Home News ಎರಡು ಪಾಳಿಯಲ್ಲಿ ವಿದ್ಯುತ್ ನೀಡಬೇಕೆಂದು ರೈತ ಸಂಘದಿಂದ ಒತ್ತಾಯ

ಎರಡು ಪಾಳಿಯಲ್ಲಿ ವಿದ್ಯುತ್ ನೀಡಬೇಕೆಂದು ರೈತ ಸಂಘದಿಂದ ಒತ್ತಾಯ

0

ಮೇಲೂರು ಸಬ್ ಸ್ಟೇಷನ್ ನಲ್ಲಿ ಸತತ ಏಳು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಹಿಂದೆ ಇದ್ದಂತೆ ಹಗಲು ಮತ್ತು ರಾತ್ರಿ ಎರಡು ಪಾಳಿಯಲ್ಲಿ ವಿದ್ಯುತ್ ನೀಡಬೇಕೆಂದು ರೈತ ಸಂಘದ ಪದಾಧಿಕಾರಿಗಳು ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀನಾಥರೆಡ್ಡಿ ಅವರಿಗೆ ಮಂಗಳವಾರ ಮನವಿಯನ್ನು ಸಲ್ಲಿಸಿದರು.
“ನಮ್ಮ ತಾಲ್ಲೂಕಿನಲ್ಲಿ ಕೊಳವೆಬಾವಿಗಳಲ್ಲಿ ಹೆಚ್ಚಿನ ನೀರು ಇಲ್ಲ. ಎರಡು ಅಥವಾ ಮೂರು ಗಂಟೆ ನೀರು ಮೇಲೆತ್ತುವಷ್ಟರಲ್ಲಿ ಅಂತರ್ಜಲ ಬರಿದಾಗುತ್ತದೆ. ಅದು ಶೇಖರಣೆಯಾಗಲು ಕೆಲವು ಗಂಟೆಗಳು ಬೇಕು. ಹಿಂದೆ ಹಗಲಿನಲ್ಲಿ ಮೂರು ಗಂಟೆ ರಾತ್ರಿ ವೇಳೆ ನಾಲ್ಕು ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ನೀಡಲಾಗುತ್ತಿತ್ತು. ಅದು ನಮ್ಮ ಬಯಲು ಸೀಮೆಯ ರೈತರಿಗೆ ಅನುಕೂಲಕರವಾಗಿತ್ತು. ಆದರೆ ಈಗ ಸತತ ಏಳು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ ನೀರಿನ ಕೊರತೆ ಹಾಗೂ ಮೋಟರ್ ಗಳು ಸುಟ್ಟುಹೋಗುತ್ತಿವೆ. ಆದ್ದರಿಂದ ದಯವಿಟ್ಟು ಹಿಂದೆ ಇದ್ದಂತೆಯೇ ವಿದ್ಯುತ್ ಸರಬರಾಜನ್ನು ಎರಡು ಪಾಳಿಯಲ್ಲಿ ಕೊಡಿ ಎಂದು ರೈತರು ಮನವಿ ಮಾಡಿದರು.
ಎಇಇ ಸಯ್ಯದ್ ರೆಹಮಾನ್ ಮಾತನಾಡಿ, ಸರ್ಕಾರದ ಆದೇಶದಂತೆ ನಾವು ಮೇಲೂರು ಹಾಗೂ ಪಲಿಚೇರ್ಲು ಸಬ್ ಸ್ಟೇಷನ್ ಗಳಲ್ಲಿ ಸತತ ಏಳು ಗಂಟೆಗಳ ಕಾಲ ವಿದ್ಯುತ್ ನೀಡುತ್ತಿದ್ದೇವೆ. ರೈತರ ಸಮಸ್ಯೆಯನ್ನು ಮೇಲಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ಚಿಂತಾಮಣಿ ತಾಲ್ಲೂಕು ಅಧ್ಯಕ್ಷ ರಮಣಾರೆಡ್ಡಿ, ಬೀರಪ್ಪ, ಚೌಡಪ್ಪ, ಮಂಜುನಾಥ್, ಅಶ್ವತ್ಥ್, ಆನಂದ್, ಶ್ರೀನಾಥ್, ವೆಂಕಟೇಶಪ್ಪ, ಪಾಪಣ್ಣ ಹಾಜರಿದ್ದರು.

error: Content is protected !!