Home News ಗ್ರಾಮ ಪಂಚಾಯತಿ ಪಿ.ಡಿ.ಓ. ವಿರುದ್ಧ ಧರಣಿ

ಗ್ರಾಮ ಪಂಚಾಯತಿ ಪಿ.ಡಿ.ಓ. ವಿರುದ್ಧ ಧರಣಿ

0

ದಲಿತರು ಎಂಬ ಕಾರಣದಿಂದ ನ್ಯಾಯಾಲಯದ ಆದೇಶವನ್ನು ಲೆಕ್ಕಿಸದೆ ಮನೆಯ ಖಾತೆಯನ್ನು ಮಾಡಿಕೊಡದೆ ಇರುವ ಗ್ರಾಮ ಪಂಚಾಯತಿ ಪಿ.ಡಿ.ಓ. ಅವರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿ ಧರಣಿ ನಡೆಸಿದ ಘಟನೆ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯತಿ ವ್ಯಾಪಿಗೆ ಬರುವ ತಲದುಮ್ಮನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ನಿವೃತ್ತ ಶಿಕ್ಷಕ ವೆಂಕಟಪ್ಪ ಅವರಿಗೆ ಸೇರಿದ ಮನೆಯ ಜಾಗಕ್ಕೆ ೧೯೮೦ ರಲ್ಲಿ ನಿವೇಶನದ ಹಕ್ಕು ಪತ್ರವನ್ನು ಪಡೆದಿದ್ದು ಅಂದಿನಿಂದಲೂ ವೆಂಕಟಪ್ಪನವರು ಗ್ರಾಮ ಪಂಚಾಯತಿಗೆ ಕಂದಾಯ ಪಾವತಿವನ್ನು ಮಾಡಿ, ಜಾಗಕ್ಕೆ ಸಂಬಂದಿಸಿದ ದಾಖಲೆಗಳನ್ನು ಪಡೆದಿರುತ್ತಾರೆ.
ಕಳೆದ ೨ ವರ್ಷಗಳ ಹಿಂದೆ ಪಂಚಾಯತಿ ವಿಂಗಡನೆ ಸಂದರ್ಭದಲ್ಲಿ ಈ ಗ್ರಾಮವು ದೇವರಮಳ್ಳೂರು ಪಂಚಾಯತಿ ವ್ಯಾಪ್ತಿಗೆ ಬಂದಿದ್ದು, ಮನೆಯ ಜಾಗದ ಖಾತೆಯನ್ನು ಬದಲಾವಣೆ ಮಾಡಿಕೊಡಬೇಕೆಂದು ಅರ್ಜಿಯೊಂದಿಗೆ ಸಂಬಂಧಪಟ್ಟ ದಾಖಲೆಗಳನ್ನು ನೀಡಿದ್ದರೂ ಸಹ ಗ್ರಾಮ ಪಂಚಾಯತಿ ಪಿ.ಡಿ.ಓ ವೆಂಕಟಪ್ಪನವರಿಗೆ ಖಾತೆಯನ್ನು ಮಾಡಿಕೊಟ್ಟಿಲ್ಲ, ಜಾಗದ ವಿಚಾರವು ನ್ಯಾಯಾಲಯದ ಮೇಟ್ಟಿಲೇರಿದಾಗ ನ್ಯಾಯಾಲಯ ವೆಂಕಟಪ್ಪನವರ ಪರವಾಗಿ ತೀರ್ಪು ನೀಡಿದ್ದರೂ ಈ ನ್ಯಾಯಾಲಯದ ಆದೇಶವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ, ಈ ಬಗ್ಗೆ ವಿಚಾರಿಸಿದರೆ ನಿಮ್ಮ ಜಾಗವು ಸರ್ಕಾರಿ ಜಾಗವಾಗಿದೆ, ಅಲ್ಲಿ ಅಂಗನವಾಡಿ ಕೇಂದ್ರವನ್ನು ನಿರ್ಮಿಸುತ್ತೇವೆ. ಆದ್ದರಿಂದ ಖಾತೆಯನ್ನು ಮಾಡಿಕೊಡಲು ಆಗುವುದಿಲ್ಲ ಎಂದು ಪಿ.ಡಿ.ಓ ಹೇಳುತ್ತಾರೆ ಎಂದು ವೆಂಕಟಪ್ಪ ತಮ್ಮ ಅಳಲನ್ನು ತೋಡಿಕೊಂಡರು.
ಈ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಅರ್ಜಿಗಳನ್ನೂ ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲವಾದ್ದರಿಂದ ಆಮ್ ಆದ್ಮಿ ಪಕ್ಷ ಸಹಯೋಗದಲ್ಲಿ ಪಂಚಾಯತಿ ಮುಂದೆ ಧರಣಿಯನ್ನು ಹಮ್ಮಿಕೊಂಡಿದ್ದು ನ್ಯಾಯ ಸಿಗುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ನರಸಿಂಹಪ್ಪ, ವಿಜಯ್ಕುಮಾರ್, ಸರಸ್ವತಮ್ಮ, ಪೂಜಮ್ಮ, ಅಭಿಷೇಕ್, ಪವನ್, ಪಾರ್ವತಮ್ಮ ಮತ್ತಿತರರು ಹಾಜರಿದ್ದರು.