Home News ಗ್ರಾಮಸ್ಥರ ಶ್ರಮಕ್ಕೆ ಸರ್ಕಾರದ ನೆರವು ಯಾಚನೆ

ಗ್ರಾಮಸ್ಥರ ಶ್ರಮಕ್ಕೆ ಸರ್ಕಾರದ ನೆರವು ಯಾಚನೆ

0

ಗ್ರಾಮದ ಜೀವನಾಡಿ ಕೆರೆಯನ್ನು ಉಳಿಸುವ ಸಲುವಾಗಿ ಸ್ವಂತ ಹಣದಲ್ಲಿ ಗ್ರಾಮಸ್ಥರು ರಾಜಕಾಲುವೆಯನ್ನು ದುರಸ್ಥಿಗೊಳಿಸಲು ಅನುವಾಗಿರುವುದು ರಾಜ್ಯಕ್ಕೇ ಮಾದರಿಯಾಗಿದೆ. ರಾಜಕಾಲುವೆಯನ್ನು ಶಾಶ್ವತವಾಗಿ ಕಲ್ಲುಕಟ್ಟಡದಲ್ಲಿ ನಿರ್ಮಿಸಲು ಉದ್ಯೋಗ ಖಾತ್ರಿ ಯೋಜನೆಯನ್ನು ಬಳಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ತಾಲ್ಲೂಕಿನ ಬೆಳ್ಳೂಟಿ ಗ್ರಾಮದಲ್ಲಿ ಶನಿವಾರ ಪೋಡಿ ಮುಕ್ತ ಗ್ರಾಮ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಗ್ರಾಮಸ್ಥರು ನಿರ್ಮಿಸಲು ಪ್ರಾರಂಭಿಸಿರುವ ರಾಜಕಾಲುವೆಯನ್ನು ಪರಿವೀಕ್ಷಿಸಿ ಅವರು ಮಾತನಾಡಿದರು.
ಎಲ್ಲೆಡೆ ಸರ್ಕಾರ ಅಥವಾ ಆಳುವ ಜನಪ್ರತಿನಿಧಿಗಳು ಈ ಕೆಲಸ ಮಾಡಬೇಕೆಂದು ಜನರು ಆಶಿಸುತ್ತಾರೆ. ಆದರೆ ಈ ಗ್ರಾಮದಲ್ಲಿ ಯಾರ ನೆರವನ್ನೂ ಆಶಿಸದೆ ತಮ್ಮ ಖರ್ಚಿನಲ್ಲೇ ಸುಮಾರು 30 ಲಕ್ಷ ರೂಗಳಷ್ಟು ಖರ್ಚು ಮಾಡಿ ರಾಜಕಾಲುವೆ ತೆರವು ಹಾಗೂ ದುರಸ್ತಿ ಕಾರ್ಯ ನಡೆಸಿರುವುದು ಅನುಕರಣೀಯ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ‘ಉತ್ತಮ ಭವಿಷ್ಯಕ್ಕಾಗಿ, ನಮ್ಮೂರ ಉಳಿವಿಗಾಗಿ, ರೈತರ ಅಭಿವೃದ್ಧಿಗಾಗಿ ಗ್ರಾಮಕ್ಕೆ ನಾಲೆ ಮಾಡಿಸಿ’ ಎಂಬ ಬರಹಗಳುಳ್ಳ ಭಿತ್ತಿ ಚಿತ್ರಗಳನ್ನು ಜಿಲ್ಲಾಧಿಕಾರಿಗಳಿಗೆ ಪ್ರದರ್ಶಿಸಿ ಗಮನ ಸೆಳೆದರು.
ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ಗ್ರಾಮದ ಕೆರೆಗೆ ನೀರು ಹರಿಯುವ ಕಾಲುವೆಯ ಕಲ್ಲು ಕಟ್ಟಡ ನಿರ್ಮಾಣಕ್ಕೆ 1.6 ಕೋಟಿ ರೂಗಳು ಅಂದಾಜು ವೆಚ್ಚವಾಗಲಿದೆ. ಅನುದಾನವನ್ನು ಬಿಡುಗಡೆ ಮಾಡಿ ಕಾಲುವೆ ನಿರ್ಮಾಣ ಶೀಘ್ರವಾಗಿ ನಡೆಯಲು ಸಹಕರಿಸಬೇಕೆಂದು ಕೋರಿದರು.
ಬೆಳ್ಳೂಟಿ ಕೆರೆಯು 360 ಎಕರೆಯಷ್ಟಿದ್ದು, ಕೆರೆ ತುಂಬಿದಲ್ಲಿ ಸುತ್ತಮುತ್ತಲಿನ 3000 ಎಕರೆ ಜಮೀನುಗಳಲ್ಲಿ ಅಂತರ್ಜಲ ಹೆಚ್ಚಿ ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ಗ್ರಾಮಸ್ಥರು ಒಗ್ಗೂಡಿ ರಾಜಕಾಲುವೆಯಲ್ಲಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವುಗೊಳಿಸಿದೆವು. ನಂತರ ಬಿದ್ದ ಮಳೆಗೆ ಕಾಲುವೆ ತೆರವುಗೊಳಿಸಿದ ಕಾರಣ ನೀರು ಹರಿದು ಬಂದು ಶೇಕಡಾ 30 ರಷ್ಟು ಕೆರೆ ತುಂಬಿದೆ. ಕಾಲುವೆಯ ನಿರ್ಮಾಣಕ್ಕೆ ಹಲವು ಗ್ರಾಮಸ್ಥರು ತಮ್ಮ ಜಮೀನುಗಳಲ್ಲಿನ ಸ್ಥಳವನ್ನು ಸಹ ಕಾಲುವೆ ನಿರ್ಮಾಣಕ್ಕೆ ಬಿಟ್ಟುಕೊಟ್ಟರು. ಈಗಾಗಲೇ ಸುಮಾರು 250 ಮೀಟರಿನಷ್ಟು ಕಲ್ಲುಕಟ್ಟಡದ ರಾಜಕಾಲುವೆಯ ಕಾಮಗಾರಿಯನ್ನು ಸ್ವಂತ ಹಣ ಖರ್ಚು ಮಾಡಿ ಗ್ರಾಮಸ್ಥರು ಮಾಡಿದ್ದೇವೆ. ಸರ್ಕಾರದ ಮಟ್ಟದಲ್ಲಿ ಯಾವುದೇ ಅನುದಾನದಿಂದ ಇನ್ನುಳಿದ ರಾಜಕಾಲುವೆಯ ನಿರ್ಮಾಣ ಮಾಡಿ ಕೆರೆಯನ್ನು ಸಂರಕ್ಷಿಸಬೇಕೆಂದು ಬೇಡಿಕೆಯನ್ನಿಟ್ಟರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷ ಎಸ್.ವೆಂಕಟೇಶ್, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಮಾಜಿ ಸದಸ್ಯ ಆರ್.ಶ್ರೀನಿವಾಸ್, ಗ್ರೇಡ್ 2 ತಹಶೀಲ್ದಾರ್ ವಾಸುದೇವಮೂರ್ತಿ, ಶಿರಸ್ತೆದಾರ್ ರಂಗನಾಥ್, ರಾಜಸ್ವ ನಿರೀಕ್ಷಕ ಸುಬ್ರಮಣಿ, ಸಂತೋಷ್, ರಮೇಶ್, ವಿಜಯ್ಕುಮಾರ್, ಬಿ.ಎನ್.ಸತೀಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.