ಇಂಗ್ಲೀಷ್ನ ಪ್ರವರ್ತಕ ಕವಿಯಾದ ಟಿ.ಎಸ್.ಎಲಿಯಚ್ನ ಕವನ ‘Journey of the Magi’ ದಲ್ಲಿನ ಸಾಲುಗಳಿವು.
And the cities hostile and towns unfriendly
And the village’s dirty and charging high prices:
A hard time we had of it.
ಈ ಕವಿತೆಯನ್ನು ಕನ್ನಡದಲ್ಲಿ “ಜ್ಞಾನಿಗಳ ಪಯಣ” ಎಂದು ಶ್ರೀ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಅನುವಾದಿಸಿದು,್ದ ಆ ಸಾಲುಗಳು, ಒಂದಕ್ಕೆ ಹತ್ತು ಬೆಲೆ ಇಟ್ಟು ಮಾರುವ ಸುಟ್ಟ ಸುಡುಗಾಡು ಹಳ್ಳಿಗಳ ಹಾದು ಬಂದೆವು. ಅದೆಂಥ ಕೆಟ್ಟ ಕಾಲ!
ಕ್ರಿಸ್ತನ ಹುಟ್ಟಿನ ಕುರಿತು ಮುನ್ಸೂಚನೆ ಪಡೆದ ಮೂವರು ಜ್ಞಾನಿಗಳು, ಚಾಲ್ಡಿಯಾದ ರಾಜ ಬಾಲ್ತಜಾರ್, ಇಥಿಯೋಪಿಯಾದ ರಾಜ ತಾರ್ಫಿಷ್ ಮತ್ತು ನ್ಯೂಬಿಯಾದ ರಾಜ ಮೆಲ್ಫಿಯರ್, ಅತ್ತ ಪಯಣ ಬೆಳಸಿದ ಸಂದರ್ಭದಲ್ಲಾದ ಅನುಭವದ ವಿವರಣೆಗಳು ಈ ಕವಿತೆಯಲ್ಲಿದೆ.
ಅವರುಗಳು ಅಂದು ಪಡೆದ ಅನುಭವಕ್ಕೂ ಇಂದು ನಾವು ಪಡೆಯುತ್ತಿರುವ ಅನುಭವಕ್ಕೂ ಅಂಥ ವ್ಯಾತ್ಯಾಸಗಳೇನೂ ಕಾಣಿಸುತ್ತಿಲ್ಲ. ಅವರ ಪ್ರವಾಸದ ಸಂದರ್ಭದಲ್ಲಿ ಕೂಡ ಅವರು ಪ್ರವಾಸಿಗರೆಂದು ಅರಿತ ಜನ, ಅಧಿಕ ಬೆಲೆ ಕೇಳಿ ಅವರನ್ನು ದೋಚಿದ್ದರು. ಹಾಗೇ ಇಂದು ಪ್ರವಾಸಿಗಳೆಂದು ತಿಳಿದರೆ ಸಾಕು ನಮ್ಮವರೇ ನಮ್ಮನ್ನು ದೋಚಲು ಸಿದ್ದರಾಗಿ ಕುಳಿತಿರುತ್ತಾರೆ. ನೀವು ಯಾವುದೇ ಪ್ರವಾಸಿ ಕೇಂದ್ರಗಳಿಗೆ ತೆರಳಿದರೂ ಸರಿ, ಅಲ್ಲಿಯ ಬೆಲೆ ಗಗನಕ್ಕೇರಿರುತ್ತದೆ. ಬಂದ ಪ್ರವಾಸಿಗಳನ್ನು ಆದಷ್ಟು ದೋಚುವುದೇ ಅಲ್ಲಿನ ವ್ಯಾಪಾರಿಗಳ, ಮತ್ತಿತರರ ಕಸುಬಾಗಿರುತ್ತದೆ. ಕಳ್ಳರ ಹಾವಳಿ ಬೇರೆ. ಅವರು ಹೇಳಿ ಕೇಳಿ ಕಳ್ಳರು, ಅವರ ಸುದ್ದಿ ಬೇರೆ ಕಳ್ಳರೆಂದು ಗುರ್ತಿಸಿಕೊಳ್ಳದೇ ಕಳ್ಳರಾಗುವುದು ಬೇರೆ.
