Home News ಎ.ಪಿ.ಎಂ.ಸಿ. ಚುನಾವಣೆಯಿಂದ ಜೆಡಿಎಸ್ ಪಕ್ಷ ಹೊರಗುಳಿಯಲು ನಿರ್ಧಾರ

ಎ.ಪಿ.ಎಂ.ಸಿ. ಚುನಾವಣೆಯಿಂದ ಜೆಡಿಎಸ್ ಪಕ್ಷ ಹೊರಗುಳಿಯಲು ನಿರ್ಧಾರ

0

ಕಾಂಗ್ರೆಸ್ ಪಕ್ಷದ ಅಧಿಕಾರ ದುರ್ಬಳಕೆ ಹಾಗೂ ನ್ಯಾಯಾಲಯದಲ್ಲಿ ಆಗಿರುವ ಹಿನ್ನಡೆಯಿಂದಾಗಿ ಜನವರಿ 12 ರಂದು ನಡೆಯಲಿರುವ ಎ.ಪಿ.ಎಂ.ಸಿ.ಚುನಾವಣೆಯಿಂದ ಶಿಡ್ಲಘಟ್ಟ ತಾಲ್ಲೂಕಿನ ೫ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಹಾಗೂ ಮುಖಂಡರು ಹೊರಗುಳಿಯಲು ನಿರ್ಧಾರ ಮಾಡಲಾಗಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಪ್ರವಾಸಿಮಂದಿರಲ್ಲಿ ಬುಧವಾರ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.ಪಿ.ಎಂ.ಸಿ.ಚುನಾವಣೆಗೆ ಮೊದಲು ಅಧಿಸೂಚನೆ ಹೊರಡಿಸಿದ ಸಂದರ್ಭದಲ್ಲಿ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಭಾರಿ ಅಕ್ರಮವಾಗಿದೆ ಎಂದು ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲವು ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ತೆಗೆದುಕೊಂಡಿದೆ. ಅದೇ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸಲು ಕೊನೆಯ ದಿನದಂದು ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದೆವು. ಇದೇ ದಿನದಲ್ಲಿ ರಾಜ್ಯ ಹೈಕೋರ್ಟ್‌ನಿಂದ ಮೊದಲ ಅಧಿಸೂಚನೆಗೆ ತಡೆಯಾಜ್ಞೆ ಬಂದಿತ್ತು.
ನಂತರ ಎರಡನೇ ಬಾರಿಗೆ ಜಿಲ್ಲಾ ಚುನಾವಣಾಧಿಕಾರಿಗಳಿಂದ ಅಧಿಸೂಚನೆ ಹೊರಡಿಸಲಾಯಿತು. ಕಾಂಗ್ರೆಸ್ ನವರು ಮೊದಲ ಅಧಿಸೂಚನೆಗೆ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಿ ಮೊದಲ ಅಧಿಸೂಚನೆಯಂತೆಯೆ ಚುನಾವಣೆ ನಡೆಯಲು ಅವಕಾಶ ನೀಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ನಾವೂ ಕೂಡಾ ಎರಡನೇ ಅಧಿಸೂಚನೆಯಂತೆ ನಮಗೆ ಅವಕಾಶ ಕಲ್ಪಿಸಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದೇವು. ಡಿಸೆಂಬರ್‌ 29 ರಂದು ಎರಡನೇ ಅಧಿಸೂಚನೆಗೆ ತಡೆಯಾಜ್ಞೆ ನೀಡಲಾಗಿರುತ್ತದೆ.
ಅರ್ಜಿದಾರರಾದ ಡಾ.ಧನಂಜಯರೆಡ್ಡಿ ಅವರು ಸ್ಪರ್ಧಿಸಿರುವ ಕ್ಷೇತ್ರವನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಚುನಾವಣೆ ಮುಂದುವರೆಸಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯವರು ಸೂಚನೆ ನೀಡಿರುತ್ತಾರೆ. ನ್ಯಾಯಾಲಯದ ತಡೆಯಾಜ್ಞೆಯನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲವೆಂದು ಪುನಃ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವು. ಆದರೆ ನ್ಯಾಯಾಲಯದಿಂದ ಬಂದ ಆದೇಶದಲ್ಲಿ ನಮಗೆ ಹಿನ್ನಡೆಯಾಗಿರುವುದರಿಂದ ನಾವು ಚುನಾವಣೆಗೆ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿಲ್ಲದ ಕಾರಣ ಎಲ್ಲಾ ಅಭ್ಯರ್ಥಿಗಳು, ಹಾಗೂ ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸಿದ ನಂತರ ಚುನಾವಣೆಯಿಂದ ದೂರವುಳಿಯುವಂತಹ ನಿರ್ಧಾರವನ್ನು ಕೈಗೊಂಡಿದ್ದೇವೆ ಎಂದರು.
ಮುಖಂಡ ಬಿ.ಎನ್.ರವಿಕುಮಾರ್ ಮಾತನಾಡಿ, ಮಾಜಿ ಶಾಸಕ ವಿ.ಮುನಿಯಪ್ಪ ಅವರು ಹಿಂದಿನಿಂದಲೂ ವಾಮಮಾರ್ಗದಲ್ಲೆ ಚುನಾವಣೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ರೀತಿ ಈ ಚುನಾವಣೆಯಲ್ಲಿಯು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ಅಧಿಕಾರ ದರ್ಬಳಕೆ ಮಾಡಿಕೊಂಡು ಈ ಬೆಳವಣಿಗೆಗಳಿಗೆ ಕಾರಣರಾಗಿದ್ದಾರೆ. ಶಿಡ್ಲಘಟ್ಟ ಟೌನ್ ೯ ನೇ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ತಮ್ಮ ಬಾವಮೈದುನನ್ನು ನಿರ್ದೇಶಕನನ್ನಾಗಿ ಮಾಡುವ ಉದ್ದೇಶದಿಂದ ಸರ್ಕಾರಿ ಭೂಮಿಗಳನ್ನು ರೈತರ ಹೆಸರಿಗೆ ಪಹಣಿಗಳಲ್ಲಿ ಖಾತೆ ಬದಲಾವಣೆ ಮಾಡಿಸುವ ಮೂಲಕ ಅಕ್ರಮ ಎಸಗಿದ್ದಾರೆ. ಚುನಾವಣೆಯಿಂದ ಹಿಂದೆ ಸರಿದರೂ ಕಾನೂನು ಹೋರಾಟ ಮುಂದುವರೆಯಲಿದೆ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಗಂಜಿಗುಂಟೆ ನರಸಿಂಹಮೂರ್ತಿ, ನಾಗಮಂಗಲ ಶ್ರೀನಿವಾಸಗೌಡ, ಮುಗಲಡಪಿ ನಂಜಪ್ಪ, ತಾದೂರು ರಘು, ಮುಂತಾದವರು ಹಾಜರಿದ್ದರು.

error: Content is protected !!