ವಾನಳ್ಳಿ ಶಿರಸಿಯಿಂದ 20 ಕಿಮೀ ದೂರದ ಊರು. ನನ್ನಜ್ಜ ಅಲ್ಲಿಯ ಡಾಕ್ಟರು. ಸುಮಾರು ವರ್ಷಗಳಿಂದ, ಈತನೊಬ್ಬನೇ ವಾನಳ್ಳಿಯ ಆಸ್ಪತೆಯ ನಡೆಸುತ್ತಿರುವವನು. ಹಾಗಾಗಿ ಹತ್ತಿರದ ಹಳ್ಳಿಯವರು ರಸ್ತೆಯ ಅಪಘಾತ.. ಏನೇ ಆದರೂ ಓಡಿ ಬರುತ್ತಿದ್ದುದು ಅಜ್ಜನ ಆಸ್ಪತ್ರೆಗೆ. ಮೊಮ್ಮಕ್ಕಳಾದ ನಮಗೆ ವಾನಳ್ಳಿಗೆ ಹೋದಾಗ ಅಲ್ಲಿಯ ಮೊದಲ ಆಕರ್ಷಣೆ ಎಂದರೆ ಮನೆಯೊಳಗೇ ಇದ್ದ ಅಜ್ಜನ ಆಸ್ಪತ್ರೆ. ಹೊತ್ತಿಲ್ಲದ ಹೊತ್ತಿಗೂ “ಅರಾಮಿಲ್ಲ ಡಾಕ್ಟರ್ರೆ’ ಎಂದು ಓಡಿ ಬರುತ್ತಿದ್ದ ಜನರನ್ನು ನೋಡುತ್ತಾ, ಯಾರೂ ಇಲ್ಲದಿರುವಾಗ ಅಜ್ಜನ ಪಾತ್ರ ನಾವು ಮಾಡುತ್ತಾ, ಆಟವಾಡುತ್ತಿರುತ್ತಿದ್ದೆವು! ಬಂದವರಿಗೆ ಅಜ್ಜ ಯಾವ ಬಣ್ಣದ ಮಾತೆಗಳನ್ನು ಕೊಡುತ್ತಾನೆ, ಕೆಲವರಿಗೆ ಇಂಜೆಕ್ಷನ್ ಕೊಟ್ಟಾಗ ಅವರು ಹೇಗೆ ಕೂಗಿಕೊಳ್ಳುತ್ತಾರೆ ಎಂಬುದನ್ನು ಗಮನಿಸುತ್ತಾ, ಕೆಲವೊಮ್ಮೆ ಮರುಗುತ್ತಾ, ಇನ್ನೊಮ್ಮೆ ನಗುತ್ತಾ..”ಅಜ್ಜ ಅವರಿಗೆ ಇಂಜೆಕ್ಷನ್ ನೀಡುವಾಗ ಏಕೆ ನೋವು ಮಾಡಿದೆ” ಎಂದು ಆತನಿಗೊಂದು ಪೆಟ್ಟು ಕೊಡುತ್ತಾ ಇರುತ್ತಿದ್ದೆವು. ಇನ್ನು ಹೇಳ ಬೇಕಾದ ಸಂಗತಿ ಎಂದರೆ..ಹುಷಾರಿಲ್ಲ ಎಂದು ಬಂದವೆರೂ ಅಜ್ಜನೊಟ್ಟಿಗಿರುತ್ತಿದ್ದ ನಮ್ಮನ್ನು ..”ಅರೇ ಡಾಕ್ಟ್ರ ಮೊಮ್ಮಕ್ಕಳು” ಎಂದು ನಮ್ಮನ್ನು ಬೆರಗು ಗಣ್ಣಿನಿಂದ ನೋಡುತ್ತಾ ನಿಂತಿದ್ದರೆ..ಆ ಕ್ಷಣಕ್ಕೆ ನಾವು ಸಂತೋಷದಿಂದ ಬೀಗುತ್ತಿದ್ದ ರೀತಿಯನ್ನು ಈಗಲೂ ಹೇಳಲಾಗಲಿಕ್ಕಿಲ್ಲ ನಮಗೆ.
