Home News ಗಣಿತ ಕಲಿಕೆಯನ್ನು ಸರಳೀಕರಿಸಿ ಆಸಕ್ತಿದಾಯಕವಾಗಿಸಬೇಕು

ಗಣಿತ ಕಲಿಕೆಯನ್ನು ಸರಳೀಕರಿಸಿ ಆಸಕ್ತಿದಾಯಕವಾಗಿಸಬೇಕು

0

ಗ್ರಾಮೀಣ ಭಾಗದ ಮಕ್ಕಳಿಗೆ ಗಣಿತವು ಕಲಿಯಲು ಕಷ್ಟದ ವಿಷಯವಾಗಿದ್ದು, ಗಣಿತ ಕಲಿಕೆಯನ್ನು ಸರಳೀಕರಿಸಿ ಮತ್ತಷ್ಟು ಆಸಕ್ತಿದಾಯಕವಾಗಿಸಬೇಕು ಎಂದು ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಘುನಾಥ್ ತಿಳಿಸಿದರು.
ತಾಲ್ಲೂಕಿನ ಜೆ.ವೆಂಕಟಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿ, ಅಕ್ಷರಫೌಂಡೇಶನ್, ಸಾರ್ವಜನಿಕ ಶಿಕ್ಷಣ ಇಲಾಖೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಪಂಚಾಯಿತಿ ಮಟ್ಟದ ಮಕ್ಕಳ ಗಣಿತ ಕಲಿಕಾ ಆಂದೋಲನ ಗಣಿತ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಮಗುವಿಗೆ ಅಗತ್ಯವಾದ ಶಿಕ್ಷಣವನ್ನು ಕೊಡುವಲ್ಲಿ ಪಂಚಾಯಿತಿ, ಶಿಕ್ಷಕ, ಪೋಷಕರ ಕರ್ತವ್ಯವಿದೆ. ಗಣಿತವನ್ನು ಸುಲಭವಾಗಿ ಬೋಧಿಸುವ, ಕಲಿಸುವ ವಿಧಾನಗಳನ್ನು ಆರಿಸಿಕೊಂಡು ಗಣಿತಕಲಿಕೆಯನ್ನು ಸರಳೀಕರಿಸಬೇಕಿದೆ ಎಂದು ಅವರು ತಿಳಿಸಿದರು.
ಎಸ್ಡಿಎಂಸಿ ಮಾಜಿ ಅಧ್ಯಕ್ಷ ಪಾಪರಾಜು ಮಾತನಾಡಿ, ಹಾಜರಾತಿಯಲ್ಲಿ ನಿರಂತರತೆಯ ಅಗತ್ಯವಿದೆ. ಪ್ರತಿಮಗುವು ಕಡ್ಡಾಯವಾಗಿ ಶಾಲೆಯಲ್ಲಿದ್ದು, ಉತ್ತಮವಾಗಿ ಕಲಿಯುತ್ತಿರಬೇಕು, ಶೈಕ್ಷಣಿಕ ಯೋಜನೆಗಳ ಅನುಷ್ಟಾನದಲ್ಲಿ ಸರ್ಕಾರದ ನಿಯಮಗಳಲ್ಲಿ ಅಮೂಲಾಗ್ರ ಬದಲಾವಣೆಗಳ ಅಗತ್ಯವಿದೆ ಎಂದರು.
