ಜಾತಿ, ಧರ್ಮದ ಚೌಕಟ್ಟಿನಿಂದ ಹೊರಗೆ ಬಂದು ನಾವು ಬೆಳೆಯಬೇಕಾಗಿದೆ. ಯಾರಿಗೆ ವಿಚಾರ ಶಕ್ತಿ ಕಡಿಮೆ ಇರುತ್ತದೆ ಆ ವ್ಯಕ್ತಿಗಳು ಜಾತಿ, ಅಸ್ಪಶೃತೆಯನ್ನು ಆಚರಿಸಿಕೊಂಡು ಬರುತ್ತಾರೆ. ವಿಚಾರ ಶಕ್ತಿಯನ್ನು ದೊಡ್ಡದಾಗಿ ಬೆಳೆಸಿಕೊಂಡವರು, ಜಾತಿ ಚೌಕಟ್ಟನ್ನು ಮೀರಿ ಬೆಳೆಯುತ್ತಾರೆ. ಪ್ರತಿಭೆಗೆ ಯಾವುದೇ ಜಾತಿ, ಅಂತಸ್ತು, ಅಸ್ಪಶೃತೆ ಅಡ್ಡ ಬರುವುದಿಲ್ಲ. ಈ ವ್ಯವಸ್ಥೆಯನ್ನು ಮೀರಿ ಬೆಳೆದವರು ಡಾ.ಬಿ.ಆರ್.ಅಂಬೇಡ್ಕರ್ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಗ್ರಾಮದಲ್ಲಿ ಗುರುವಾರ ಬಿಜೆಪಿ ಪಕ್ಷದಿಂದ ನಡೆದ ಡಾ. ಬಿ.ಆರ್.ಅಂಬೇಡ್ಕರ್ 125ನೇ ಜನ್ಮ ವರ್ಷಾಚರಣೆ ಹಾಗೂ ಸಾಮರಸ್ಯ ಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಸಮಾನತೆ, ಜಾತಿ ವ್ಯವಸ್ಥೆ, ಅಸ್ಪಶೃತೆಯನ್ನು ಮೆಟ್ಟಿ ನಿಂತು, ಸಾಮಾಜಿಕ ಸಮಾನತೆಗಾಗಿ ಹೋರಾಡಿದರು. ಅವರು ರಚಿಸಿದ ಸಂವಿಧಾನ ದೇಶಕ್ಕೆ ಬಹುದೊಡ್ಡ ಕೊಡುಗೆಯಾಗಿದೆ. ಇಂತಹ ಮಹಾನುಭಾವರ ವಿಚಾರಗಳನ್ನು ಅಳವಡಿಸಿಕೊಂಡು ನಾವು ನಡೆಯಬೇಕೆಂದು ಹೇಳಿದರು.
ಚೀಮಂಗಲ ಗ್ರಾಮದ ದಲಿತರ ಕೇರಿಯಲ್ಲಿ ಆಂಜಿನಪ್ಪ ಎಂಬುವರ ಮನೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಹಭೋಜನವನ್ನು ನಡೆಸಿದರು. ಈ ಸಂದರ್ಭದಲ್ಲಿ ದಲಿತರ ಕೇರಿಯಲ್ಲಿ ರಂಗೋಲಿ ಸ್ಪರ್ಧೆಯನ್ನು ನಡೆಸಿ ಬಹುಮಾನಗಳನ್ನು ವಿತರಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮುನಿರಾಜು, ಸುರೇಶ್, ಶ್ರೀರಾಮರೆಡ್ಡಿ, ಮುನಿವೆಂಕಟಪ್ಪ, ಭಾಸ್ಕರ್, ದಾಮೋದರ್, ಅಶ್ವಕ್ ಅಹ್ಮದ್, ರವಿಕುಮಾರ್, ಪುರುಷೋತ್ತಮ್, ರಾಜಣ್ಣ, ಮಂಜುಳಮ್ಮ, ಸುಜಾತಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.