ತಾಲ್ಲೂಕಿನ ವಿವಿದೆಡೆ ಅಲೆಮಾರಿಗಳು ಹಾಗೂ ಹೊರರಾಜ್ಯದಿಂದ ಬಂದ ಕೂಲಿಕಾರ್ಮಿಕರು ಲಾಕ್ ಡೌನ್ ಕಾರಣದಿಂದ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದು, ಅವರ ಸ್ಥಿತಿಗತಿ ಹಾಗೂ ಊಟದ ಕುರಿತಾಗಿ ತಹಶೀಲ್ದಾರ್ ಕೆ.ಅರುಂಧತಿ ಹಾಗೂ ತಾಲ್ಲೂಕು ನೋಡಲ್ ಅಧಿಕಾರಿ ಶಿವಕುಮಾರ್ ಪರಿಶೀಲಿಸಿದರು.
“ತಾಲ್ಲೂಕಿನ ಎಚ್.ಕ್ರಾಸ್ ನಲ್ಲಿ ಗಿಡಮೂಲಿಕೆಗಳನ್ನು ಮಾರುವ ವೃತ್ತಿಯ ಉತ್ತರಭಾರತದ ಮೂಲದ 79 ಜನ ಅಲೆಮಾರಿ ಕುಟುಂಬದ ಸದಸ್ಯರಿದ್ದಾರೆ. ಅವರದೇ ಟೆಂಟ್ ಗಳಲ್ಲಿ ಅವರು ವಾಸಿಸುತ್ತಿದ್ದಾರೆ. ಅವರಿಗೆ ಬೆಳಗಿನ ಹೊತ್ತು ಹಾಲು ಪೂರೈಕೆಯಾಗುತ್ತಿದೆ. ಎನ್.ಜಿ.ಒ ಮುಖಾಂತರ ಪ್ಯಾಕ್ ಮಾಡಿರುವ ಊಟವನ್ನು ಮಧ್ಯಾಹ್ನ ನೀಡುತ್ತಿದೆ. ಉಳಿದಂತೆ ಗ್ರಾಮ ಪಂಚಾಯಿತಿಯಿಂದ ಅವರಿಗೆ ಅಕ್ಕಿ, ಬೇಳೆ ಹಾಗೂ ನೀರನ್ನು ಒದಗಿಸಲಾಗುತ್ತಿದೆ” ಎಂದು ತಾಲ್ಲೂಕು ನೋಡಲ್ ಅಧಿಕಾರಿ ಶಿವಕುಮಾರ್ ಮಾಹಿತಿ ನೀಡಿದರು.
“ತಾಲ್ಲೂಕಿನ ದಿಬ್ಬೂರಹಳ್ಳಿಯಲ್ಲಿ ಎರಡು ಮೂರು ಕಡೆ ಒಟ್ಟು 32 ಮಂದಿ ನಮ್ಮ ರಾಜ್ಯದವರೇ ಅಲೆಮಾರಿ ಜನರಿದ್ದಾರೆ. ಬೀದಿಬೀದಿ ತಿರುಗಿ ಮಕ್ಕಳ ಆಟಿಕೆಗಳು, ದಿನೋಪಯೋಗಿ ಸಾಮಾನುಗಳನ್ನು ಮಾರುವ ವೃತ್ತಿಯವರು ವರು. ಅವರಿಗೂ ಬೆಳಗಿನ ಹಾಲು, ಪ್ಯಾಕ್ ಮಾಡಿರುವ ಊಟ ಮತ್ತು ಅಕ್ಕಿ ನೀರನ್ನು ಗ್ರಾಮ ಪಂಚಾಯಿತಿಯವರು ನೀಡುತ್ತಿದ್ದಾರೆ.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿಯ ಅಪ್ಪೇಗೌಡನಹಳ್ಳಿಯಲ್ಲಿ ಇಂದಿರಾ ವಸತಿ ಶಾಲೆ ಕಟ್ಟಡ ಕಾಮಗಾರಿಯ 70 ಜನ ಕೂಲಿ ಕಾರ್ಮಿಕರಿದ್ದಾರೆ. ಈ ಕೂಲಿ ಕಾರ್ಮಿಕರು ಆಂಧ್ರಪ್ರದೇಶ, ಉತ್ತರಪ್ರದೇಶ, ಒರಿಸ್ಸಾ, ಜಾರ್ಖಂಡ್, ಬಿಹಾರ ರಾಜ್ಯಗಳಿಂದ ಬಂದಿದ್ದಾರೆ, ಅವರು ಉಳಿಯಲೆಂದು ಗುತ್ತಿಗೆದಾರರು ಶೆಡ್ ಮಾಡಿಕೊಟ್ಟಿದ್ದಾರೆ. ಗ್ರಾಮ ಪಂಚಾಯಿತಿಯವರು ಅವರಿಗೆ ಅಕ್ಕಿ ನೀಡಿದ್ದಾರೆ. ಅಲ್ಲದೆ ವಸತಿ ಶಾಲೆಯ ಗುತ್ತಿಗೆದಾರರು ಒಂದು ವಾರಕ್ಕೆ ಒಬ್ಬರಿಗೆ ಒಂದು ಸಾವಿರ ರೂಗಳನ್ನು ಕೊಡುತ್ತಿದ್ದಾರೆ. ಹಾಗಾಗಿ ಅವರಿಗೆ ಏನೂ ಸಮಸ್ಯೆಯಿಲ್ಲ.
