Home News ಗಾಂಧೀಜಿಯವರ ಬದುಕು ನಮಗೆ ಪ್ರೇರಣೆಯಾಗಲಿ – ಗಾಂಧೀವಾದಿ ವೇಮಗಲ್ ಸೋಮಶೇಖರ್

ಗಾಂಧೀಜಿಯವರ ಬದುಕು ನಮಗೆ ಪ್ರೇರಣೆಯಾಗಲಿ – ಗಾಂಧೀವಾದಿ ವೇಮಗಲ್ ಸೋಮಶೇಖರ್

0

ನಗರ ಶಾಖಾ ಗ್ರಂಥಾಲಯದಲ್ಲಿ ಭಾನುವಾರ ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾರಸ್ವತ ಪರಿಚಾರಿಕೆ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ಇವರ ಸಹಯೋಗದೊಂದಿಗೆ ನಡೆದ “ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ” 23 ನೇ ತಿಂಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿರಿಯ ಗಾಂಧೀವಾದಿ ಹಾಗೂ ಸಾಹಿತಿ ವೇಮಗಲ್ ಸೋಮಶೇಖರ್ ಮಾತನಾಡಿದರು.
ಗಾಂಧೀಜಿ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ನಾಯಕರು. ಗಾಂಧೀಜಿಯವರ ಸಮಯಪ್ರಜ್ಞೆ, ಸರಳ ಜೀವನ, ಸೇವಾ ಮನೋಭಾವ, ಸ್ವಚ್ಛತೆ, ನುಡಿದಂತೆ ನಡೆದ ಅವರ ಬದುಕು ನಮಗೆಲ್ಲಾ ಪ್ರೇರಣೆಯಾಗಬೇಕು ಎಂದು ಅವರು ತಿಳಿಸಿದರು.
ಗಾಂಧೀಜಿ ಮತ್ತು ಕಸ್ತೂರಬಾ ಇಬ್ಬರದ್ದೂ ೧೫೦ ನೇ ಜನ್ಮವರ್ಷಾಚರಣೆಯ ಸಂದರ್ಭವಿದು. ಗಾಂಧೀಜಿಯವರದ್ದು ಮೇರು ವ್ಯಕ್ತಿತ್ವ. ಅವರನ್ನು ಕಂಡವರು, ಓದಿದವರು ಅವರಿಂದ ಪ್ರಭಾವಿತರಾಗಿದ್ದಾರೆ. ೧೯೩೬ ರಲ್ಲಿ ನಂದಿಬೆಟ್ಟಕ್ಕೆ ಬಂದಿದ್ದ ಗಾಂಧೀಜಿಯವರು ನಂತರ ಅಲ್ಲಿಂದ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ ಮಾರ್ಗವಾಗಿ ಕೋಲಾರ ಮತ್ತು ಬಂಗಾರಪೇಟೆಗೆ ಹೋಗಿದ್ದರು. ಶಿಡ್ಲಘಟ್ಟದಲ್ಲಿ ಆಗಿನ ಪುರಸಭಾ ಉಪಾಧ್ಯಕ್ಷರಾಗಿದ್ದ ಬಿ.ವಿರೂಪಾಕ್ಷಪ್ಪನವರು ದೇಣಿಗೆ ನೀಡಿ ಅವರಿಂದ ಪ್ರೇರಿತರಾಗಿ ಪ್ರೌಢಶಾಲೆಯನ್ನು ಕಟ್ಟಿದರು. ಇದರಿಂದ ಸಾಕಷ್ಟು ಮಂದಿಗೆ ಸಹಾಯವಾಯಿತು ಎಂದು ಹೇಳಿದರು.
