ಕಳೆದ ಒಂದೂವರೆ ಶತಮಾನದಿಂದಲೂ ಸೇವೆಯನ್ನು ಸಲ್ಲಿಸುತ್ತಿರುವ ಭಾರತೀಯ ಅಂಚೆ ಇಲಾಖೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿರುವ ಕೀರ್ತಿ ಪಡೆದಿದೆ. ಅಂಚೆ ಸೇವೆ ಸಲ್ಲಿಸುವ ಪೋಸ್ಟ್ ಮ್ಯಾನ್ ನನ್ನು ಹಳ್ಳಿಗಳಲ್ಲಿ ಅಂಚೆಯಣ್ಣ ಎಂದು ಕರೆಯುತ್ತಾ ಕುಟುಂಬದ ಸದಸ್ಯನಂತೆ ಕಾಣುತ್ತಾರೆ ಎಂದು ಕೊಂಡೇನಹಳ್ಳಿ ವಿಭಾಗದ ಅಂಚೆ ಪೇದೆ ಆನಂದಮೂರ್ತಿ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವಿಶ್ವ ಅಂಚೆ ದಿನಾಚರಣೆ ಹಾಗೂ ಸಮುದಾಯದತ್ತ ಶಾಲೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ವಿಶ್ವ ಅಂಚೆ ದಿನ. ಅಕ್ಟೋಬರ್ ೯ ರಂದು ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತಿದೆ. ೧೮೭೪ ರಲ್ಲಿ ಸ್ವಿಡ್ಚರ್ಲ್ಯಾಂಡ್ನ ‘ವಿಶ್ವ ಅಂಚೆ ಒಕ್ಕೂಟ’ ವಿಶ್ವ ಅಂಚೆ ದಿನವನ್ನು ಹುಟ್ಟುಹಾಕಿತ್ತು. ಈಗ ವಿಶ್ವದ ಸುಮಾರು ೧೫೦ ರಾಷ್ಟ್ರಗಳಲ್ಲಿ ಪ್ರತಿ ವರ್ಷವೂ ವಿಶ್ವ ಅಂಚೆ ದಿನ ಆಚರಿಸಲಾಗುತ್ತಿದೆ. ಕಾಲ ಮತ್ತು ತಾಂತ್ರಿಕ ಬದಲಾವಣೆಯಾದಂತೆ ಅಂಚೆ ಇಲಾಖೆಯೂ ಜನಸ್ನೇಹಿಯಾಗಿ ಮುಂದುವರೆದಿದೆ ಎಂದರು.
ಅಂಚೆ ಇಲಾಖೆಯ ಸೌಲಭ್ಯಗಳಾದ ಪಿ.ಎಲ್.ಐ, ಆರ್.ಡಿ, ಎಸ್.ಬಿ ಖಾತೆಗಳು, ಅಂಚೆ ಕಾರ್ಡ್, ಅಂತರದೇಶೀಯ ಪತ್ರಗಳು, ರಿಜಿಸ್ಟರ್ಡ್ ಪೋಸ್ಟ್, ಮನಿ ಆರ್ಡರ್, ಸ್ಪೀಡ್ ಪೋಸ್ಟ್ ಹಾಗೂ ಇತರೆ ಅಂಚೆ ಇಲಾಖೆಯ ಸೌಲಭ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕವಾಗಿ ವಿವರಿಸಿದರು. ಹೆಣ್ಣುಮಕ್ಕಳ ವಿಶೇಷ ಖಾತೆಯ ಕುರಿತೂ ತಿಳಿಸಿದರು. ಅಂಚೆ ಇಲಾಖೆಯು ಕಾರ್ಯನಿರ್ವಹಿಸುವ ರೀತಿಯನ್ನು, ಒಂದು ಕಡೆಯಿಂದ ಮತ್ತೊಂದು ಕಡೆಗೆ ಬರೆದ ಪತ್ರವು ಹೋಗಿ ತಲುಪುವ ಬಗೆಯನ್ನು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗೆ ಹಿಂದೆ ಅಂಚೆ ಪೇದೆಯು ಗ್ರಾಮಗಳನ್ನು ಕಾಲ್ನಡಿಗೆಯಲ್ಲಿ ತಿರುಗಿ ಅಂಚೆಯನ್ನು ವಿತರಿಸುತ್ತಿದ್ದಾಗಿನ ಪೋಷಾಕನ್ನು ಹಾಕಿ, ಪಾರ್ಸಲ್ ಚೀಲ ಕೈಚೀಲ ಗೆಜ್ಜೆಯಿರುವ ದೊಣ್ಣೆ ಹಿಡಿಸಿ ಪ್ರದರ್ಶಿಸಲಾಯಿತು. ಅಂಚೆ ಪೆಟ್ಟಿಗೆಯನ್ನಿಟ್ಟು ವಿದ್ಯಾರ್ಥಿಗಳಿಂದ ಪತ್ರ ಬರೆಸಿ ಹಾಕಿಸಿ ಅಂಚೆ ಇಲಾಖೆಯ ಸೇವೆಯ ಬಗ್ಗೆ ತಿಳಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ಅಂಚೆ ಇಲಾಖೆಯ ಹುಟ್ಟು ಬೆಳವಣಿಗೆ ಹಾಗೂ ಅಂಚೆ ಚೀಟಿ ಸಂಗ್ರಹಣೆಯ ಹವ್ಯಾಸದ ಕುರಿತಂತೆ ಮಕ್ಕಳಿಗೆ ತಿಳಿಸಿದರು.
ಕಳೆದ ೩೬ ವರ್ಷಗಳಿಂದ ತಾಲ್ಲೂಕಿನ ಕೊಂಡೇನಹಳ್ಳಿ, ಕಡಿಶೀಗೇನಹಳ್ಳಿ, ಅಪ್ಪೇಗೌಡನಹಳ್ಳಿ, ಗಂಗನಹಳ್ಳಿ, ಕಂತಹಳ್ಳಿ, ಹನುಮಂತಪುರ, ತಿಮ್ಮನಹಳ್ಳಿ ಗ್ರಾಮಗಳಿಗೆ ಪ್ರತಿದಿನ ಭೇಟಿ ನೀಡಿ ಅಂಚೆ ವಿತರಿಸುವ ಅಂಚೆ ಪೇದೆ ಆನಂದಮೂರ್ತಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಶಿಕ್ಷಕರಾದ ಎಸ್.ಚಾಂದ್ ಪಾಷ, ಎಂ.ಎಂ.ಅಶೋಕ್, ಎಸ್.ಡಿ.ಎಂ.ಸಿ ಸದಸ್ಯ ಹನುಮಂತರೆಡ್ಡಿ, ವೆಂಕಟಮ್ಮ ಹಾಜರಿದ್ದರು.