ಶಿಡ್ಲಘಟ್ಟದ ಸಮಾಜ ಕಲ್ಯಾಣ ಇಲಾಖೆಯ ಬಿ.ಸಿ.ಎಂ ಹಾಸ್ಟೆಲಿನಲ್ಲಿ ಎಂಟು ಮಂದಿ ಹಕ್ಕಿಪಿಕ್ಕಿಯವರು, ನಿರ್ಗತಿಕರು, ಭಿಕ್ಷುಕರು ಇದ್ದಾರೆ. ಅವರಿಗೆ ಮೂರು ಹೊತ್ತು ಊಟ, ತಿಂಡಿ ಕೊಡಲಾಗುತ್ತಿದೆ.
ಶಿಡ್ಲಘಟ್ಟದ ಮಸೀದಿಯಲ್ಲಿ ಗುಜರಾತ್ ನಿಂದ ಬಂದ 12 ಮಂದಿ ಉಳಿದಿದ್ದಾರೆ. ನಮ್ಮಲ್ಲಿ ಗಂಡಸರು ವ್ರತ ಇದ್ದು ಮಾಲೆ ಹಾಕಿ ದೇವಸ್ಥಾನಕ್ಕೆ ಹೋಗುವಂತೆ ಮುಸ್ಲೀಮರಲ್ಲಿಯೂ ಇದೆಯಂತೆ. ಆ ಪದ್ಧತಿಯಂತೆ ಎರಡು ತಿಂಗಳ ಮಟ್ಟಿಗೆ ಅವರು ಬಂದಿದ್ದು, ಅವರೇ ಅಡುಗೆ ಮಾಡಿಕೊಂಡು ತಿನ್ನುತ್ತಿದ್ದಾರೆ. ದಿನಸಿ ವಸ್ತುಗಳಿಗೆ ಕೊರತೆಯಿಲ್ಲ, ಏನೂ ಬೇಡ ಎಂದು ಅವರು ಹೇಳಿದರು. ತಾಲ್ಲೂಕು ಆರೋಗ್ಯಾಧಿಕಾರಿಗಳು ಸ್ವಾಬ್ ಪರೀಕ್ಷೆಗೆ ಅವರ ಗಂಟಲು ದ್ರವವನ್ನು ತೆಗೆದುಕೊಂಡು ಲ್ಯಾಬ್ ಗೆ ಕಳುಹಿಸಿದ್ದಾರೆ” ಎಂದು ಮಾಹಿತಿ ನೀಡಿದರು.
“ಯಾರೂ ಸ್ಥಳಬಿಟ್ಟು ಬೇರೆಡೆಗೆ ಹೋಗಬಾರದು. ಹೊರಗೆ ತಿರುಗಾಡದೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಅವರಿಗೆ ಸೂಚಿಸಿದ್ದೇವೆ” ಎಂದು ತಹಶೀಲ್ದಾರ್ ಕೆ.ಅರುಂಧತಿ ತಿಳಿಸಿದರು.