ನಗರಸಭೆಗೆ ಸೇರಿದ ಅಂಗಡಿ ಮಳಿಗೆಗಳನ್ನು ಕೆಡವಲು ಅಧಿಕಾರಿಗಳು ಮುಂದಾದಾಗ ತಡೆಯೊಡ್ಡಿದ ಮಳಿಗೆ ಬಾಡಿಗೆದಾರರು ನಮಗೆ ಒಂದು ತಿಂಗಳು ಕಾಲಾವಕಾಶ ಬೇಕು ತಿಂಗಳೊಳಗೆ ಅಂಗಡಿ ಖಾಲಿ ಮಾಡುತ್ತೇವೆ ಇಲ್ಲವಾದಲ್ಲಿ ಅಂಗಡಿಯಲ್ಲಿರುವ ಮಾಲು ಸಹಿತ ಕಟ್ಟಡ ಕೆಡವಲು ನಮ್ಮದೂ ಯಾವುದೇ ಅಭ್ಯಂತರವಿಲ್ಲ ಎಂದು ನಗರಸಭೆ ಆಯುಕ್ತರು ಹಾಗು ಪೊಲೀಸ್ ಇಲಾಖೆಗೆ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.
ನಗರದ ಪ್ರವಾಸಿ ಮಂದಿರ ರಸ್ತೆಯಲ್ಲಿರುವ ನಗರಸಭೆಗೆ ಸೇರಿದ 20 ಅಂಗಡಿಗಳ ಹಳೆ ಕಟ್ಟಡ ಕೆಡವಿ ಅದರ ಹಿಂದೆ ಇರುವ ಖಾಲಿ ನಿವೇಶನ ಸೇರಿಸಿ ಬೃಹತ್ ಕಟ್ಟಡ ನಿರ್ಮಾಣ ಮಾಡಲು ಈಗಾಗಲೇ ತಯಾರಿ ನಡೆದಿದ್ದು ಅದರಂತೆ ಕಟ್ಟಡ ಕೆಡವಲು ಮುಂದಾದ ಅಧಿಕಾರಿಗಳೊಂದಿಗೆ ಅಂಗಡಿಯಲ್ಲಿರುವ ಬಾಡಿಗೆದಾರರು ಕೆಲ ಕಾಲ ಮಾತಿನ ಚಕಮಕಿ ನಡೆಸಿದರು.
ನಗರಸಭೆಯ ನೂತನ ಕಾರ್ಯಾಲಯ ನಿರ್ಮಿಸಲು ನಗರೋತ್ಥಾನ ಯೋಜನೆಯಡಿ ಈಗಾಗಲೇ ಅನುಧಾನ ಬಿಡುಗಡೆಯಾಗಿದ್ದು ಸುಮಾರು 6 ಕೋ ರೂ ವೆಚ್ಚದಲ್ಲಿ ನಗರಸಭೆ ಕಾರ್ಯಾಲಯ ನಿರ್ಮಾಣಕ್ಕೆ ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರಂತೆ ಅಂಗಡಿ ಮಾಲೀಕರಿಗೆ ಈಗಾಗಲೇ ನೋಟೀಸ್ ಸಹ ನೀಡಿದ್ದಿ ಇಂದು ಬೆಳಗ್ಗೆ ಜೆಸಿಬಿಗಳ ಮೂಲಕ ಕಟ್ಟಡ ಕೆಡವಲು ಅಧಿಕಾರಿಗಳು ಮುಂದಾಗಿ ಕಟ್ಟಡದ ಒಂದು ಭಾಗವನ್ನು ಒಡೆದುಹಾಕಿದ್ದಾರೆ.
ಇದನ್ನು ಕಂಡ ಉಳಿದ ಅಂಗಡಿ ಮಾಲೀಕರು ನಮಗೆ ಯಾವುದೇ ಮಾಹಿತಿ ನೀಡದೇ ಹೀಗೆ ಏಕಾಏಕಿ ಅಂಗಡಿ ಕೆಡವುವುದು ಸರಿಯಲ್ಲ. ನಮಗೆ ಇನ್ನೊಂದು ತಿಂಗಳ ಕಾಲ ಅವಕಾಶ ಕೊಡಿ ನಾವೇ ಅಂಗಡಿ ಖಾಲಿ ಮಾಡುತ್ತೇವೆ. ಒಂದು ವೇಳೆ ಅಂಗಡಿ ಖಾಲಿ ಮಾಡದೇ ಇದ್ದಲ್ಲಿ ಅಂಗಡಿಯಲ್ಲಿರುವ ಮಾಲು ಸಮೇತ ಕೆಡವಿ ಹಾಕಿ ಎಂದು ಅಂಗಡಿದಾರರು ಆರಕ್ಷಕ ವೃತ್ತ ನಿರೀಕ್ಷಕ ವೆಂಕಟೇಶ್ ಹಾಗು ನಗರಸಭೆ ಪೌರಾಯುಕ್ತ ಎಚ್.ಎ.ಹರೀಶ್ ರಿಗೆ ಮನವಿ ಸಲ್ಲಿಸಿದ್ದಾರೆ.