ ತಿಕ್ಕಬೇಕು. ಎದೆ ಭಾಗ ಹಾಗೂ ಹೊಟ್ಟೆ ಭಾಗಗಳಲ್ಲೂ ಕಡಿಮೆ ಒತ್ತಡದಿಂದ ಎಣ್ಣೆ ಹಚ್ಚಿ ತಿಕ್ಕಬೇಕು. ವಿಶೇಷವಾಗಿ ತಲೆ, ಕಿವಿ ಹಾಗೂ ಪಾದಗಳಿಗೆ ಎಣ್ಣೆಯನ್ನು ಹಾಕಬೇಕು. ಅಭ್ಯಂಗವನ್ನು ಶರೀರದ ಮಾಂಸ ಖಂಡಗಳ ರಚನೆ ಹಾಗೂ ಜೋಡಣೆಗೆ ಅನುಸಾರವಾಗಿ ಅದೇ ದಿಕ್ಕಿನಲ್ಲಿ ಒಮ್ಮುಖವಾಗಿ ಮಾಡಬೇಕು.
ಅಭ್ಯಂಗಕ್ಕೆ ಬಳಸಬಹುದಾದ ಎಣ್ಣೆಗಳು
ಅತ್ಯಂತ ಶೀತ ಪ್ರಕೃತಿಯವರು ಎಳ್ಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಅಭ್ಯಂಗಕ್ಕೆ ಬಳಸುವುದು ಉತ್ತಮ. ಉಷ್ಣ ಪ್ರಕೃತಿಯವರು ಆಕಳ ತುಪ್ಪದಿಂದ ಅಭ್ಯಂಗ ಮಾಡಿಕೊಳ್ಳುವುದು ಒಳ್ಳೆಯದು. ಅಲ್ಲದೆ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಕ್ಷೀರಾ ಬಲಾತೈಲ, ಮಹಾನಾರಾಯಣ ತೈಲ, ಸಹಚರಾನಿ ತೈಲ, ಬಲಾಶ್ವಗಂಧ ತೈಲ, ಇತ್ಯಾದಿ ತೈಲಗಳನ್ನು ಅಭ್ಯಂಗಕ್ಕೆ ಬಳಸಬಹುದು.
ಅಭ್ಯಂಗದಿಂದ ದೊರೆಯುವ ಪ್ರಯೋಜನಗಳು
1. ಅಭ್ಯಂಗವು ಮುಪ್ಪನ್ನು ದೂರವಿಡುತ್ತದೆ.
2. ಅಭ್ಯಂಗವು ದಣಿವನ್ನು ನಿವಾರಿಸುತ್ತದೆ.
3. ವಾತ ದೋಷವನ್ನು ಶಮನ ಮಾಡುತ್ತದೆ.
4. ದೇಹಕ್ಕೆ ಪುಷ್ಟಿ, ದೃಢತೆ ಹಾಗೂ ಬಲವನ್ನು ನೀಡುತ್ತದೆ.
5. ಆಯಸ್ಸನ್ನು ವೃದ್ಧಿಗೊಳಿಸುತ್ತದೆ.
6. ಚರ್ಮವನ್ನು ಮೃದುಗೊಳಿಸುವುದಲ್ಲದೆ, ಚರ್ಮದ ಕಾಂತಿಯನ್ನುಹೆಚ್ಚಿಸುವುದು, ಅಲ್ಲದೆ ಚರ್ಮರೋಗಗಳಿಂದ ರಕ್ಷಣೆಯನ್ನು ಒದಗಿಸುತ್ತದೆ.
7. ತಲೆಗೆ ಎಣ್ಣೆಯನ್ನು ಹಚ್ಚುವುದರಿಂದ ತಲೆ ನೋವು ಇತ್ಯಾದಿ ತಲೆಯ ಸಂಬಂಧಪಟ್ಟ ರೋಗಗಳನ್ನು ದೂರವಿಡಬಹುದು, ಕೂದಲುಗಳನ್ನು ಮೃದುವಾಗಿಸಿ, ಉದ್ದವಾಗಿ, ಕಾಂತಿಯುಕ್ತವನ್ನಾಗಿ ಮಾಡುತ್ತದೆ. ಅಲ್ಲದೆ ಕೂದಲು ಕಪ್ಪಗೆ, ದೃಢವಾಗಿ ಬೆಳೆಯುತ್ತದೆ.
8. ಪಾದಗಳಿಗೆ ಎಣ್ಣೆಯನ್ನು ಹಚ್ಚುವುದರಿಂದ ನಿದ್ರೆ ಹೆಚ್ಚುತ್ತದೆ. ಕಣ್ಣುಗಳ ಆರೋಗ್ಯಕ್ಕೆ ಇದು ಉತ್ತಮ.
9. ಕಿವಿಗಳಿಗೆ ಎಣ್ಣೆಯನ್ನು ಹಾಕುವುದರಿಂದ ಕಿವಿನೋವು, ತಲೆನೋವು, ಕುತ್ತಿಗೆಯ ಹಿಂಭಾಗದ ನೋವು ಹಾಗು ದವಡೆಗಳ ನೋವುಗಳನ್ನು ಶಮನ ಮಾಡುತ್ತದೆ.
ಅಭ್ಯಂಗವು ಯಾರಿಗೆ ನಿಷೇಧ?
ಕಫದ ರೋಗಗಳಿಂದ ಬಳಲುತ್ತಿರುವವರು ಅಭ್ಯಂಗವನ್ನು ಮಾಡಬಾರದು. ಅಜೀರ್ಣದಿಂದ ಬಳಲುತ್ತಿರುವವರು, ಜೀರ್ಣಶಕ್ತಿ ಕುಂದಿರುವವರು ಅಭ್ಯಂಗವನ್ನು ಮಾಡದಿರುವುದು ಉತ್ತಮ.
ನಿರಂತರ ಬಳಕೆಯಿಂದ ಸವೆದ ಗಾಡಿಯ ಕೀಲುಗಳು ಎಣ್ಣೆಯನ್ನು ಹಾಕುವುದರಿಂದ ಹೇಗೆ ಕಾರ್ಯಕ್ಷಮತೆಯನ್ನು ಹೊಂದುತ್ತವೋ ಅದೇ ರೀತಿ ಸತತವಾದ ಕೆಲಸ, ಕಾರ್ಯಗಳಿಂದ ಸವೆದ ದೇಹದ ಅಂಗಾಂಗಗಳು ಅಭ್ಯಂಗದಿಂದ ಬಲ ಹಾಗೂ ದೃಢತ್ವವನ್ನು ಹೊಂದಿ ಕೆಲಸ, ಕಾರ್ಯಗಳಿಗೆ ಸಿದ್ಧಗೊಳ್ಳುತ್ತವೆ.
ಅಭ್ಯಂಗ ಯಾರಿಗೆ ಒಳ್ಳೆಯದು? ಯಾರಿಗೆ ಒಳ್ಳೆಯದಲ್ಲ? ಅಭ್ಯಂಗದಿಂದಾಗುವ ಪ್ರಯೋಜನಗಳು, ದೇಹ ಪ್ರಕೃತಿಗೆ ಅನುಕೂಲಕರವಾದ ಎಣ್ಣೆಗಳು ಯಾವುವು? ಎಂಬುದನ್ನು ಗಮನದಲ್ಲಿಟ್ಟುಕೊಂಡು ಅಭ್ಯಂಗವನ್ನು ಆಚರಿಸಬೇಕು.
ಡಾ. ನಾಗಶ್ರೀ.ಕೆ.ಎಸ್.