“ಸ್ವಚ್ಛತೆಯೇ ಭಗವಂತ” ಎಂದು ನಂಬಿದವರು ಗಾಂಧೀಜಿ. ಅಡುಗೆ ಮನೆಯಷ್ಟೇ ಶುಚಿಯಾಗಿ ನಮ್ಮ ಶೌಚಾಲಯವನ್ನು ಇಟ್ಟುಕೊಳ್ಳಬೇಕೆಂದು ಹೇಳುವುದಲ್ಲದೆ, ತಾವೇ ಶೌಚಾಲಯವನ್ನು ಶುಚಿಮಾಡುತ್ತಿದ್ದರು. ಅವರ ಆಶ್ರಮದಲ್ಲಿ ಆಶ್ರಿತರಾಗಿ ಬಂದ ಕುಷ್ಠರೋಗಿಗಳಿಗೆ ಅವರೇ ಸೇವೆ ಮಾಡುತ್ತಿದ್ದರು. ಸರಳವಾಗಿ ಮದುವೆ ಮಾಡಿಸುತ್ತಿದ್ದರು. ಚಪ್ಪಲಿ ಹಾಕದೇ ಓಡಾಡುತ್ತಿದ್ದರು. ನಮ್ಮ ರೈತರನ್ನು ಅವರು ಗಮನಿಸಿ, ರೈತರಂತೆಯೇ ಕಚ್ಚೆಯೆಂಬ ತುಂಡುಡುಗೆ ಧರಿಸಲು ತೀರ್ಮಾನಿಸಿ ಅದರಂತೆಯೇ ಜೀವನದುದ್ದಕ್ಕೂ ಬದುಕಿದರು. ಇಂಗ್ಲೆಂಡಿಗೆ ಹೋದಾಗಲೂ ತಮ್ಮ ತುಂಡುಡುಗೆಯಲ್ಲಿಯೇ ಇದ್ದರು. ಮೇಕೆಯ ಹಾಲು ಕುಡಿಯುತ್ತಿದ್ದರು ಎಂದರು.
ನಂದಿಬೆಟ್ಟದಲ್ಲಿ ತಂಗಿದ್ದಾಗ ತಮಗೆ ಕ್ಷೌರ ಮಾಡುತ್ತಿದ್ದ ಸುಲ್ತಾನಪೇಟೆಯ ವೆಂಕಟಪ್ಪನ ಭುಜದ ಮೇಲೆ ಕೈಹಾಕಿ ಕಷ್ಟಸುಖ ವಿಚಾರಿಸುತ್ತಿದ್ದರು. ಆತನ ಮಗಳಿಂದ ಪಂಡರಿಭಜನೆ ಹಾಡಿಸಿ ಕಸ್ತೂರಬಾ ಅವರಿಂದ ರವಿಕೆ ಬಟ್ಟೆ ಕೊಟ್ಟು ಆಶೀರ್ವದಿಸಿದ್ದರು. ನಂದಿಬೆಟ್ಟಕ್ಕೆ ಎರಡನೇ ಬಾರಿ ಬಂದಾಗ ಕುರುವತ್ತಿ ಕಡೆಯಿಂದ ಕಾಲುದಾರಿಯಲ್ಲಿ ನಡೆದು ಗಾಂಧೀಜಿ ಬೆಟ್ಟ ಹತ್ತಿದ್ದರು. ಗೌರಿಬಿದನೂರಿನ ಎಚ್.ನರಸಿಂಹಯ್ಯನವರಿಗೆ ಬಾಲ್ಯದಲ್ಲಿಯೇ ಗಾಂಧೀಜಿ ಪ್ರೇರಣೆ ನೀಡಿದ್ದರು ಎಂದು ಹೇಳಿದರು.
ಪುಸ್ತಕಗಳು ಜ್ಞಾನಾರ್ಜನೆಯ ಸಾಧನಗಳು. ಪುಸ್ತಕ ಓದುವ ಹವ್ಯಾಸವುಳ್ಳವನು ಎಲ್ಲಿ ಹೋದರೂ ಸಂತೋಷವಾಗಿರಬಲ್ಲ. ಮಕ್ಕಳಿಗೆ ಓದುವ ಹವ್ಯಾಸವನ್ನು ರೂಢಿಸಿ ಎಂದು ನುಡಿದರು.
