Home News ಕೋರೇಂಗಾವ್ ವಿಜಯೋತ್ಸವ

ಕೋರೇಂಗಾವ್ ವಿಜಯೋತ್ಸವ

0

ಶೋಷಿತರು ಸಂಘಟಿತರಾಗುವವರೆಗೆ ತುಳಿತಕ್ಕೆ ಒಳಗಾದವರ ಮೇಲಿನ ದೌರ್ಜನ್ಯ ನಿಲ್ಲುವುದಿಲ್ಲ. ಕನಿಷ್ಠ ಕೂಲಿ, ಉತ್ತಮ ಬದುಕು ಪಡೆಯುವುದು ಸಾಧ್ಯವಾಗುವುದಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ.ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಮಂಗಳವಾರ ದಲಿತ ಯುವಜನರು ಆಯೋಜಿಸಿದ್ದ ಕೋರೇಂಗಾವ್ ವಿಜಯೋತ್ಸವದಲ್ಲಿ ಅವರು ಮಾತನಾಡಿದರು.
ದೇಶದ ಆರ್ಥಿಕ ವ್ಯವಸ್ಥೆ ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿ ಸಿಲುಕಿದ್ದು, ಕನಿಷ್ಠ ಕೂಲಿ ನಿಗದಿಗೊಳಿಸದ ಕಾರಣ ಕಾರ್ಮಿಕರು ಬದುಕು ನಡೆಸವುದೇ ಕಷ್ಟವಾಗಿದೆ ಜನವರಿ ೧ ಜಗತ್ತಿಗೆ ಹೊಸ ವರ್ಷದ ಸಂಭ್ರಮದ ದಿನ. ಈ ದಿನ ಶೋಷಿತರ ಪಾಲಿಗೆ ‘ಹೊಸ ಅಧ್ಯಾಯ’ವೊಂದನ್ನು ತೆರೆದ ದಿನವೂ ಹೌದು. ಅಸ್ಪೃಶ್ಯತೆಯ ವಿರುದ್ಧ ಬಂಡೆದ್ದ ಗುಂಪೊಂದು ಮಹಾರಾಷ್ಟ್ರದ ಪೇಶ್ವೆಗಳ ವಿರುದ್ಧ ಜಯ ಸಾಧಿಸಿದ ಈ ದಿನ, ಶೋಷಿತರ ಆತ್ಮಗೌರವ ತಲೆಯೆತ್ತಿದ ದಿನವೆಂದೇ ಪ್ರಸಿದ್ಧ. ಈ ಘಟನೆ ಅಂಬೇಡ್ಕರ್ ಅವರ ಹೋರಾಟದ ಬದುಕಿನ ಪ್ರೇರಣೆಗಳಲ್ಲಿ ಒಂದಾಗಿದೆ ಎಂದರು.
ದಲಿತ ಯುವ ಮುಖಂಡ ಅಶೋಕ್ ಮಾತನಾಡಿ, ಪ್ರತಿ ವರ್ಷದ ಕ್ಯಾಲೆಂಡರ್ನಲ್ಲಿ ಡಿಸೆಂಬರ್ ತಿಂಗಳ ಪುಟವನ್ನು ಮಗುಚುವಾಗ ಜಗತ್ತು ‘ಹೊಸ ವರ್ಷ’ದ ನೆಪದಲ್ಲಿ ಸಂಭ್ರಮಿಸುತ್ತದೆ. ಹಳತರ ಪೊರೆಯನ್ನು ಕಳಚಿಕೊಂಡು ಹೊಸ ಬೆಳಕಿಗೆ ಮೈಯೊಡ್ಡುವುದು ಸಡಗರದ ಸಂದರ್ಭವೇ ನಿಜ. ಆದರೆ, ಈ ಸಂಕ್ರಮಣ ಕಾಲದ ಚರಿತ್ರೆಯಲ್ಲಿ ಹಲವು ಸಂಘರ್ಷಗಳೂ ತವಕತಲ್ಲಣಗಳೂ ಹುದುಗಿಕೊಂಡಿರುತ್ತವೆ. ಈ ತಲ್ಲಣಗಳ ನೆನಪು ಕೂಡ ಹಾದಿ ಬದಲಿಸುವ ಸಂದರ್ಭದಲ್ಲಿ ಜೊತೆಯಾಗುವುದು ಅರ್ಥಪೂರ್ಣವಾಗಿದೆ ಎಂದರು.
