ಅಂಚೆ ಚೀಟಿಗಳು ದೇಶದ ಇತಿಹಾಸವನ್ನು ಹೇಳುತ್ತವೆ. ದೇಶದ ಇತಿಹಾಸವನ್ನು ನೋಡಬೇಕಾದರೆ ನಾವು ಅಂಚೆ ಚೀಟಿಗಳನ್ನು ನೋಡಬೇಕು. ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಅಂಚೆ ಚೀಟಿಗಳನ್ನು ಇಲಾಖೆ ಹೊರತಂದಿದೆ. ಅವುಗಳನ್ನು ವಿವಿಧ ವಿಷಯಗಳಿಗನುಗುಣವಾಗಿ ಪ್ರದರ್ಶಿಸಿ ಮಾಹಿತಿ ಕಣಜವಾಗಿಸಬಹುದು ಎಂದು ಕರ್ನಾಟಕ ಅಂಚೆ ಚೀಟಿ ಸಂಗ್ರಹಕಾರರ ಸಂಘದ ಅಧ್ಯಕ್ಷ ಚೈತನ್ಯದೇವ್ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗುರುವಾರ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘದ 40ನೇ ವರ್ಷ ಹಾಗೂ 2000ನೇ ಅಂಚೆ ಚೀಟಿಗಳ ಪ್ರದರ್ಶನ, ರೂರಾಪೆಕ್ಸ್(ರೂರಲ್ ಫಿಲಾಟಲಿ ಎಕ್ಸಿಬಿಷನ್) 2000 ಎಂಬ ವಿಶ್ವ ಗ್ರಾಮೀಣ ಅಂಚೆ ಚೀಟಿಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯಪೂರ್ಣ ಹವ್ಯಾಸಗಳಿಂದ ಉತ್ತಮ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ. ಚಿಕ್ಕವರಿದ್ದಾಗಲೇ ಅಂಚೆಚೀಟಿ ಸಂಗ್ರಹಣೆ ರಚನಾತ್ಮಕ ಹವ್ಯಾಸವಾಗುತ್ತದೆ. ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘವನ್ನು ಕಟ್ಟಿ, 40 ವರ್ಷಗಳ ಕಾಲ ಮುಂದುವರೆಸಿಕೊಂಡು ಬಂದು, 2000 ಪ್ರದರ್ಶನವನ್ನು ಪೂರೈಸಿರುವುದು ದಾಖಲೆಯ ಸಂಗತಿಯಾಗಿದೆ ಎಂದು ಹೇಳಿದರು.
ಚೀಫ್ ಫೋಸ್ಟ್ ಮಾಸ್ಟರ್ ಎಸ್.ಶಿವರಾಮ್ ಮಾತನಾಡಿ, ಅಂಚೆಚೀಟಿಗಳನ್ನು ಸಂಗ್ರಣೆಯು ಒಳ್ಳೆಯ ಹವ್ಯಾಸವಾಗಿದೆ. ಇದರಿಂದಾಗಿ ಉತ್ತಮ ಜ್ಞಾನ ಸಂಗ್ರಹಣೆ ಆಗುತ್ತದೆ. ಅಂಚೆಚೀಟಿಗಳ ಸಂಗ್ರಹಣೆಯ ಹವ್ಯಾಸವನ್ನು ಜೀವಂತವಾಗಿ ಉಳಿಸಬೇಕು. ಇದರಿಂದ ಎಲ್ಲರಿಗೂ ಜ್ಞಾನದ ವಿಸ್ತಾರವಾಗುವಂತೆ ಪ್ರದರ್ಶಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ರೂರಾಪೆಕ್ಸ್ 2000 ಎಂಬ ಸ್ಮರಣಸಂಚಿಕೆಯನ್ನು ಕರ್ನಾಟಕ ಗ್ರಾಮಾಂತರ ಅಂಚೆಚೀಟಿ ಸಂಗ್ರಹಕಾರರ ಸಂಘದಿಂದ ಬಿಡುಗಡೆ ಮಾಡಲಾಯಿತು. 40 ವರ್ಷಗಳಲ್ಲಿ ನಡೆಸಿರುವ 2000 ಪ್ರದರ್ಶನಗಳ ಚಿತ್ರಗಳು, ವಿಶೇಷ ಲಕೋಟೆಗಳು, ಅಂಚೆ ಚೀಟಿಗಳಿಗೆ ಸಂಬಂಧಿಸಿದ ಸಂಗ್ರಹಯೋಗ್ಯ ಲೇಖನಗಳು ಈ ಪುಸ್ತಕದಲ್ಲಿವೆ.
ದೇಶದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಭಾಷೆಯನ್ನು ಪ್ರತಿನಿಧಿಸುವ ಅಂಚೆ ಚೀಟಿಗಳು, ರಾಷ್ಟ್ರ ಲಾಂಛನಗಳು, ದೇಶದ ಸಮೃದ್ಧ ಸಸ್ಯ ಸಂಪತ್ತು, ನದಿ, ಕಡಲು, ಬಂದರು, ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ಒಳಗೊಂಡಿರುವ ಅಂಚೆ ಚೀಟಿಗಳು, ಸ್ವಾತಂತ್ರ್ಯ ಹೋರಾಟಗಾರರು, ಭಾರತ ರತ್ನ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಖ್ಯಾತ ವಿಜ್ಞಾನಿಗಳು, ಮಹಾಪುರುಷರು, ಮಹಾತ್ಮ ಗಾಂಧೀಜಿ ಕುರಿತು ಅಂಚೆ ಚೀಟಿಗಳು, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟ, ನಟಿಯರ ಸ್ಮರಣೆಗಾಗಿ ಹೊರತರಲಾಗಿರುವ ಅಂಚೆಚೀಟಿಗಳು, ರಾಷ್ಟ್ರೀಯ ಭಾವೈಕ್ಯತೆ ಸಾರುವ ಹಬ್ಬ, ಆಚರಣೆಗಳು, ವೈವಿಧ್ಯಮಯ ಆಭರಣಗಳು, ಶ್ರೇಷ್ಠ ಚಲನಚಿತ್ರಗಳು, ದೇಶದ ಪ್ರಖ್ಯಾತ ದೇವಾಲಯ, ಮಸೀದಿ, ಚರ್ಚ್, ಐತಿಹಾಸಿ ಸ್ಮಾರಕಗಳು, ಅರಮನೆಗಳು, ಕ್ರೀಡೆ, ರೈಲು, ವಿಮಾನಯಾನ ಆರಂಭದ ದಿನಗಳನ್ನು ನೆನಪಿಸುವ ಚಿತ್ರಗಳನ್ನು ಒಳಗೊಂಡ ವೈವಿಧ್ಯಮಯ ಭಾರತವನ್ನು ಪ್ರತಿನಿಧಿಸುವ ಅಂಚೆಚೀಟಿಗಳನ್ನು ಮತ್ತು ವಿಶೇಷ ಅಂಚೆ ಕವರ್ಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು.
ಪ್ರದರ್ಶನದಲ್ಲಿ ವ್ಯವಸಾಯ, ಪರಿಸರ, ವಿಜ್ಞಾನ, ಭಾರತದ ಸಾಂಸ್ಕೃತಿಕ ಪರಂಪರೆ, ಹೂವುಗಳು, ಭಾರತದ ಇತಿಹಾಸ ಪುರುಷರು, ವಚನಕಾರರು, ದಾರ್ಶನಿಕರು ಅಲ್ಲದೆ ದೇವನಹಳ್ಳಿಯಲ್ಲಿ ಜನಿಸಿದ ಮೈಸೂರು ಹುಲಿ ಟಿಪ್ಪೂ ಸುಲ್ತಾನ್, ಸರ್. ಎಂ.ವಿಶ್ವೇಶ್ವರಯ್ಯ, ಡಾ.ರಾಜಕುಮಾರ್ ಅಲ್ಲದೆ ಇತರ ಸಾವಿರಾರು ಅಂಚೆ ಚೀಟಿಗಳು ವಿದ್ಯಾರ್ಥಿಗಳ ಗಮನ ಸೆಳೆದವು.
ಅಂಚೆ ಚೀಟಿ ಸಂಗ್ರಹಕಾರರಾದ ಮೇಲೂರು ಎಂ.ಆರ್.ಪ್ರಭಾಕರ್, ಪ್ರಕಾಶ್ ಚಂದ್ರ, ರಾಜಗೋಪಾಲ, ವಿನೋದ ಪುಠಾಣಿಕರ್, ಕೆ.ಟಿ.ಹನುಮಂತರಾಜು, ಎಚ್.ಟಿ.ಕೃಷ್ಣಾರೆಡ್ಡಿ, ಕೆ.ಈರಣ್ಣ ಅವರು ರೂರಾಪೆಕ್ಸ್ನ ಪ್ರದರ್ಶನದಲ್ಲಿ ತಮ್ಮ ಸಂಗ್ರಹವನ್ನು ಪ್ರದರ್ಶಿಸಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ, ಜಗನ್ನಾಥ್ಪ್ರಕಾಶ್, ಜಗನ್ನಾಥ್ಮಣಿ, ಮೇಲೂರು ವೆಂಕಟರೆಡ್ಡಿ, ರಾಮೇಗೌಡ, ಜೆ.ಜೆ.ಗೌಡ, ರಾಮಕೃಷ್ಣಪ್ಪ, ಮೋಹನ್ರಾವ್, ಕೃಷ್ಣಾರೆಡ್ಡಿ, ರಾಮು, ವರಪ್ರಸಾದ್ ಮತ್ತಿತರರು ಹಾಜರಿದ್ದರು.