Home News ಕೌಶಲ್ಯ ಹೊಂದಿದಾಗ ಮಾತ್ರ ಜೀವನವನ್ನು ರೂಪಿಸಿಕೊಳ್ಳಬಹುದು

ಕೌಶಲ್ಯ ಹೊಂದಿದಾಗ ಮಾತ್ರ ಜೀವನವನ್ನು ರೂಪಿಸಿಕೊಳ್ಳಬಹುದು

0

ತೀವ್ರ ಬರಗಾಲಕ್ಕೆ ತುತ್ತಾಗಿ ಹನಿ ನೀರಿಗೂ ಪರದಾಡುವಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವ ಬಯಲು ಸೀಮೆ ಭಾಗದಲ್ಲಿ ನಿರುದ್ಯೋಗಿ ಯುವಕ,ಯುವತಿಯರಿಗೆ ಕೌಶಲ್ಯಾಧಾರಿತ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡುವುದು ಒಳಿತು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯರೆಡ್ಡಿ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ನಲ್ಲಿರುವ ಬಾಲಾಜಿ ಕಲ್ಯಾಣಮಂಟಪದಲ್ಲಿ ಶುಕ್ರವಾರ ಎಸ್.ಎನ್.ಕ್ರಿಯಾ ಟ್ರಸ್ಟ್ ಹಾಗೂ ನಡ್ಜ್ ಫೌಂಡೇಷನ್ ವತಿಯಿಂದ ಯುವಸಬಲೀಕರಣ ಕಾರ್ಯಕ್ರಮದಡಿಯಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ೧೦೦ ದಿನಗಳ ಉಚಿತ ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆ ಪ್ರಕ್ರಿಯೆ ನಡೆಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವಜನರು ಯಾವುದೇ ಉದ್ಯೋಗಗಳನ್ನು ನಡೆಸಬೇಕಾದರೆ ಕೌಶಲ್ಯಗಳು ಪ್ರಾಮುಖ್ಯವಾಗಿ ಬೇಕು. ಮಾನಸಿಕ ಸಿದ್ಧತೆಗಳು, ಸಂವಹನ ಕಲೆ ಅಗತ್ಯವಾಗಿದೆ. ತಮ್ಮಲ್ಲಿರುವ ಕೌಶಲ್ಯಗಳ ಜೊತೆಗೆ ಪ್ರತಿಭೆಗಳನ್ನು ತೋರ್ಪಡಿಸಿಕೊಂಡು ಸಮಾಜದಲ್ಲಿ ಉತ್ತಮವಾದ ಪ್ರಜೆಗಳಾಗಿ ರೂಪುಗೊಳ್ಳಲು ಇಂತಹ ತರಬೇತಿಗಳು ಸಹಕಾರಿಯಾಗಲಿದ್ದು ಯುವಜನರು ಇಂತಹ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಬರಪೀಡಿತವಾದ ನಮ್ಮ ಜಿಲ್ಲೆಯ ಯುವಜನರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಜಿಲ್ಲೆಯಲ್ಲಿ ಮುಂದಿನ ಪೀಳಿಗೆ ಬದುಕಬೇಕಾದರೆ ಪರಿಸರವನ್ನು ಕಾಪಾಡಿಕೊಳ್ಳಬೇಕು, ವಿದ್ಯೆ, ಕೆಲಸ, ಬದುಕಿನ ಜೊತೆಗೆ ನಮ್ಮ ಪರಿಸರವನ್ನು ಉಳಿಸುವ, ಹಸುರನ್ನು ಹೆಚ್ಚಿಸುವ ಸಮಾಜಕ್ಕೆ ಕೊಡುಗೆ ಸಲ್ಲಿಸುವ ಸಂಕಲ್ಪ ಮಾಡಬೇಕು. ಶಾಲಾ ಕಾಲೇಜಿನಲ್ಲಿ ಕಲಿತ ವಿದ್ಯೆಯಿಂದ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಕೆಲಸ ಸಿಗದು. ಅದಕ್ಕಾಗಿ ಕೌಶಲ್ಯ ವೃದ್ಧಿಸಿಕೊಳ್ಳಬೇಕು. ನಮ್ಮ ಭಾಗದ ಯುವಜನರಿಗಾಗಿ ಕೌಶಲ್ಯ ವೃದ್ಧಿಸಿ ಕೆಲಸವನ್ನು ಕೊಡಿಸುವ ಈ ಕಾರ್ಯ ಶ್ಲಾಘನೀಯ ಎಂದರು.
ಎಸ್.ಎನ್.ಕ್ರಿಯಾ ಟ್ರಸ್ಟ್‌ನ ಅಧ್ಯಕ್ಷ ಆಂಜಿನಪ್ಪ(ಪುಟ್ಟು) ಮಾತನಾಡಿ, ಸಮಸ್ಯೆಗಳ ಸರಮಾಲೆಯನ್ನೆ ಮೈಗಂಟಿಸಿಕೊಂಡು ಜೀವನ ಮಾಡುತ್ತಿರುವ ತಾಲ್ಲೂಕಿನ ಜನರ ಜೀವನಕ್ಕೆ ಆಸರೆಯಾಗುವ ಉದ್ದೇಶದಿಂದ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಯುವಸಬಲೀಕರಣ ಕಾರ್ಯಕ್ರಮದಡಿಯಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ೧೦೦ ದಿನಗಳ ಉಚಿತ ವಸತಿ ರಹಿತ ಕೌಶಲ್ಯಾಧಾರಿತ ತರಬೇತಿಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ. ಈ ತರಬೇತಿ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಜೀವನದಲ್ಲಿ ಉತ್ತಮ ಸಾಧನೆಗಳನ್ನು ಮಾಡಿಕೊಳ್ಳುವಂತೆ ಯುವಕರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಡ್ಜ್ ಫೌಂಡೇಷನ್ ವತಿಯಿಂದ ತರಬೇತಿ ಪಡೆಯುತ್ತಿರುವ ಯುವಕ ಯುವತಿಯರಿಂದ ತರಬೇತಿಯ ಅವಧಿಯಲ್ಲಿ ತಾವು ಕಲಿಯುತ್ತಿರುವ ಕಲಿಕೆಯ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ನೀಡಲಾಗಿತ್ತು. ತರಬೇತಿಯ ವಿಧಾನಗಳ ಬಗ್ಗೆ ಪರದೆಯ ಮೇಲೆ ತೋರಿಸಿ ವಿವರಿಸಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ಎಸ್.ಎಂ. ರವಿಪ್ರಕಾಶ್, ಆನೂರು ದೇವರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯ ಕೋಟಹಳ್ಳಿ ದೇವರಾಜ್‌, ಅಶ್ವತ್ಥನಾರಾಯಣ್‌, ಮುನೇಗೌಡ, ದೇವರಾಜ್‌, ಅನುಸಾಬ್‌, ವಿಶ್ವನಾಥ್‌ ಮತ್ತಿತರರು ಹಾಜರಿದ್ದರು.