Home News ಅಂಕತಟ್ಟಿ ಗ್ರಾಮಸ್ಥರ ಧರಣಿ ಸ್ಥಳಕ್ಕೆ ಸಿ.ಇ.ಒ ಭೇಟಿ

ಅಂಕತಟ್ಟಿ ಗ್ರಾಮಸ್ಥರ ಧರಣಿ ಸ್ಥಳಕ್ಕೆ ಸಿ.ಇ.ಒ ಭೇಟಿ

0

ತಾಲ್ಲೂಕಿನ ಮಳ್ಳೂರಿನ ಗ್ರಾಮ ಪಂಚಾಯಿತಿ ಮುಂದೆ ಅಂಕತಟ್ಟಿ ಗ್ರಾಮಸ್ಥರು ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಧರಣಿ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಫೌಜೀಯಾ ತರುನ್ನುಮ್ ಶನಿವಾರ ಭೇಟಿ ಗ್ರಾಮಸ್ಥರ ಅಹವಾಲನ್ನು ಆಲಿಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕತಟ್ಟಿ ಗ್ರಾಮದಲ್ಲಿ ಗ್ರಾಮಠಾಣೆ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು, ಅಕ್ರಮವಾಗಿ ದಾಖಲೆಗಳು ಮಾಡಿಕೊಂಡಿದ್ದಾರೆ. ನಾವು ಸರ್ಕಾರಿ ಭೂಮಿ ಉಳಿಸಬೇಕು ಎಂದು ಹೋರಾಟ ಮಾಡುತ್ತಿದ್ದೇವೆ. ನಮಗೆ ನ್ಯಾಯ ಒದಗಿಸಿಕೊಡಿ ಎಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ನಾವು ಊರಿನಲ್ಲಿ ವಾಸಮಾಡಲಿಕ್ಕೂ ಭಯಪಡುವಂತಹ ಸನ್ನಿವೇಶ ನಿರ್ಮಾಣವಾಗಿದೆ. ನಮ್ಮ ಮನೆಗಳಲ್ಲಿ ಗಂಡಸರು ಸರ್ಕಾರಿ ಭೂಮಿ ಉಳಿಸಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಭೂಮಿಯನ್ನು ಅಕ್ರಮವಾಗಿ ದಾಖಲೆ ಮಾಡಿಕೊಂಡಿರುವವರು, ಅವರ ಮೇಲೆ ವಿನಾಕಾರಣ ಕೇಸುಗಳು ದಾಖಲಿಸುತ್ತಾರೆ. ಇದರಿಂದ ಭಯಗೊಂಡು ನಮ್ಮ ಮನೆಗಳಲ್ಲಿನ ಗಂಡಸರು ಊರು ಬಿಟ್ಟು ಹೋಗುತ್ತಾರೆ. ನಾವು ಜೀವನ ಮಾಡೋದು ಹೇಗೆ? ನಮಗೆ ವಿನಾಕಾರಣ ಮಾನಸಿಕವಾಗಿ ಕಿರುಕುಳ ನೀಡುತ್ತಾರೆ. ನಮಗೆ ರಕ್ಷಣೆ ನೀಡುವವರು ಯಾರು? ಎಂದು ತಮ್ಮ ಸಮಸ್ಯೆಯನ್ನು ಮಹಿಳೆಯರು ಹೇಳಿಕೊಂಡರು.
ಮುಖಂಡ ವೆಂಕಟರೆಡ್ಡಿ ಮಾತನಾಡಿ, ನಮ್ಮ ಗ್ರಾಮದ ೨೫ ಕ್ಕೂ ಹೆಚ್ಚು ಮಂದಿಯ ಮೇಲೆ ಕೇಸು ದಾಖಲಿಸಿದ್ದಾರೆ. ಹೈಕೋರ್ಟ್‌ನಲ್ಲಿ ಬೇಲ್ ತೆಗೆದುಕೊಳ್ಳಬೇಕಾಯಿತು. ಅಧಿಕಾರಿಗಳು ಮಾಡಿರುವ ತಪ್ಪುಗಳಿಗೆ ನಾವು ಶಿಕ್ಷೆ ಅನುಭವಿಸುವಂತಾಗಿದೆ. ನೀವು ಗ್ರಾಮಕ್ಕೆ ಬಂದು ಪರಿಶೀಲನೆ ಮಾಡಿ, ನಮಗೆ ನ್ಯಾಯ ಒದಗಿಸಿಕೊಡಿ. ವಿಜಯಪುರದವರನ್ನು ಎತ್ತಿಕಟ್ಟಿ ನಮ್ಮ ಮೇಲೆ ಅಟ್ರಾಸಿಟಿ ಕೇಸು ದಾಖಲು ಮಾಡಿಸಲು ಪ್ರಯತ್ನ ಮಾಡಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಫೌಜೀಯಾ ತರುನ್ನುಮ್ ಮಾತನಾಡಿ, ಅಂಕತಟ್ಟಿ ಗ್ರಾಮದಲ್ಲಿ ಅಕ್ರಮವಾಗಿ ಖಾತೆಗಳಾಗಿವೆ ಎನ್ನಲಾಗುತ್ತಿರುವ ದಾಖಲೆಗಳನ್ನೆಲ್ಲಾ ಈಗಲೇ ತಾಲ್ಲೂಕು ಪಂಚಾಯಿತಿ ಇ.ಓ.ಅವರ ಸುಪರ್ಧಿಗೆ ಕೊಡಿ. ಜಿಲ್ಲಾ ಪಂಚಾಯಿತಿ ಹಂತದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಅವರು ತಾಲ್ಲೂಕು ಪಂಚಾಯಿತಿಗೆ ಬಂದು ದಾಖಲೆಗಳು ಪರಿಶೀಲನೆ ನಡೆಸುತ್ತಾರೆ. ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಯಾರೇ ತಪ್ಪು ಮಾಡಿದ್ದರೂ ಅವರ ಮೇಲೆ ನೇರವಾಗಿ ಕ್ರಮ ಜರುಗಿಸಲಾಗುತ್ತದೆ. ಸದರಿ ಭೂಮಿಯನ್ನು ಅಳತೆ ಮಾಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ನಾನು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮುಖಂಡರಿಗೂ ತಿಳಿಸಿದ್ದೇನೆ. ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಪರಿಶೀಲನೆ ನಡೆಸುತ್ತೇವೆ. ನಿಮಗೆ ನ್ಯಾಯಒದಗಿಸಿಕೊಡುವ ಹೊಣೆಗಾರಿಕೆ ನನ್ನದು ಎಂದು ಭರವಸೆ ನೀಡಿದ ನಂತರ ಪ್ರತಿಭಟನಾ ನಿರತರು ಧರಣಿ ಕೈ ಬಿಟ್ಟರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಮ್ಮಶಿವಕುಮಾರ್, ಪಿಡಿಒ ಮಮತ, ಕಾರ್ಯದರ್ಶಿ ಕೃಷ್ಣಪ್ಪ, ಸದಸ್ಯ ರವಿಕುಮಾರ್,ಶಿವಣ್ಣ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಪುಟ್ಟಣ್ಣಯ್ಯ ಬಣ)ಯ ಜಿಲ್ಲಾ ಪ್ರಧಾನಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ, ಗ್ರಾಮಸ್ಥರಾದ ಜಗನ್ನಾಥ್, ಬಾಬು, ನಾರಾಯಣಸ್ವಾಮಿ, ಎಸ್.ದೇವರಾಜು, ಕೆ.ದೇವರಾಜು, ಅನಿತಮ್ಮ, ಅಮೃತ, ರತ್ನಮ್ಮ, ಗೌರಮ್ಮ, ನಾರಾಯಣಮ್ಮ, ರಾಧಮ್ಮ, ಶ್ರೀನಿವಾಸ್, ಅರುಣ್‌ಕುಮಾರ್, ಚನ್ನೇಗೌಡ, ನಾಗರಾಜ್, ಶಂಕರನಾರಾಯಣ, ಶ್ರೀನಿವಾಸ್, ಶ್ರೀಧರ್, ಚಿಕ್ಕವೆಂಕಟರಾಯಪ್ಪ ಹಾಜರಿದ್ದರು.

error: Content is protected !!