ಬಹಳಷ್ಟು ಪ್ರವಾಸಿ ಕೇಂದ್ರಗಳಲ್ಲಿ ‘ಪ್ರವೇಶ ಧನ’ ನಿಗದಿಗೊಳಿಸಿರುತ್ತಾರೆ. ಅಲ್ಲಿನ ವ್ಯವಸ್ಥೆಗೂ ಅದಕ್ಕೂ ಸಂಬಂಧವೇ ಇರುವುದಿಲ್ಲ. ಕೇರಳದಲ್ಲಿ ಒಂದು ಕಡೆ ಸಾಂಬಾರು ಬೆಳೆಗಳ ತೋಟಕ್ಕೆ ಪ್ರವೇಶ ಧನ ರೂ. 100/- (ಒಬ್ಬರಿಗೆ) ಪಡೆದು ತೋರಿಸಿದ್ದು, ಏಲಕ್ಕಿ, ಬಾಳೆ, ಅಡಿಕೆ ಮತ್ತು ಕೆಂಪು ದಾಸವಾಳ ಮಾತ್ರ. ಆಗ ಅನ್ನಿಸಿದ್ದು ಅವರು ನಿಜವಾಗಿಯೂ ನಮ್ಮ ಕಿವಿಯ ಮೇಲೆ ಈ ಕೆಂಪು ದಾಸವಾಳ ಹೂವನ್ನು ಇಡುತ್ತಿದ್ದಾರೆ ಎಂದು ‘ಪ್ರವೇಶ ಧನ’ ಪಡೆಯುವುದು ತಪ್ಪಲ್ಲ. ಅಲ್ಲಿನ ಪ್ರದೇಶವನ್ನು ಸ್ವಚ್ಛವಾಗಿ, ಜೋಪಾನವಾಗಿ ಇಡುವ ಜವಾಬ್ದಾರಿಗೆ ಹಣದ ಅಗತ್ಯವಿದೆ. ಆದರೆ ಅದಕ್ಕೂ ಒಂದು ಮಿತಿಯಿರಬೇಕು.
ಇನ್ನು ನಮ್ಮಲ್ಲಿನ ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗಳಿಗೆ ಸಹಕಾರ ಅನೇಕಾನೇಕ ಯೋಜನೆಗಳನ್ನು ರೂಪಿಸಿದ್ದಿದೆ. ಅಭಿವೃದ್ಧಿ ಪ್ರಾಧಿಕಾರಿಗಳ ರಚನೆ ಕೂಡ ಆಗಿದೆ. ಆದರೆ ಅಭಿವೃದ್ಧಿ ಎಷ್ಟರ ಮಟ್ಟಿಗೆ ಆಗಿದೆ? ಕೇವಲ ಪ್ರಾಧಿಕಾರದ ಬೋರ್ಡು ನಮ್ಮನ್ನು ಸ್ವಾಗತಿಸುತ್ತದೆಯೇ ವಿನಃ ಅವುಗಳು ನೀಡುವ ಸವಲತ್ತುಗಳಲ್ಲ, ಬಹಳಷ್ಟು ನಿರೀಕ್ಷೆಯೊಂದಿಗೆ ಬಂದವರಿಗೆ ನಿರಾಸೆ ಮಾತ್ರ ಕಾದಿರುತ್ತದೆ. ಕೊಳಕು ಪರಿಸರ, ಕುಡಿಯಲೂ ನೀರಿಲ್ಲದ ಸ್ಥಿತಿ ಹದಗೆಟ್ಟು ಶೌಚಾಲಯಗಳು, ಹುರಿದು ತಿನ್ನುವ ಶೆಡ್ಡುಗಳು, ವಾಹನ ಚಾಲಕರು ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಪುನಃ ಪುನಃ ಪ್ರವಾಸ ಕೈಗೊಳ್ಳಬೇಕೆಂಬ ಉತ್ಸಾಹವನ್ನೆ ಬತ್ತಿಸುವ ಸ್ಥಿತಿ ಇಂದು ಬಹತೇಕ ಪ್ರವಾಸಿ ತಾಣಗಳಲ್ಲಿ ಇದೆ ಎಂಥವರ ಆದಾಯಕ್ಕಾದರೂ ಒಂದು ಮಿತಿ ಇದೆ.
