ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ, ಕೇಂದ್ರ ಗ್ರಂಥಾಲಯದ ಸಹಯೋಗದಲ್ಲಿ “ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ” ೨೧ ನೇ ತಿಂಗಳ ಕಾರ್ಯಕ್ರಮದಲ್ಲಿ ಲೇಖಕ ರಂಜಿತ್ ಜಯರಾಮ್ ಅವರ “ನಮ್ಮಲ್ಲೇ ತಪ್ಪಿರುವಾಗ ಪ್ರಶ್ನಿಸುವುದ್ಯಾರನ್ನು?” ಪುಸ್ತಕವನ್ನು ಬಿಡುಗಡೆ ಮಾಡಿ ಸಾಹಿತಿ ವೇಮಗಲ್ ಪ್ರಶಾಂತ್ ರಾಮಸ್ವಾಮಿ ಮಾತನಾಡಿದರು.
ಸಮಾಜದಲ್ಲಿನ ಬದಲಾವಣೆ ಹಾಗೂ ವಿದ್ಯಾರ್ಥಿ ಪೋಷಕರೊಟ್ಟಿಗಿನ ಸಂಬಂಧದ ಬಗ್ಗೆ ಗೆಳೆಯನೊಬ್ಬ ಪಕ್ಕದಲ್ಲಿ ಕುಳಿತು ಹೇಳುವಂತೆ ಉತ್ತಮ ಮಾರ್ಗದರ್ಶಿ ಸೂತ್ರಗಳನ್ನು ತಮ್ಮ ಪುಸ್ತಕದಲ್ಲಿ ಲೇಖಕ ರಂಜಿತ್ ಜಯರಾಮ್ ಪೋಣಿಸಿಕೊಟ್ಟಿದ್ದಾರೆ. ತೆರೆದ ಮನಸ್ಸಿನಿಂದ ಪುಸ್ತಕವನ್ನು ಓದಿದಾಗ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಲು ಸಾಧ್ಯ ಎಂದು ಅವರು ತಿಳಿಸಿದರು.
ಶಿಕ್ಷಣದೊಂದಿಗೆ ಜೀವನ ಮೌಲ್ಯವನ್ನು ವೃದ್ಧಿಸಿಕೊಂಡು ಸಮಾಜಮುಖಿಯಾಗಿ ಬದುಕನ್ನು ಸಾಗಿಸಿದಾಗ ಮಾತ್ರ ನಮ್ಮ ಹುಟ್ಟು ಸಾರ್ಥಕತೆ ಕಾಣುತ್ತದೆ ಎಂದರು.
ಲೇಖಕ ರಂಜಿತ್ ಜಯರಾಮ್ ಮಾತನಾಡಿ, ವಿದ್ಯಾರ್ಥಿಗಳು ಬದಲಾವಣೆಗೆ ತುಡಿಯಬೇಕು. ಸಾಧನೆಗೆ ಹಂಬಲಿಸಬೇಕು. ಇಡೀ ಕುಟುಂಬದವರು ತಮ್ಮ ಕನಸನ್ನು ನನಸಾಗಿ ಮಾಡಿಕೊಳ್ಳಲು ಬಯಸಬೇಕು. ಸಾಧನೆಗೆ ಬೇಕಾದ ಹಠವಿರುವ ಉತ್ಸಾಹಿ ಯುವಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಕುಗ್ಗಿರುವ ಮನಸ್ಸುಗಳಿಗೆ ಉಪಯುಕ್ತವಾಗಲೆಂಬ ಉದ್ದೇಶದಿಂದ ಪುಸ್ತಕವನ್ನು ಬರೆದಿರುವೆ. ಶಿಕ್ಷಣದೊಂದಿಗೆ ಸಂಸ್ಕಾರ ಮತ್ತು ಸಂಸ್ಕೃತಿ ಅಗತ್ಯತೆಯನ್ನು ತಿಳಿಸಿಕೊಡುವುದು ಮತ್ತು ಆತ್ಮಾವಲೋಕನಕ್ಕೆ ಹಚ್ಚುವುದು ನನ್ನ ಕಾಳಜಿಯಾಗಿದೆ ಎಂದು ಹೇಳಿದರು.
ಮಕ್ಕಳಲ್ಲಿ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಕೌಶಲ್ಯಗಳನ್ನು ಕಲಿಸುವುದು ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಗಳನ್ನು ಸಹ ನಡೆಸುತ್ತಿದ್ದು, ಎಳೆಯರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿರುವುದಾಗಿ ಹೇಳಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಲೇಖಕರಾದ ರಂಜಿತ್ ಜಯರಾಮ್ ರವರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಊರಿನವರು. ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. “ಅಕ್ಷರದ್ವಾರ” ಎಂಬ ಸಂಸ್ಥೆಯೊಂದನ್ನು ಕಟ್ಟಿಕೊಂಡು ಅದರ ಮೂಲಕ ವಿದ್ಯಾರ್ಥಿ, ಪೋಷಕ ಹಾಗೂ ಸಮಾಜಕ್ಕೆ ಒಳಿತಾಗುವ ಕೆಲಸವನ್ನು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಬಗೆಗಿರುವ ಗೊಂದಲವನ್ನು ಪರಿಹರಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದು ಪರಿಚಯಿಸಿದರು.
ಲೇಖಕ ರಂಜಿತ್ ಜಯರಾಮ್ ಅವರು ಗ್ರಂಥಾಲಯಕ್ಕೆ ತಾವು ರಚಿಸಿರುವ ಕೃತಿಯನ್ನು ಕೊಡುಗೆಯಾಗಿ ನೀಡಿದರು.
ಜಯರಾಮ್, ಶ್ಯಾಮಲ, ವೆಂಕಟೇಶ್, ರವಿ, ಸುಂದರನ್, ಅಜಿತ್ ಕೌಂಡಿನ್ಯ, ರಾಜಣ್ಣ, ಶ್ರೀಕಾಂತ್ ತಾಮ್ರಪಾಣಿ, ಸತೀಶ್, ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಚಿತ್ರನಟ ಸಿ.ಎನ್.ಮುನಿರಾಜು, ಶಿಕ್ಷಕರಾದ ದೇವರಾಜ್, ಕಲಾಧರ್, ಗ್ರಂಥಪಾಲಕಿ ಶಂಶಾದ್ ಬೇಗಮ್, ಸಹಾಯಕಿ ಬಾಂಧವ್ಯ, ಲಕ್ಷ್ಮೀನಾರಾಯಣ ಹಾಜರಿದ್ದರು.