ಪೋಷಕರು ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯಬೇಕು ಎಂದು ಬಿ.ಜಿ.ಎಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಮಹದೇವಯ್ಯ ತಿಳಿಸಿದರು.
ಪಟ್ಟಣದ ವಾಸವಿ ರಸ್ತೆಯ ಬಳಿಯಿರುವ ಬಿ.ಜಿ.ಎಸ್ ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಕೃಷ್ಣ ವೇಷಧಾರಿ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪೋಷಕರು ಟೀವಿಯಲ್ಲಿ ಧಾರವಾಹಿಗಳ ಮೋಹಕ್ಕೆ ಬಲಿಯಾಗಿ ಈಚೆಗೆ ಮಕ್ಕಳೊಂದಿಗೆ ಹೆಚ್ಚು ಕಳೆಯುತ್ತಿಲ್ಲ. ಅದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಮಕ್ಕಳಿಗೆ ಸಾಂಸ್ಕೃತಿಕ, ಸಾಮಾಜಿಕ, ಪೌರಾಣಿಕ ವಿಷಯಗಳನ್ನು ಕಲಿಸಬೇಕು. ಮಕ್ಕಳ ದೃಷ್ಠಿಯಲ್ಲಿ ಅಮ್ಮ ಅಂದರೆ ಸರ್ವಸ್ವ, ಅಪ್ಪ ಎಂದರೆ ಆಕಾಶ ಎಂದು ಹೇಳಿದರು.
ಪುಟ್ಟ ಮಕ್ಕಳು ಶ್ರೀಕೃಷ್ಣ ಮತ್ತು ರಾಧೆಯ ವೇಷಧಾರಿಗಳಾಗಿ ಎಲ್ಲರ ಮನಸೂರೆಗೊಂಡರು. ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವೇಷಧಾರಿಗಳಾಗಿದ್ದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿ ಸಿಹಿಯನ್ನು ಹಂಚಿದರು.