ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಶಾಲೆಗೆ ಪ್ರೊಜೆಕ್ಟರ್ ಹಾಗೂ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸ್ಟೀಲ್ ಬಾಟಲಿಗಳನ್ನು ನೀಡಿ ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಎ.ಎಸ್.ಮಂಜುನಾಥ್ ಮಾತನಾಡಿದರು.
ಪ್ರಾಥಮಿಕ ಶಾಲೆಯ ಹಂತದಲ್ಲಿಯೇ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಚಿತ್ರ ಹಾಗೂ ವೀಡಿಯೋ ಮೂಲಕ ಕಲಿಕೆಯನ್ನು ನಡೆಸುವುದರಿಂದ ನಗರ ಹಾಗೂ ಖಾಸಗಿ ಶಾಲೆಯ ಮಕ್ಕಳಿಗಿಂತ ಹೆಚ್ಚು ಶೈಕ್ಷಣಿಕ ಪ್ರಗತಿಯನ್ನು ಸಾಧಿಸಬಹುದೆಂದು ಅವರು ತಿಳಿಸಿದರು.
ಮಕ್ಕಳಿಗೆ ಅತ್ಯುತ್ತಮ ಚಲನಚಿತ್ರಗಳು, ಪರಿಸರ, ವಿಜ್ಞಾನ ಹಾಗೂ ಪಠ್ಯಕ್ಕೆ ಸಂಬಂಧಿಸಿದ ಸಾಕ್ಷ್ಯ ಚಿತ್ರಗಳನ್ನು ತೋರಿಸಿ ಅವರ ಬುದ್ಧಿ, ಆಲೋಚನೆ ಮತ್ತು ಮನಸ್ಸನ್ನು ಅರಳಿಸಬೇಕು. ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸಬೇಕೆಂದು ಹೇಳಿದರು.
ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷ ಆರ್.ಮಂಜುನಾಥ್ ಅವರು ಶಾಲೆಯ ಗ್ರಂಥಾಲಯ ನಿರ್ವಹಣೆಗೆ ಅಗತ್ಯವಿರುವ ಕಪಾಟನ್ನು ನೀಡಿದರು. ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷ ಪುಷ್ಪ ಅವರು ಬೀರುವೊಂದನ್ನು ಶಾಲೆಗೆ ನೀಡಿದರು. ಎಂ.ಪಿ.ಸಿ.ಎಸ್ ಅಧ್ಯಕ್ಷ ಮತ್ತು ಸದಸ್ಯರು ಸುಮಾರು 12 ಸಾವಿರ ರೂ ಬೆಲೆಯ ನೀರಿನ ಫಿಲ್ಟರ್ ಶಾಲೆಗೆ ಕೊಡುಗೆಯಾಗಿ ನೀಡಿದರು.
ಕ.ಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಭಾಗ್ಯಮ್ಮ, ಲೋಕೇಶ್, ಮನು, ಕೃಷ್ಣಪ್ಪ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಮಮತಾ, ಸದಸ್ಯರಾದ ಹನುಮಂತರೆಡ್ಡಿ, ಶಾಲೆಯ ಶಿಕ್ಷಕರಾದ ಎಸ್.ಚಾಂದ್ ಪಾಷ, ಸುಜಾತ, ಭಾರತಿ, ಅಂಗನವಾಡಿ ಸಿಬ್ಬಂದಿ ಮಂಜುಳಾ, ನಳಿನಾ, ನಾರಾಯಣಮ್ಮ, ನೀಲಮ್ಮ ಹಾಜರಿದ್ದರು.