ತಾಲ್ಲೂಕಿನ ಎಚ್.ಕ್ರಾಸ್ ಬಳಿಯ ಕರಿಯನಪುರದ ಬಳಿ ಶುಕ್ರವಾರ ಅಪಘಾತಕ್ಕೀಡಾಗಿ ರಸ್ತೆ ಬದಿ ಬಿದ್ದಿದ್ದ ಗಾಯಾಳುವನ್ನು ರೆಡ್ಕ್ರಾಸ್ ಕಾರ್ಯದರ್ಶಿ ಮತ್ತು ಸಿಬ್ಬಂದಿ ರಕ್ಷಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ರೆಡ್ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್, ಸಾರ್ವಜನಿಕ ಸಂಪರ್ಕಾಧಿಕಾರಿ ಭರತ್ಗೌಡ ಸಂಸ್ಥೆಯ ವಾಹನದಲ್ಲಿ ಚಿಂತಾಮಣಿಯಿಂದ ವಾಪಸಾಗುವಾಗ ಕರಿಯನಪುರದ ಬಳಿ ಅಪಘಾತಕ್ಕೀಡಾಗಿ ರಸ್ತೆ ಬದಿ ಬಿದ್ದಿದ್ದ ಮಂಜುನಾಥ್ ಎಂಬುವವರನ್ನು ಕಂಡಿದ್ದಾರೆ. ತಕ್ಷಣ ವಾಹನದಲ್ಲಿ ಹತ್ತಿಸಿಕೊಂಡು ನಂದಗುಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅವರ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾರೆ.
‘ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮಂಜುನಾಥ್ ಅವರಿಗೆ ಯಾವುದೋ ವಾಹನ ಡಿಕ್ಕಿ ಹೊಡೆದು ಹೊರಟು ಹೋಗಿದೆ. ತಲೆಗೆ ತೀವ್ರ ಪೆಟ್ಟಾಗಿ ರಸ್ತೆ ಬದಿ ಬಿದ್ದಿದ್ದ ಅವರನ್ನು ಕೆಲವು ಜನರು ನೋಡುತ್ತಾ ನಿಂತಿದ್ದರು. ನಾವು ಕಂಡು ಅವರನ್ನು ಕರೆದೊಯ್ದು ಚಿಕಿತ್ಸೆ ಕೊಡಿಸಿದೆವು. ಅವರ ಸಂಬಂಧಿಕರು ಬಂದ ಮೇಲೆ ಹೆಚ್ಚಿನ ಚಿಕಿತ್ಸೆಗೆ ನಿಮ್ಯಾನ್ಸ್ಗೆ ಕಳುಹಿಸುವುದಾಗಿ ವೈದ್ಯರು ತಿಳಿಸಿದರು. ನಮ್ಮೊಂದಿಗೆ ಇದ್ದ ಚಾಲಕ ಖಲಂದರ್ ಕೂಡ ಸಹಕಾರ ನೀಡಿದರು’ ಎಂದು ರೆಡ್ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್ ತಿಳಿಸಿದರು.