ಅಕ್ಷರಫೌಂಡೇಶನ್ನ ಜಿಲ್ಲಾಸಂಯೋಜಕ ಸಿದ್ದರಾಮ್ ಎನ್ ಕೋಟೆ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇಂಗ್ಲೀಷ್, ಗಣಿತದ ವಿಷಯಗಳು ಕ್ಲಿಷ್ಟವಾಗಿದ್ದು, ನಗರಪ್ರದೇಶದ ಮಕ್ಕಳಿಗೆ ಸರಿಸಮಾನವಾಗಿ ಸ್ಪರ್ಧೆಯೊಡ್ಡಲು ಮಕ್ಕಳನ್ನು ಸಿದ್ಧಗೊಳಿಸಬೇಕಿದೆ ಎಂದು ಹೇಳಿದರು.
ಜಂಗಮಕೋಟೆ ಕ್ಲಸ್ಟರ್ನ ಸಂಪನ್ಮೂಲವ್ಯಕ್ತಿ ಆರ್.ಸುಂದರಾಚಾರಿ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಹಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಮುಖ್ಯಶಿಕ್ಷಕಿ ಗೀತಾ, ನಿವೃತ್ತಶಿಕ್ಷಕಿ ಅಶ್ವತ್ಥಮ್ಮ, ಅಕ್ಷರ ಫೌಂಡೇಶನ್ನ ತಾಲ್ಲೂಕು ಸಂಯೋಜಕ ಕೆ.ವಿ. ಮಂಜುನಾಥ್, ಪಂಚಾಯಿತಿ ವ್ಯಾಪ್ತಿಯ ವಿವಿಧ ಶಾಲೆಗಳ ಬೋಧಕವರ್ಗದವರು ಹಾಜರಿದ್ದರು.
೪ ರಿಂದ ೬ ನೇ ತರಗತಿವರೆಗಿನ ಪಂಚಾಯಿತಿ ವ್ಯಾಪ್ತಿಯ ಸುಗಟೂರು, ಜೆ.ವೆಂಕಟಾಪುರ, ಮಿತ್ತನಹಳ್ಳಿ, ಬಳುವನಹಳ್ಳಿ, ಬೈರಸಂದ್ರ ಶಾಲೆಗಳ ಮಕ್ಕಳಿಗಾಗಿ ಪರೀಕ್ಷೆ ನಡೆಸಿ ಉತ್ತಮವಾಗಿ ಪ್ರತಿಭೆ ತೋರಿದವರಿಗೆ ಪ್ರಶಸ್ತಿಪತ್ರ, ನಗದುಬಹುಮಾನ ವಿತರಿಸಲಾಯಿತು. ಬಹುಮಾನ ವಿಜೇತ ಮಕ್ಕಳಿಗೆ ಸಸಿಗಳನ್ನು ವಿತರಿಸಲಾಯಿತು.
ಬಹುಮಾನ ವಿಜೇತರು: ೪ ನೇ ತರಗತಿ ವಿಭಾಗದಲ್ಲಿ ಜೆ.ವೆಂಕಟಾಪುರ ಶಾಲೆಯ ಆರ್.ಪುನೀತ್, ವಿ.ಚೈತ್ರಾ, ಎಂ.ಮಾಲಾ,, ೫ ನೇ ತರಗತಿ ವಿಭಾಗದಲ್ಲಿ ಬೈರಸಂದ್ರ ಶಾಲೆಯ ಡಿ.ಸ್ಫೂರ್ತಿ, ಸುಗಟೂರು ಸರ್ಕಾರಿ ಶಾಲೆಯ ಎಸ್.ಎನ್.ಚೇತನ್, ಎಸ್.ಎಸ್, ಅನುಷಾ, ಎಸ್.ಎಸ್.ಕಾವ್ಯಾ, ಮಿತ್ತನಹಳ್ಳಿ ಶಾಲೆಯ ಕಿರಣ್ಕುಮಾರ್, ೬ ನೇ ತರಗತಿ ವಿಭಾಗದಲ್ಲಿ ಜೆ.ವೆಂಕಟಾಪುರ ಶಾಲೆಯ ಎಲ್.ಚನ್ನಕೇಶವ, ಸುಗಟೂರು ಶಾಲೆಯ ಎಸ್.ಜೆ.ನಿಖಿಲ್, ಬೈರಸಂದ್ರಶಾಲೆಯ ಬಿ.ಎಂ.ಕಿರಣ್ಕುಮಾರ್ ಬಹುಮಾನಗಳನ್ನು ಪಡೆದರು.