Home News ಕನ್ನಮಂಗಲ ಶಾಲೆಯಲ್ಲಿ ಚಿಣ್ಣರ ಕಾಜಾಣ

ಕನ್ನಮಂಗಲ ಶಾಲೆಯಲ್ಲಿ ಚಿಣ್ಣರ ಕಾಜಾಣ

0

ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಶಾಲೆಯಲ್ಲಿ ಭಾನುವಾರ ಶಾಲೆಯಲ್ಲಿ ನಡೆಯುತ್ತಿರುವ ‘ಸಹಜ’ ಶಿಬಿರದ ಭಾಗವಾಗಿ ನಡೆದ ‘ಚಿಣ್ಣರ ಕಾಜಾಣ’ ಕಾರ್ಯಕ್ರಮವನ್ನು ಸಾಹಿತಿ ಹಾಗೂ ಚಿಣ್ಣರ ಕಾಜಾಣ ಕಾರ್ಯಕ್ರಮದ ಆಯೋಜಕ ಬೇಲೂರು ರಘುನಂದನ ರವರು ಉದ್ಘಾಟಿಸಿದರು.
‘ಮಕ್ಕಳು ಕವಿಗಳ ಕವಿತೆಗಳನ್ನು ವಾಚಿಸುವುದು ಹಾಗೂ ಕಲಿಯುವದರಿಂದ ಮಕ್ಕಳಲ್ಲೂ ಕವಿತೆ ಬರೆಯುವ ಹವ್ಯಾಸ ಉಂಟಾಗುವುದು. ಇದರಿಂದ ಮಕ್ಕಳ ಕಲ್ಪನಾಶೀಲತೆ ಹೆಚ್ಚುವುದು. ಕನ್ನಮಂಗಲದ ಈ ಶಾಲೆಯಲ್ಲಿ ಉತ್ತಮ ಸಾಹಿತ್ಯಕ ವಾತಾವರಣ ಸೃಷ್ಟಿಯಾಗಿರುವುದು ಸಂತಸದ ವಿಚಾರ’ ಎಂದು ಬೇಲೂರು ರಘುನಂದನ ಅಭಿಪ್ರಾಯಪಟ್ಟರು.
ಕನ್ನಮಂಗಲದ ಹದಿಮೂರು ಮಕ್ಕಳು ಕನ್ನಡದ ಹಲವು ಕವಿಗಳ ಕವಿತೆಗಳನ್ನು ವಾಚಿಸಿದರು. ಕಿರಣ್, ಭವಾನಿ, ಶೇಖರ್, ರಾಜೇಶ, ಧನುಷ್, ಗಾಯತ್ರಿ, ಮೀನಾಕ್ಷಿ, ವರ್ಷ, ಅಮೃತ, ವಾಣಿ, ಶಿಲ್ಪ ಈ ಮಕ್ಕಳು ಕನ್ನಡದ ಪ್ರಖ್ಯಾತ ಕವಿಗಳಾದ ಕುವೆಂಪು, ಅಡಿಗ, ಲಂಕೇಶ್, ವೆಂಕಟೇಶಮೂರ್ತಿ, ಲಕ್ಷ್ಮಣರಾವ್, ನಿಸಾರ್ ಅಹಮದ್, ಶಿವರುದ್ರಪ್ಪ, ನರಸಿಂಹಸ್ವಾಮಿ ಮುಂತಾದವರ ಕವನಗಳನ್ನು ವಾಚಿಸಿದರು.
ಕವನವಾಚನದ ನಂತರ ಮಕ್ಕಳೊಂದಿಗೆ ಬೇಲೂರು ರಘುನಂದನರವರು ಸಂವಾದ ನಡೆಸಿದರು. ಈ ಸಂವಾದದಲ್ಲಿ ಕವಿತೆಗಳನ್ನು ಬರೆಯುವ ಕುರಿತು ಮಕ್ಕಳಿಗೆ ಹಲವು ಸೂಚನೆಗಳನ್ನು ಸಲಹೆಗಳನ್ನು ನೀಡಿದರು. ಹಾಗೆಯೇ ಮಕ್ಕಳನ್ನು ಗುಂಪುಗಳಲ್ಲಿ ಕೂರಿಸಿ ಒಂದೊಂದು ವಿಷಯ ಕೊಟ್ಟು ಅದರ ಬಗ್ಗೆ ಕವಿತೆಗಳನ್ನು ಬರೆಯಲು ಸೂಚಿಸಿದರು.
ಶಾಲೆಯ ಶಿಕ್ಷಕರಾದ ಎಸ್. ಕಲಾಧರ್, ಕೆ.ಶಿವಶಂಕರ್, ಚಿಣ್ಣರ ಕಾಜಾಣ ಸಂಚಾಲಕಿ ಮಂಜುಳಾ, ಯುವ ಸಾಹಿತಿಗಳಾದ ಯೋಗೇಶ್ ಹಾಗೂ ಪುನೀತ್ ಹಾಗೂ ಗೋಕುಲ್ ಸಹೃದಯ್ ಕಾರ್ಯಕ್ರಮದಲ್ಲಿ ಹಾಜರಿದ್ದರು.