ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಜನವರಿ 20 ರಂದು ನಡೆಸಲು ಉದ್ದೇಶಿಸಿರುವ ಬೃಹತ್ ರಕ್ತದಾನ ಶಿಬಿರಕ್ಕೆ ಸಂಬಂಧಿಸಿದಂತೆ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿದರು.
ರಕ್ತದಾನ ಮಾಡುವುದರಿಂದ ಜೀವದಾನ ಮಾಡಿದಂತೆ. ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ಸಹಕಾರದೊಂದಿಗೆ ಸಾರ್ವಜನಿಕರಿಗೆ ಮನವೊಲಿಸಬೇಕು. ತಾವುಗಳೂ ರಕ್ತದಾನ ಮಾಡುವ ಮೂಲಕ ದಾಖಲೆಯ ಪ್ರಮಾಣದಲ್ಲಿ ರಕ್ತವನ್ನು ಸಂಗ್ರಹಿಸಬೇಕು. ಒಂದು ಸಾವಿರ ಯೂನಿಟ್ ಗಿಂತಲೂ ಅಧಿಕ ರಕ್ತದಾನಿಗಳಿಂದ ಸಂಗ್ರಹಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಅವರು ತಿಳಿಸಿದರು.
ರೆಡ್ ಕ್ರಾಸ್ ಸೊಸೈಟಿ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್ ಮಾತನಾಡಿ, ಜಿಲ್ಲೆಯಲ್ಲಿ ಒಂದು ದಿನಕ್ಕೆ ಇಪ್ಪತ್ತೈದರಿಂದ ಮುವತ್ತು ಯೂನಿಟ್ ರಕ್ತದ ಅವಶ್ಯಕತೆಯಿದೆ. ಅದಕ್ಕಾಗಿ ಆರೋಗ್ಯವಂತರೆಲ್ಲರೂ ರಕ್ತದಾನ ಮಾಡಿ. ಪ್ರಥಮದರ್ಜೆ ಕಾಲೇಜು , ಐಟಿಐ, ಪಿಯುಸಿ ವಿದ್ಯಾರ್ಥಿಗಳು, ಶಿಕ್ಷಕರು, ಆಟೋ ಚಾಲಕರ ಸಂಘ, ಕನ್ನಡಪರ, ಜನಪರ ಸಂಘಟನೆಗಳು, ರೈತ ಸಂಘಟನೆಗಳು ರಕ್ತದಾನದ ಶಿಬಿರದಲ್ಲಿ ಭಾಗಿಯಾಗಬೇಕು. ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ರಕ್ತದಾನದ ಶಿಬಿರದಲ್ಲಿ ಬಾಗವಹಿಸಲು ಪ್ರಚಾರದ ಅವಶ್ಯಕತೆಯಿದೆ. ವಾಟ್ಸಪ್ ಗ್ರೂಪ್, ಮುದ್ರಣ ಪ್ರತಿಗಳು, ಫ್ಲೆಕ್ಸ್ ಬ್ಯಾನರ್ ಹಾಗೂ ಮೌಖಿಕವಾಗಿ ಅರಿವು ಮೂಡಿಸಬೇಕೆಂದರು.
ತಾಲ್ಲೂಕು ಪಂಚಾಯಿತಿ ಇ.ಒ.ಶಿವಕುಮಾರ್, ಡಾ.ವೆಂಕಟೇಶ ಮೂರ್ತಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸುಬ್ಬಾರೆಡ್ಡಿ, ಶಿರಸ್ತೆದಾರ ಮಂಜುನಾಥ್, ಅಕ್ಕಲರೆಡ್ಡಿ ಹಾಜರಿದ್ದರು.