ನಗರಸಭಾ ಸದಸ್ಯ ಎಂ.ಮುನಿರಾಜು ಮಾತನಾಡಿ, ಗಾಂಧೀಜಿಯವರನ್ನು ವಿಶ್ವವೇ ಕೊಂಡಾಡುತ್ತಿದೆ. ಅವರ ೧೫೦ ನೇ ಜನ್ಮರ್ಷಾಚರಣೆಯ ಸಂದರ್ಭದಲ್ಲಿ ಗ್ರಂಥಾಲಯದಲ್ಲಿ ಗಾಂಧೀಜಿಯವರ ಕುರಿತಾದ ಕಾರ್ಯಕ್ರಮ ಆಯೋಜಿಸಿರುವುದು ಸೂಕ್ತವಾಗಿದೆ. ಮಹಾತ್ಮರ ಬದುಕನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು. ಅದರಿಂದ ನಮ್ಮ ಆಲೋಚನೆ ಖಂಡಿತ ಬದಲಾಗುವುದು ಎಂದರು.
ಕನ್ನಡ ಸಾರಸ್ವತ ಪರಿಚಾರಿಕೆ (ಕಸಾಪ) ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಕೋಲಾರ ಜಿಲ್ಲೆ ವೇಮಗಲ್ ಮೂಲದವರಾದ ಇವರು ಉಪಾದ್ಯಾಯ ವೃತ್ತಿಯನ್ನು ಆರಂಭಿಸಿ,ಭಾರತೀಯ ದೂರವಾಣಿ ಇಲಾಖೆಯಲ್ಲಿ ಟೆಕ್ನಿಕಲ್ ಅಸಿಸ್ಟೆಂಟ್ ಆಗಿ ನಿವೃತ್ತಿ ಹೊಂದಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿಯ ಕಾರ್ಯದರ್ಶಿಯಾಗಿ, ಹವ್ಯಾಸಿ ಲೇಖಕರಾಗಿ ಬೆಂಗಳೂರು ಹಾಗೂ ಕರ್ನಾಟಕದ ಇತಿಹಾಸದ ಬಗ್ಗೆ ಅನೇಕ ಸಂಶೋಧನಾತ್ಮಕ ಲೇಖನಗಳನ್ನು ಬರೆದಿದ್ದಾರೆ. ಬೆಂಗಳೂರಿನಲ್ಲಿ ಮಹಾತ್ಮ ಗಾಂಧಿ ಮತ್ತು ಕರ್ನಾಟಕದಲ್ಲಿ ರವೀಂದ್ರನಾಥ ಠಾಗೋರ್ ಸಂಬಂಧಿಸಿದಂತೆ ಹೆಚ್ಚಿನ ಪರಿಣತಿ ಹೊಂದಿದ್ದಾರೆ. ಇವರು 11 ಪುಸ್ತಕಗಳನ್ನು ಬರೆದಿದ್ದು, ಹೆಚ್ಚಿನವು ಗಾಂಧೀಜಿ ಕುರಿತದ್ದಾಗಿವೆ ಎಂದು ಸಾಹಿತಿಗಳ ಪರಿಚಯ ಮಾಡಿಕೊಟ್ಟರು.
ಗಾಂಧೀವಾದಿ ಹಾಗೂ ಸಾಹಿತಿ ವೇಮಗಲ್ ಸೋಮಶೇಖರ್ ಅವರು ತಮ್ಮ ಕೆಲವು ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು. ಕನ್ನಡ ಸಾರಸ್ವತ ಪರಿಚಾರಿಕೆ (ಕಸಾಪ) ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಗ್ರಂಥಪಾಲಕಿ ರಾಮಲೀಲಾ, ನಿವೃತ್ತ ಶಿಕ್ಷಕ ಸುಂದರನ್, ಚಲನಚಿತ್ರ ನಟ ಸಿ.ಎನ್.ಮುನಿರಾಜು, ವೃಷಬೇಂದ್ರಪ್ಪ, ಮಧುಸೂದನ್, ಗೋಪಾಲಕೃಷ್ಣ, ಲಕ್ಷ್ಮೀಕಾಂತ್, ಲಕ್ಷ್ಮೀನಾರಾಯಣ, ಮಕ್ಸೂದ್ ಹಾಜರಿದ್ದರು.

error: Content is protected !!