Home News ಅಂಧಮಕ್ಕಳ ಶಾಲೆಯಲ್ಲಿ ಗಾಂಧಿ ಜಯಂತಿ

ಅಂಧಮಕ್ಕಳ ಶಾಲೆಯಲ್ಲಿ ಗಾಂಧಿ ಜಯಂತಿ

0

ಪ್ರತಿ ವರ್ಷ ಮಹಾತ್ಮಗಾಂಧಿ ಅವರ ಜಯಂತಿ ಮಾಡ್ತಿವಿ, ಆದರೆ ಅವರ ತತ್ವ ಆದರ್ಶಗಳನ್ನು ಪಾಲನೆ ಮಾಡುವಲ್ಲಿ ನಾವು ಹಿಂದುಳಿದಿದ್ದೇವೆ ಎಂದು ಆಶಾಕಿರಣ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿನಿ ಯಾಸ್ಮೀನ್ ಹೇಳಿದರು.
ನಗರದ ಆಶಾಕಿರಣ ಅಂಧಮಕ್ಕಳ ವಸತಿ ಶಾಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ವತಿಯಿಂದ ಆಯೋಜಿಸಿದ್ದ ಮಹಾತ್ಮಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವಾಗ ಮಹಿಳೆಯು ಮಧ್ಯರಾತ್ರಿಯಲ್ಲಿ ನಿರ್ಭಯವಾಗಿ ಸಂಚಾರ ಮಾಡುತ್ತಾಳೊ ಅಂದು ನಿಜವಾದ ಸ್ವಾತಂತ್ರ್ಯ ಬಂದಿದೆ ಎಂದು ಗಾಂಧಿಜೀ ಹೇಳಿದ್ದರು, ಆದರೆ ಇಂದು ಸಂಜೆ ೬ ಗಂಟೆಯ ನಂತರ ಮಹಿಳೆಯರು ಹೊರಗೆ ಓಡಾಡುವುದು ಕಷ್ಟವಾಗಿದೆ, ದೌರ್ಜನ್ಯ ದಬ್ಬಾಳಿಕೆಗಳು ಹೆಚ್ಚಾಗಿವೆ. ಸಣ್ಣ ಮಕ್ಕಳಿಗೆ ಹಿಂಸೆ ಕೊಡುತ್ತಿದ್ದಾರೆ. ಸ್ವಾತಂತ್ರ್ಯ ಬಂದು ೭೦ ವರ್ಷಗಳು ಕಳೆದರೂ ಗಾಂಧಿಜೀ ಅವರು ಕಂಡ ಕನಸು ನನಸಾಗಲಿಲ್ಲ. ಬಡತನ ತಾಂಡವಾಡುತ್ತಿದೆ. ಅನೇಕ ಮಂದಿ ಶಿಕ್ಷಣದಿಂದ ವಂಚಿತರಾಗುತ್ತಲೇ ಇದ್ದಾರೆ. ಜಾತಿ, ವ್ಯವಸ್ಥೆ ತಾಂಡವಾಡುತ್ತಿದೆ. ಇಂತಹ ಸಂಧರ್ಭದಲ್ಲಿ ಸ್ವಾತಂತ್ರ್ಯ ಬಂದಿರಲು ಹೇಗೆ ಸಾಧ್ಯ? ಇಂತಹ ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕಲು ನಾವೆಲ್ಲಾ ಮುಂದಾಗಬೇಕು ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎಂ. ಸತೀಶ್ ಮಾತನಾಡಿ, ಮಕ್ಕಳ ಸಾಧನೆಗೆ ಅಂಧತ್ವ ಎಂದಿಗೂ ಅಡ್ಡಿಯಾಗುವುದಿಲ್ಲ. ಗಾಂಧಿಜಿ ಅವರು ಕಂಡಿರುವ ಕನಸನ್ನು ನನಸು ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮಕ್ಕಳು ಅವರ ಚಿಂತನೆಗಳನ್ನು ಅರ್ಥ ಮಾಡಿಕೊಂಡು ಸುಭದ್ರವಾದ ರಾಷ್ಟ್ರ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.
ಮಕ್ಕಳಿಗೆ ಗಾಂಧಿ ಜಯಂತಿ ಅಂಗವಾಗಿ ಹಣ್ಣು, ಹಾಲು ವಿತರಣೆ ಮಾಡಿದರು.
ತಾಲ್ಲೂಕು ಉಪಾಧ್ಯಕ್ಷ ಕೆ.ವಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಸ್.ಎಂ.ಮಂಜುನಾಥ್, ಕಾರ್ಯದರ್ಶಿ ಕೆ.ಎಂ.ಮಂಜುನಾಥ್, ಸಂಚಾಲಕರಾದ ಚಂದ್ರೇಗೌಡ, ಸಂತೋಷ್.ಕೆ. ಜಿ, ಪ್ರವೀಣ್.ಆರ್, ಮುಂತಾದವರು ಹಾಜರಿದ್ದರು.