Home News ತಹಶೀಲ್ದಾರ್ ಅವರಿಂದ ಫೋನ್ ಇನ್ ಕಾರ್ಯಕ್ರಮ

ತಹಶೀಲ್ದಾರ್ ಅವರಿಂದ ಫೋನ್ ಇನ್ ಕಾರ್ಯಕ್ರಮ

0

ನಗರದ ತಾಲ್ಲೂಕು ಕಚೇರಿಯಲ್ಲಿ ಶನಿವಾರ ನಡೆದ ತಹಶೀಲ್ದಾರ್ ಎಂ.ದಯಾನಂದ್ ಅವರೊಂದಿಗಿನ ಫೋನ್ ಇನ್ ಕಾರ್ಯಕ್ರಮ ಕಂದಾಯ ಇಲಾಖೆ ಹಾಗೂ ನಗರಸಭೆಗೆ ಸಂಬಂದಿಸಿದಂತೆ ನಾಗರಿಕರು ನೇರ ಅಹವಾಲು ಸಲ್ಲಿಸಲು ವೇದಿಕೆಯಾಗಿತ್ತು.
ಇದೇ ಮೊಟ್ಟ ಮೊದಲ ಭಾರಿಗೆ ಶನಿವಾರ ಬೆಳಗ್ಗೆ ೧೦ ರಿಂದ ೧೧ ರವರೆಗಿನ ಒಂದು ಗಂಟೆಯ ಸಮಯದಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸುಮಾರು ೧೬ ಕರೆಗಳನ್ನು ಸ್ವೀಕರಿಸಿದ ತಹಶೀಲ್ದಾರ್ ಸಮಾಧಾನದಿಂದ ಸಾರ್ವಜನಿಕರ ಸಮಸ್ಯೆ ಆಲಿಸಿ, ಇತ್ಯರ್ಥಕ್ಕೆ ಸೂಕ್ತ ಪರಿಹಾರ ಸಲಹೆಗಳನ್ನು ನೀಡಿದರು.
ಸಕಾಲ ಶಾಖೆಯಲ್ಲಿ ಅರ್ಜಿ ಸಲ್ಲಿಸಲು ಪ್ರತ್ಯೇಕ ಕೌಂಟರ್ ಮಾಡುವುದು, ವಿಕಲಚೇತನರಿಗೆ ಪಿಂಚಣಿ ವಿತರಿಸುವಲ್ಲಿ ವಿಳಂಬವಾಗುತ್ತಿರುವುದು, ಪಿಂಚಣಿ ವಿತರಣೆಯಲ್ಲಿ ಪೋಸ್ಟ್ ಮ್ಯಾನ್‌ಗಳು ಲಂಚ ಪಡೆಯುವದು, ವಿಕಲಚೇತನರು ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಪ್ರತ್ಯೇಕ ಕೌಂಟರ್ ಸ್ಥಾಪಿಸಬೇಕು. ಕ್ರಯಪತ್ರದಂತೆ ಖಾತೆ ಮಾಡುವುದು, ಇನಾಂತಿ ಜಮೀನಿನ ಖಾತೆ ಮಾಡುವುದು, ಅಬ್ಲೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂದಾಯ ಅದಾಲತ್ ಹಮ್ಮಿಕೊಳ್ಳುವುದು ಹಾಗೂ ನಗರಸಭೆಗೆ ಸಂಬಂದಿಸಿದಂತೆ ನಗರಸಭೆ ಪೌರಾಯುಕ್ತರ ಕಾರ್ಯವೈಖರಿ ಹಾಗೂ ನಗರದಲ್ಲಿರುವ ಕುಡಿಯುವ ನೀರಿನ ಸಮಸ್ಯೆಗಳು ತಹಶೀಲ್ದಾರ್‌ರ ಮುಂದೆ ದೂರವಾಣಿ ಮೂಲಕ ಅನಾವರಣಗೊಂಡವು.
ಕಚೇರಿಯ ಸಕಾಲ ಶಾಖೆಯಲ್ಲಿ ವಿಕಲಚೇತನರು ಅರ್ಜಿ ಸಲ್ಲಿಸಲು ಪರದಾಡುವ ಸ್ಥಿತಿಯಿದೆ ಎಂಬ ದೂರೊಂದನ್ನು ದೂರವಾಣಿ ಮೂಲಕ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್‌ರು ಕಚೇರಿಗೆ ವಿವಿಧ ಕೆಲಸಗಳ ನಿಮಿತ್ತ ಬರುವ ವೃದ್ದರೂ ಹಾಗೂ ವಿಕಲಚೇತನರಿಗೆ ಪ್ರಥಮ ಪ್ರಾಶಸ್ತ್ಯ ನೀಡುವಂತೆ ಸ್ಥಳದಲ್ಲಿದ್ದ ಸಿಬ್ಬಂದಿಗೆ ಸೂಚಿಸಿದರು.
ಈ ಬಗ್ಗೆ ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿ, ಜನಸ್ನೇಹಿ ಆಡಳಿತ ನೀಡಬೇಕು ಎಂಬ ಉದ್ದೇಶದಿಂದ ಇದೇ ಮೊದಲ ಬಾರಿಗೆ ತಾಲೂಕು ಕಚೇರಿಯಲ್ಲಿ ಆಯೋಜಿಸಲಾದ ಫೋನ್ ಇನ್ ಕಾರ್ಯಕ್ರಮಕ್ಕೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರನ್ನು ತಲುಪುವ ಉದ್ದೇಶದಿಂದ ಪ್ರತಿ ತಿಂಗಳ ಮೂರನೇ ಶನಿವಾರ ಕಚೇರಿಯಲ್ಲಿ ಫೋನ್ ಇನ್ ಕಾರ್ಯಕ್ರಮ ಮಾಡುವುದು ಸೇರಿದಂತೆ ತಂತ್ರಜ್ಞಾನ ಬಳಸಿಕೊಂಡು ವಿನೂತನ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ನಾಗರಿಕರ ಸೇವೆ ಮಾಡಲು ಉತ್ಸುಕನಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಗ್ರೇಡ್ ೨ ತಹಶೀಲ್ದಾರ್ ವೈ.ಎಲ್.ಹನುಮಂತರಾವ್, ಶಿರಸ್ತೇದಾರ್ ಕೆ.ಎನ್.ಮಂಜುನಾಥ್, ಕಸಬಾ ರಾಜಸ್ವ ನಿರೀಕ್ಷಕ ವಿಶ್ವನಾಥ್, ಜಂಗಮಕೋಟೆ ರಾಜಸ್ವ ನಿರೀಕ್ಷಕ ಸುಪ್ರೀತ್, ಬಶೆಟ್ಟಹಳ್ಳಿ ರಾಜಸ್ವ ನಿರೀಕ್ಷಕ ನರಸಿಂಹಯ್ಯ, ಗ್ರಾಮಲೆಕ್ಕಿಗ ಪ್ರೀತಂ ಹಾಜರಿದ್ದರು.

error: Content is protected !!