ಮೊನ್ನೆ ಆಸ್ಪತ್ರೆಯಲ್ಲಿ ಕೆಲಸದ ನಿಮಿತ್ತ ನಮ್ಮ ಕ್ಲಿನಿಕ್ಕಿನ ಕಡೆ ಹೊರಟಿದ್ದೆ. ದಿನ ಒಂದೇ ದಾರಿಯಲ್ಲಿ ಹೋಗುವುದು ಬೇಡ ಎಂದೆಣಿಸಿ, ಅಂದು ಇನ್ನೊಂದು ಹಾದಿಯ ಬಳಿ ಹೋಗುತ್ತಿದ್ದೆ. ಅದು ಆಸ್ಪತ್ರೆಯ ಶವಾಗಾರದ ಪಕ್ಕದಲ್ಲಿರುವ ದಾರಿಯಾಗಿತ್ತು. ಯಾರೋ ಸತ್ತಿದ್ದರು. ಜನ ಸೇರಿದ್ದು ಕಂಡಿತು. ಇಲ್ಲಿ ಹೀಗೆ ಯಾವಾಗಲೂ ಜನ ಜಾಸ್ತಿ ಎಂದು ಮನಸ್ಸಿನಲ್ಲಿ ಅಂದುಕೊಂಡು ಮುಂದೆ ನಡೆದು ಹೋಗುತ್ತಿದ್ದೆ. ಶವವನ್ನು ಕಟ್ಟಿ ಒಂದು ವ್ಯಾನಿನಲ್ಲಿ ತೂರಿಸುತ್ತಿದ್ದರು. ಮುಖ ಕಾಣಲಿಲ್ಲ. ಪೋಲಿಸರ, ಆಸ್ಪತ್ರೆಯ ಸಿಬ್ಬಂದಿ ಕೆಲವರು ಇದ್ದರು. “ಯಾರಪ್ಪಾ ಇವನ ಕಡೆಯವರು?ಬೇಗ ಕರೆಸಿ ಅವರನ್ನ. ನಮಗೇನು ಬೇರೆ ಕೆಲಸ ಇಲ್ಲ ಅಂತ ಅಂದುಕೊಂಡಿದ್ದಾರಾ?” ಎಂದು ಗುಂಪಿನಲ್ಲಿದ್ದವನೊಬ್ಬ ಕೂಗಿದ. ನಡೆದು ಹೋಗುತ್ತಿದ್ದ ನನಗೆ ಎದುರಿನಿಂದ ಗುಂಪೊಂದು ಚೀರಿಕೊಂಡು ನಮ್ಮತ್ತ ಓಡಿ ಬರುತ್ತಿರುವುದು ಕಂಡಿತು. ಮುಂದೆ ಹೆಜ್ಜೆ ಹಾಕಲು ಮನಸ್ಸಾಗಲಿಲ್ಲ. ಪಕ್ಕದಲ್ಲೇ ನಿಂತೆ, ಆ ಗುಂಪಿನ ಚೀರಾಟ, ಅಳು ಎಲ್ಲವೂ..ಒಮ್ಮೆ ನನ್ನನ್ನು ವಾನಳ್ಳಿಯ ಮನೆಗೆ, ಅಂದು ನಡೆದ ಸಾವು-ಬದುಕಿನ ಹೋರಾಟದತ್ತ ಕೊಂಡ್ಯೊದಿತ್ತು.
ಹಳ್ಳಿಯ ಆಸ್ಪತ್ರೆಯೊಂದರಲ್ಲಿ ಒಂದು ಜೀವವನ್ನು ಉಳಿಸಲು ಅಂದು ನಡೆದ ಪ್ರಯತ್ನ, ನಗರದ ಬಹುದೊಡ್ಡ ಆಸ್ಪತ್ರೆಯಲ್ಲಿ ಒಂದು ಜೀವ ಉಳಿಸಲು ಮಾಡಿದ ಪ್ರಯತ್ನ ಎರಡೂ ಒಂದೆಯೆ. ಕಣ್ಣಿಗೆ ಕಂಡಿದ್ದ ಎರಡು ದೇಹಗಳು, ಜೀವ ಕಳೆದುಕೊಂಡ ಮೇಲೆ..ಅದು ಕೇವಲ ಶವ ಮಾತ್ರ. ಆದರೆ ಜನ ತೋರಿದ್ದ ಮಾನವೀಯತೆ ಮಾತ್ರ ಬೇರೆ.
ಸ್ಫೂರ್ತಿ ವಾನಳ್ಳಿ