ಕುರುಬ ಜನಾಂಗದವರಿಗೆ ರಾಜಕೀಯ ಪ್ರಾತಿನಿಧ್ಯವನ್ನು ಒಗ್ಗೂಡಿ ಗಳಿಸಿಕೊಳ್ಳಬೇಕು ಎಂದು ಚಲನಚಿತ್ರ ನಿರ್ದೇಶಕ ಕೇಶವಾರ ಆರ್.ಚಂದ್ರು ತಿಳಿಸಿದರು.
ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಕನಕ ಯುವಸೇನೆ ಸಂಘಟನೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿಯಷ್ಟೇ ಅಲ್ಲ ರಾಜಕೀಯವಾಗಿಯೂ ಸಮುದಾಯದ ಪ್ರಾತಿನಿಧ್ಯವನ್ನು ಪಡೆಯಬೇಕು. ಯುವಕರು ಈ ಬಗ್ಗೆ ಸಾಂಘಿಕವಾಗಿ ಒಗ್ಗೂಡಿ ಶ್ರಮಿಸಬೇಕು. ಜನಾಂಗದ ದುರ್ಭಲರಿಗೆ ಆಸರೆಯಾಗಬೇಕು. ಪ್ರತಿಯೊಬ್ಬ ಮಗುವೂ ವಿದ್ಯಾವಂತನಾಗುವಂತೆ ಪ್ರೇರೇಪಿಸಬೇಕು. ಮಹಿಳೆಯರನ್ನು ಆರ್ಥಿಕವಾಗಿ ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕರ್ನಾಟಕ ಪ್ರಾದೇಶಿಕ ಕುರುಬ ಸಮಾಜದ ಉಪಾಧ್ಯಕ್ಷ ನಾಗರಾಜು ಮಾತನಾಡಿ, ಸಂಘಟನೆಯಲ್ಲಿ ರಾಜಕೀಯವನ್ನು ಬೆರೆಸದೇ ಅಭಿವೃದ್ಧಿ ಕಾರ್ಯಗಳತ್ತ ಗಮನಕೊಡಿ. ಎಲ್ಲಾ ಪಕ್ಷಗಳ ಬೆಂಬಲಿತರೂ ಜನಾಂಗದಲ್ಲಿರುತ್ತಾರೆ ಆದರೆ ಸಂಘಟನೆಯ ವಿಚಾರದಲ್ಲಿ ಒಗ್ಗೂಡಿ ಜನಾಂಗದ ಬೆಂಬಲಕ್ಕೆ ನಿಲ್ಲಬೇಕು. ಕನಕ ಯುವ ಸೇನೆ ಸಂಘಟನೆಯ ಪ್ರಾರಂಭವಾಗಿದೆ. ಅದು ನಿರಂತರವಾಗಿ ಕಾರ್ಯಯೋಜನೆಗಳನ್ನು ಹಮ್ಮಿಕೊಂಡು ಮಾದರಿಯಾಗಬೇಕು. ಹಿರಿಯರಾದ ನಾವು ಸದಾ ಬೆಂಬಲವಾಗಿರುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುರುಬ ಜನಾಂಗದ ಸಾಧಕರನ್ನು, ಹಿರಿಯರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಕುರುಬ ಸಂಘದ ಗೌರವಾಧ್ಯಕ್ಷ ಗಣೇಶಪ್ಪ, ಅಧ್ಯಕ್ಷ ಮಂಜುನಾಥ್, ಕನಕ ಯುವಸೇನೆ ಸಂಘಟನೆಯ ಅಧ್ಯಕ್ಷ ಎಂ.ಮುರಳಿ, ಉಪಾಧ್ಯಕ್ಷ ವಿ.ಎಲ್.ಗಣೇಶ್, ಕಾರ್ಯದರ್ಶಿ ಮುನಿರಾಜು, ಆರ್.ರವಿಕುಮಾರ್, ರಾಮಾಂಜಿ, ನಾರಾಯಣಸ್ವಾಮಿ, ದೇವರಾಜು, ಕಳಾವತಿ, ಮಂಜುಳಮ್ಮ ಹಾಜರಿದ್ದರು.