ಮನುಷ್ಯ ಜ್ಞಾನಿಯಾಗುವುದಕ್ಕೆ ‘ಒಂದೋ ಕೋಶ ಓದಬೇಕು ಅಥವಾ ದೇಶ ತಿರುಗಬೇಕು’ ಎಂದು ತಿಳಿದವರು ಹೇಳುತ್ತಾರೆ. ಇಂದಿನ ಯಾಂತ್ರಿಕ ಬದುಕಿನಲ್ಲಿ ಬಹುತೇಕ ಮಂದಿ ಕೂತು ಕೋಶ ಓದುವ ವ್ಯವಧಾನವಿಲ್ಲ. ಇರುವ ಸೀಮಿತ ವಿರಾಮದ ಅವಧಿ ಕೂಡ ಟಿ.ವಿ.ಯ ಸೀರಿಯಲ್ಲುಗಳಲ್ಲೆ ಕಳೆದು ಹೋಗುತ್ತದೆ. ಹಾಗಾಗಿ ವರ್ಷದಲ್ಲಿ ನಾಲ್ಕಾರು ದಿನ ಹೆಚ್ಚೆಂದರೆ ಒಂದು ವಾರ ಹೊರಗಡೆ ಸುತ್ತಾಡಿ ಬರಲು ಅಪೇಕ್ಷೆಸುವವರೇ ಅಧಿಕ. ಹೀಗೆ ಪ್ರವಾಸಕ್ಕೆ ಹೊರಡುವವರಿಗೆ ಅವರು ಹೋದಡೆಗೆ ಪಡೆಯುವ ಜ್ಞಾನ ಮತ್ತು ಸಂತೋಷಕ್ಕೆ ಯಾವುದೇ ಅಡ್ಡಿಯಾಗುವುದು ಸರಿಯಲ್ಲ. ಬರಿಯಾ ಚೌಕಶಿಯಲ್ಲೇ ದಿನಕಳೆವಂತಾದರೆ ಖುಷಿ ಎಲ್ಲಿಂದ ಬರಲು ಸಾಧ್ಯ.
‘ಒಂದಕ್ಕೆ ಹತ್ತು ಬೆಲೆ ತೆತ್ತು, ಸುಟ್ಟು ಸೂಡುಗಾಡುಗಳ ನೋಡ ಬಂದೆವು’ ಅಂದುಕೊಳ್ಳಬಾರದು. ಹಾಗೆ ಆಗದಂತೆ ವ್ಯವಸ್ಥೆ ಬದಲಾದರೆ ಸಂತೋಷ’ ಆದರೆ ಅದು ನೀರಿಕ್ಷಿಸಿದಂತೆ ಬದಲಾಗುವುದು ಕಷ್ಟ. ಒಟ್ಟಾರೆ ಒಂದಿಷ್ಟು ಸಂಗತಿಗಳನ್ನು ತಿಳಿದುಕೊಳ್ಳಬೇಕೆಂದರೆ ಕೆಟ್ಟದನ್ನೆಲ್ಲಾ ಅನುಭವಿಸಬೇಕು. ಅದಕ್ಕೆ ಪ್ರಾರಾಬ್ಧ ಎನ್ನಬಹುದೆನೊ?
ಆದರೆ ಎಲ್ಲ ವ್ಯಾಖ್ಯೆಗಳಗೂ ಅಪವಾದವಿದ್ದಂತೆ. ಕೆಲವೊಂದು ಪ್ರವಾಸಿ ತಾಣಗಳೂ ಸಹ ಅಪವಾದಗಳೆಂಬಂತೆ ಒಳ್ಳೆಯಾದಗಿವೆ ಎಂಬುದನ್ನು ನಾವು ಮರೆಯುವಂತಿಲ್ಲ.
ಪ್ರತಿ ಬಾರಿ ನಾವು ಪ್ರವಾಸಕ್ಕೆ ಹೊರಟುನಿಂತಾಗ ಮತ್ತೆ ಮರಳಿ ಬಂದಾಗ ಅದೆ ಏಲಿಯಟ್ನ ವಾಕ್ಯಗಳು ನಮ್ಮಳೊಗೆ ಅನುರಣಿಸದಿರಲಿ ಎಂಬ ಆಶಾಭಾವನೆ. Happy journey.
ರವೀಂದ್ರ ಭಟ್ ಕುಳಿಬೀಡು.