Home News ಇರಗಪ್ಪನಹಳ್ಳಿಯ ಗ್ರಾಮಸ್ಥರು ಪತ್ತೆಹಚ್ಚಿದ ಅಪರೂಪದ ಶಾಸನ

ಇರಗಪ್ಪನಹಳ್ಳಿಯ ಗ್ರಾಮಸ್ಥರು ಪತ್ತೆಹಚ್ಚಿದ ಅಪರೂಪದ ಶಾಸನ

0

ತಾಲ್ಲೂಕಿನ ಇರಗಪ್ಪನಹಳ್ಳಿಯಲ್ಲಿ ಗುರುವಾರ ವಿಶಿಷ್ಟ ಕೆತ್ತನೆಯ ಸೋಪಾನದ ಸಾಲಿನಿಂದ ಕೂಡಿದ ನೀರಿನ ಕೊಳದ ಬಳಿ ಗ್ರಾಮಸ್ಥರು ಪುರಾತನ ಸಂಸ್ಕೃತ ಭಾಷೆಯ ಶಾಸನವನ್ನು ಪತ್ತೆ ಹಚ್ಚಿದ್ದಾರೆ.
ಗ್ರಾಮದ ಪಟೇಲ್‌ ಬೈರಾರೆಡ್ಡಿ ನೇತೃತ್ವದಲ್ಲಿ ಫಣಿಕುಮಾರ್‌, ಗೆರಿಗಪ್ಪ, ರಾಜಪ್ಪ, ಮುನಿರಾಜು, ಎಸ್‌.ವೆಂಕಟೇಶ್‌ ಮತ್ತಿತರರು ಬಸವನ ಮಂಟಪದ ಸ್ವಲ್ಪ ದೂರದಲ್ಲಿ ವಿಶಾಲವಾದ ಹೊಲದಲ್ಲಿ ಇರುವ ಕೊಳದ ಬಳಿ ಮಣ್ಣಿನಲ್ಲಿ ಹೂತುಹೋಗಿದ್ದ ಶಾಸನವನ್ನು ಹುಡುಕಿ ತೆಗೆದು, ಕಲ್ಲನ್ನು ತೊಳೆದಿಟ್ಟಿದ್ದಾರೆ.
‘ಈಚೆಗೆ ನಮ್ಮ ಗ್ರಾಮಕ್ಕೆ ಶಾಸನತಜ್ಞ ಪ್ರೊ.ಕೆ.ಆರ್‌.ನರಸಿಂಹನ್‌ ಬಂದಿದ್ದರು. ಅವರು ನಂದಿಮಂಟಪದ ಬಳಿಯಿರುವ ಸಂಸ್ಕೃತ ಭಾಷೆಯ ಶಾಸನವನ್ನು ಕಂಡು ಕ್ರಿ.ಶ. 1359ನೇ ಕಾಲದ ಶಾಸನದ ಬಗ್ಗೆ ವಿವರ ನೀಡಿ ಅದನ್ನು ಸಂರಕ್ಷಿಸಲು ಹೇಳಿದ್ದರು. ಆ ಸಂದರ್ಭದಲ್ಲಿ ನಿಮ್ಮ ಗ್ರಾಮದ ಕೊಳದ ಬಳಿಯೂ ಇನ್ನೊಂದು ಶಾಸನ ಇರಬೇಕು. ಬಿ.ಎಲ್‌.ರೈಸ್‌ ಅವರ ಎಪಿಗ್ರಾಫಿಕಾ ಕರ್ನಾಟಕಾ ದಲ್ಲಿ ಅದರ ಬಗ್ಗೆ ಮಾಹಿತಿ ಇದೆ. ಅದೂ ಕೂಡ ಸಂಸ್ಕೃತದ ಶಾಸನ. ಕ್ರಿ.ಶ. 1360 ರ ಆ ಶಾಸನವನ್ನು ಹುಡುಕಿ ಎಂದು ಹೇಳಿದ್ದರು. ಬಹಳ ವರ್ಷಗಳ ಹಿಂದೆ ನಾವೂ ಅದನ್ನು ನೋಡಿದ್ದೆವು. ಆದರೆ ಜಮೀನುಗಳ ಬದುವಿನ ಮಣ್ಣು ಬಿದ್ದು ಅದು ಮುಚ್ಚಿ ಹೋಗಿತ್ತು. ಈ ದಿನ ಗ್ರಾಮಸ್ಥರ ಸಹಕಾರದಿಂದ ಹಾಗೂ ಶ್ರಮದಾನದಿಂದ ಅಪರೂಪದ ಇತಿಹಾಸದ ಕಲ್ಲನ್ನು ಹುಡುಕಿಟ್ಟೆವು’ ಎಂದು ಪಟೇಲ್‌ ಬೈರಾರೆಡ್ಡಿ ತಿಳಿಸಿದರು.
‘ಈ ಶಾಸನವು ರಾಮಾಂಬನ ಮಗನು ತನ್ನ ಸ್ನೇಹಿತರಾದ ಸದೇಶ್ವರ ಶಿವಾಚಾರ್ಯ ಸ್ವಾಮಿಗಳಿಗೆ ಶಂಭುವಿನ ಅಭಿಷೇಕ ಕೈಂಕರ್ಯಕ್ಕೆ ಬಿಟ್ಟ ದತ್ತಿಯನ್ನು ದಾಖಲಿಸುತ್ತದೆ. ಗ್ರಾಮಸ್ಥರ ಆಸಕ್ತಿಯಿಂದ ಇದು ಪತ್ತೆಯಾಗಿದೆ. ಇಲ್ಲಿನ ಎರಡೂ ಶಾಸನಗಳನ್ನು ಸ್ಮಾರಕಗಳ ರೀತಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಇಲ್ಲಿನ ಇತಿಹಾಸವನ್ನು ಸಾರಬೇಕು’ ಎಂದು ಶಾಸನತಜ್ಞ ಪ್ರೊ.ಕೆ.ಆರ್‌.ನರಸಿಂಹನ್‌ ಹೇಳಿದರು.