ತಾಲ್ಲೂಕಿನ ಕೆ.ಮುತ್ತುಗದಹಳ್ಳಿಗೆ ಹತ್ತಿರದ ಕಾಡಿನಿಂದ ಬಂದಿದ್ದ ಜಿಂಕೆಯ ಮೇಲೆ ಆಕ್ರಮಣ ಮಾಡಿ ಸುತ್ತುವರೆದಿದ್ದ ನಾಯಿಗಳನ್ನು ಓಡಿಸಿ ಗ್ರಾಮಸ್ಥರು ಮಾನವೀಯತೆಯನ್ನು ಮೆರೆದಿದ್ದಾರೆ.
ಶನಿವಾರ ಬೆಳಗಿನ ಜಾವ ಗ್ರಾಮಕ್ಕೆ ಮೇವು ಮತ್ತು ನೀರನ್ನು ಅರಸಿ ಬಂದಿದ್ದ ಜಿಂಕೆಯನ್ನು ನಾಯಿಗಳು ಆಕ್ರಮಣ ಮಾಡಿವೆ. ತಕ್ಷಣ ಅದನ್ನು ಕಂಡು ಗ್ರಾಮಸ್ಥರಾದ ಶ್ರೀನಿವಾಸ್, ನಾರಾಯಣಸ್ವಾಮಿ, ಅರುಣ್ ಕುಮಾರ್, ಆಂಜಿನಪ್ಪ ಮತ್ತಿತರರು ನಾಯಿಗಳನ್ನು ಓಡಿಸಿ ಜಿಂಕೆಯನ್ನು ರಕ್ಷಿಸಿ, ನೀರು ಕುಡಿಸಿದ್ದಾರೆ. ನಂತರ ಅರಣ್ಯ ಇಲಾಖೆಯವರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳಾದ ಭಾಸ್ಕರ್ ಮತ್ತು ಮದನ್, ಅದನ್ನು ಚಿಕಿತ್ಸೆ ಕೊಡಿಸಿ ನಂತರ ಅರಣ್ಯದಲ್ಲಿ ಬಿಡುವುದಾಗಿ ತಿಳಿಸಿ, ಗ್ರಾಮಸ್ಥರ ಈ ಪರಿಸರ ಕಾಳಜಿಯನ್ನು ಅಭಿನಂದಿಸಿದರು.
ಪಶುವೈದ್ಯರ ಬಳಿ ಚಿಕಿತ್ಸೆ ಕೊಡಿಸಿ ಜಿಂಕೆಯನ್ನು ಕೈವಾರದ ರಕ್ಷಿತಾರಣ್ಯದಲ್ಲಿ ಬಿಟ್ಟೆವು ಎಂದು ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮಿ ತಿಳಿಸಿದರು.