ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಸಮಿತಿಯ ಸದಸ್ಯರು ಗುರುವಾರ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು.
ಜುಲೈ ತಿಂಗಳಿನಿಂದ ಮೊಟ್ಟೆ ಹಣ ನೀಡಿಲ್ಲ. ಹಣವನ್ನು ಕೂಡಲೇ ಬಿಡುಗಡೆ ಮಾಡಿ. ಕಚೇರಿಯಿಂದಲೇ ಮೊಟ್ಟೆಯನ್ನು ವಿತರಿಸಿ ಮತ್ತು ಧರ ಹೆಚ್ಚು ಮಾಡಿ. ಗರ್ಭಿಣಿ ಬಾಣಂತಿಯರಿಗೆ ನೀಡುವ ತರಕಾತಿ ಮೊಟ್ಟೆ ಹಣ ಕೂಡಲೇ ಬಿಡುಗಡೆ ಮಾಡಿ. ಇತರ ಜಿಲ್ಲೆಗಳಲ್ಲಿ ನೀಡುವಂತೆ ಮಕ್ಕಳು ಮತ್ತು ಗರ್ಭಿಣಿ ಬಾಣಂತಿಯರಿಗೆ ತರಕಾರಿ ಹಣ 2.60 ಪೈಸೆಯಂತೆ ನಮಗೂ ನೀಡಿ. ಎಲ್ಲಾ ಕೇಂದ್ರಗಳಿಗೆ ಕಚೇರಿಯಿಂದ ಗ್ಯಾಸ್ ವಿತರಣೆ ಮಾಡಿ. ಇದುವರೆಗೂ ತೆಗೆದುಕೊಂಡಿರುವ ಗ್ಯಾಸ್ ಗೆ ಸಬ್ಸಿಡಿ ಹಣ ಮತ್ತು ಸಾರಿಗೆ ವೆಚ್ಚ ನೀಡಿ.
ಖಾಲಿ ಇರುವ ಸಹಾಯಕಿ ಹುದ್ದೆಯನ್ನು ಕೂಡಲೇ ಭರ್ತಿ ಮಾಡಬೇಕು ಮತ್ತು ಅರ್ಹತೆ ಇರುವ ಸಹಾಯಕಿಯರಿಗೆ ಖಾಲಿ ಇರುವ ಕೇಂದ್ರಗಳಿಗೆ ಮುಂಬಡ್ತಿ ನೀಡಬೇಕು. ಅವಶ್ಯಕ ಪಾತ್ರೆಗಳನ್ನು ಸರಬರಾಜು ಮಾಡಬೇಕು. ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರನ್ನು ವ್ಯವಸ್ಥೆ ಮಾಡಬೇಕು. ಬಾಕಿ ಇರುವ ಜನಶ್ರೀ ಬೀಮಾ ಯೋಜನೆಯ 2 ವರ್ಷ 6 ತಿಂಗಳ ಸ್ಕಾಲರ್ ಶಿಪ್ ಕೊಡಬೇಕು.
ನಿವೃತ್ತರಾದ ಕಾರ್ಯಕರ್ತೆ ಹಾಗೂ ಸಹಾಯಕಿಯರ ಇಡಿಗಂಟು 2 ವರ್ಷವಾದರೂ ಕೊಟ್ಟಿಲ್ಲ. ಅದನ್ನು ಶೀಘ್ರವಾಗಿ ನೀಡಿ. ಮಿನಿ ಕೇಂದ್ರಗಳಲ್ಲಿ ಅಡುಗೆ ಮಾಡಿಕೊಡುವವರಿಗೆ ಕನಿಷ್ಠ ಮೂರು ಸಾವಿರ ರೂ ಗೌರವ ಧನ ನೀಡಬೇಕು. ಜನಗಣತಿ ಹಣ, ಶೌಚಾಲಯ ಸರ್ವೆ ಹಣವನ್ನು ಕೂಡಲೇ ಕೊಡಬೇಕು. ಕಟ್ಟಡಗಳು ಹಾಗೂ ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು. ಗುಣಮಟ್ಟದ ಆಹಾರ ಪದಾರ್ಥ ನೀಡಬೇಕು ಎಂಬೆಲ್ಲಾ ಬೇಡಿಕೆಗಳ ಪಟ್ಟಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನೀಡಿದರು.
ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಸಮಿತಿಯ ಅಧ್ಯಕ್ಷೆ ಅಶ್ವತ್ಥಮ್ಮ, ಖಜಾಂಚಿ ಗುಲ್ಜಾರ್, ಕಾರ್ಯದರ್ಶಿ ಟಿ.ಮಂಜುಳಮ್ಮ, ಜಿಲ್ಲಾ ಘಟಕದ ಲಕ್ಷ್ಮೀದೇವಮ್ಮ, ಫಯಾಜ್ ಹಾಜರಿದ್ದರು.