ಯುವ ಮುಖಂಡ ವೇಣುಗೋಪಾಲ್ ಮಾತನಾಡಿ, ಚರಿತ್ರೆಯಲ್ಲಿ ಹೂತು ಹೋಗಿದ್ದ ಕೋರೆಗಾಂವ್ ಕದನದ ಅಪೂರ್ವ ಪ್ರಸಂಗವನ್ನು ಇತಿಹಾಸದ ಪುಟಗಳಿಂದ ಹೆಕ್ಕಿ ತೆಗೆದು ಜಗತ್ತಿಗೆ ತೋರಿಸಿದವರು ಬಿ.ಆರ್. ಅಂಬೇಡ್ಕರ್ ಹಾಗಾಗಿಯೇ ಜನವರಿ ೧ ಅಸ್ಪೃಶ್ಯತೆಯ ವಿರುದ್ಧ ಈ ದೇಶದ ಶೋಷಿತ ಜನಾಂಗಗಳ ಅಸಹನೆಯ ಕಟ್ಟೆಯೊಡೆದ ದಿನವಾಗಿಯೂ, ಅವರು ತಮ್ಮ ಅಸ್ಮಿತೆಯ ಉಳಿವಿಗಾಗಿ ಹೋರಾಡಿ ಜಯಿಸಿದ ಉತ್ಸವದ ದಿನವೂ ಆಗಿದೆ.
ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಎರಡನೇ ಬಾಜೀರಾಯನ ಆಡಳಿತ ನಡೆಯುತ್ತಿದ್ದ ದಿನಗಳವು. ಅಸ್ಪೃಶ್ಯತೆ ಎನ್ನುವುದು ಮನುಷ್ಯ ಮನುಷ್ಯರ ನಡುವೆ ಕಂದಕ ಉಂಟುಮಾಡಿದ್ದ ಸಂದರ್ಭವದು. ಅಂಬೇಡ್ಕರ್ ದಾಖಲಿಸಿರುವಂತೆ, ಮರಾಠರ ರಾಜ್ಯದಲ್ಲಿ, ಅದರಲ್ಲೂ ಪೇಶ್ವೆಗಳ ಆಡಳಿತಾವಧಿಯಲ್ಲಿ ಅಸ್ಪೃಶ್ಯರ ನೆರಳು ಹಿಂದೂವೊಬ್ಬನ ಮೇಲೆ ಬಿದ್ದು, ಆತ ಮೈಲಿಗೆಯಾಗುವುದನ್ನು ತಪ್ಪಿಸಲು, ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶವನ್ನೇ ನಿಷೇಧಿಸಲಾಗಿತ್ತು. ಅಸ್ಪೃಶ್ಯರು ತಮ್ಮ ಗುರುತು ಪತ್ತೆಗಾಗಿ ತಮ್ಮ ಕುತ್ತಿಗೆ ಮತ್ತು ಮುಂಗೈಗೆ ಕಪ್ಪು ದಾರವೊಂದನ್ನು ಕಟ್ಟಿಕೊಳ್ಳುವುದು ಆ ದಿನಗಳಲ್ಲಿ ಕಡ್ಡಾಯವಾಗಿತ್ತು. ಇಂತಹ ಪದ್ಧತಿಗಳನ್ನು ತೊಲಗಿಸಬೇಕಾಗಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ರವಿ, ಪ್ರದೀಪ್, ದೇವರಾಜ್, ಸುಖೇಶ್, ಕಾಂತರಾಜ್, ದ್ಯಾವಪ್ಪ, ಶ್ರೀನಿವಾಸ, ಪವನ್, ಶಿವಶಂಕರ್, ಚಂದ್ರು, ಶ್ರೀರಾಮ್, ಶಿವೇಂದ್ರ, ಅನಿಲ್, ಪ್ರಕಾಶ್, ಗಜೇಂದ್ರ, ಮನೋಜ್, ಮಂಜುನಾಥ್, ನರಸಿಂಹಮೂರ್ತಿ, ಕಿರಣ್, ಸತ್ಯಾನಾರಾಯಣಪ್ಪ, ವೆಂಕಟರವಣಪ್ಪ, ಸಿ.ಎಂ.ಮುನಿಯಪ್ಪ, ಮುರಳಿನಾಯಕ್, ಶ್ರೀನಿವಾಶ ನಾಯಕ್, ಮಧು, ಎಲ್.ಎಂ, ನರಸಿಂಹಮೂರ್ತಿ, ಗಗನ್ ಕುಮಾರ್, ಪೃಥ್ವಿ, ಸುಮಂತ್, ಅಜೇಯ್, ಶ್ರೀನಿವಾಸ್, ಅಕ್ಷಯ್ ಹಾಜರಿದ್ದರು.