ನಗರದ ಸಾರಿಗೆ ಬಸ್ ನಿಲ್ದಾಣ ಬಳಿ ನಗರಸಭೆಯಿಂದ ಐಡಿಎಸ್ಎಂಟಿ ಯೋಜನೆಯಡಿ ನಿರ್ಮಿಸಿರುವ ೨೯ ಅಂಗಡಿ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಗುರುವಾರ ನಡೆಯಿತು.
ನಗರಸಭೆ ಅಧ್ಯಕ್ಷ ಅಫ್ಸರ್ಪಾಷ ಅಧ್ಯಕ್ಷತೆಯಲ್ಲಿ ಗುರುವಾರ ನಗರಸಭೆಯ ಸಭಾಂಗಣದಲ್ಲಿ ನಡೆದ ಬಹಿರಂಗ ಹರಾಜಿನಲ್ಲಿ ಎಲ್ಲ ೨೯ ಅಂಗಡಿಗಳ ಪೈಕಿ ಬಹುತೇಕ ಅಂಗಡಿಗಳು ಹರಾಜಿನಲ್ಲಿ ವಿಲೇಯಾಗಿದ್ದು ಮೂರ್ನಾಲ್ಕು ಅಂಗಡಿಗಳಿಗೆ ಹರಾಜಿನಲ್ಲಿ ಯಾರೂ ಬಿಡ್ ಮಾಡದಿದ್ದರಿಂದ ಅಂತಹ ಅಂಗಡಿಗಳ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಯಿತು.
ಈ ಮೊದಲೆ ನಿರ್ದಿಷ್ಟ ಅಂಗಡಿಗೆ ಮುಂಗಡ ಪಾವತಿಸಿದ್ದವರು ಮಾತ್ರ ಹರಾಜಿನಲ್ಲಿ ಭಾಗವಹಿಸಿ ಬಿಡ್ ನೀಡಿದರು.
ಒಟ್ಟು ೨೯ ಅಂಗಡಿಗಳಿದ್ದು ಅದರಲ್ಲಿ ಒಂದು ಅಂಗಡಿಯನ್ನು ವಿಕಲಚೇತನರಿಗೆ ಹಾಗು ಐದು ಅಂಗಡಿಗಳನ್ನು ಪರಿಶಿಷ್ಟ ಜಾತಿಗೆ ಹಾಗೂ ಎರಡು ಅಂಗಡಿಗಳನ್ನು ಪರಿಶಿಷ್ಟ ಪಂಗಡದವರಿಗೆ ಉಳಿದ ೨೧ ಅಂಗಡಿಗಳು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿತ್ತು. ಹರಾಜು ಪ್ರಕ್ರಿಯೆಯ ಪ್ರಾರಂಭದಲ್ಲಿ ವಿಕಲಚೇತನರ ಹಾಗು ಪ.ಜಾ ಹಾಗೂ ಪ.ಪಂ ದವರಿಗೆ ಮೀಸಲು ಇಟ್ಟ ಅಂಗಡಿಗಳ ಹರಾಜು ನಡೆಸಲಾಯಿತು. ನಂತರ ಇತರೆ ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟಿದ್ದ ಅಂಗಡಿಗಳ ಹರಾಜನ್ನು ನಡೆಸಲಾಯಿತು.
ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ಐಡಿಎಸ್ಎಂಟಿ ಯೋಜನೆಯಡಿ ನಿರ್ಮಿಸಿರುವ ಈ ಅಂಗಡಿಗಳಿಗೆ ಇಲಾಖೆಯ ನಿಯಮದಂತೆ ಬಾಡಿಗೆಯನ್ನು ಮೊದಲೆ ನಿಗಪಡಿಸಿದ್ದು ಮುಂಗಡ ಠೇವಣಿ ಹಣಕ್ಕೆ ಮಾತ್ರ ಬಿಡ್ ನೀಡಲಾಯಿತು.
ಈ ಹಿಂದೆಯು ಈ ಅಂಗಡಿ ಮಳಿಗೆಗಳ ಹರಾಜನ್ನು ನಿಗದಿಪಡಿಸಲಾಗಿತ್ತಾದರೂ ಈ ಮೊದಲು ಅಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಿಸುವುದಕ್ಕೂ ಮುನ್ನ ಮೊದಲಿನಿಂದಲು ಅಂಗಡಿಗಳನ್ನು ಇಟ್ಟುಕೊಂಡಿದ್ದವರು ತಮಗೆ ಮೊದಲ ಆಧ್ಯತೆಯನ್ನು ನೀಡಬೇಕೆಂದು ಐಡಿಎಸ್ಎಂಟಿ ಯೋಜನೆಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದರು. ಇದರಿಂದ ಹರಾಜು ಮುಂದೂಡಲ್ಪಟ್ಟಿದ್ದು ಗುರುವಾರ ಹರಾಜು ಪ್ರಕ್ರಿಯೆ ನಡೆಯಿತು.
ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಸದಸ್ಯರಾದ ವೆಂಕಟಸ್ವಾಮಿ, ಸಿಕಂದರ್, ನವಾಜ್, ಆಯುಕ್ತ ಹರೀಶ್ ಮತ್ತಿತರರು ಹಾಜರಿದ್ದರು.